ಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ ಶಂಕರ್ ಮಿಶ್ರಾನನ್ನು ಬಂಧಿಸಿದ ದಿಲ್ಲಿ ಪೊಲೀಸರು
ಹೊಸದಿಲ್ಲಿ: ಇತ್ತೀಚೆಗೆ ಏರ್ ಇಂಡಿಯಾ ವಿಮಾನದೊಳಗೆ ಕುಡಿತದ ನಶೆಯಲ್ಲಿ ವೃದ್ಧೆಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಮುಂಬೈ ವ್ಯಕ್ತಿ ಶಂಕರ್ ಮಿಶ್ರಾನನ್ನು ಶುಕ್ರವಾರ ತಡರಾತ್ರಿ ದಿಲ್ಲಿ ಪೊಲೀಸರು ಬೆಂಗಳೂರಿನಿಂದ ಬಂಧಿಸಿ ರಾಷ್ಟ್ರ ರಾಜಧಾನಿಗೆ ಕರೆತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಿಶ್ರಾ ಪರಾರಿಯಾಗಿದ್ದು, ಆತನ ಪತ್ತೆಗೆ ಲುಕ್ಔಟ್ ನೋಟಿಸ್ ಅಥವಾ ಏರ್ಪೋರ್ಟ್ ಅಲರ್ಟ ನೀಡಲಾಗಿತ್ತು.
ಶಂಕರ್ ಮಿಶ್ರಾ ಇರುವಿಕೆಯ ಬಗ್ಗೆ ಕೆಲವು 'ಸ್ಪಷ್ಟ' ಸುಳಿವುಗಳನ್ನು ಪಡೆದ ನಂತರ ದಿಲ್ಲಿ ಪೊಲೀಸರು ಆತನನ್ನು ಹಿಡಿಯಲು ಕರ್ನಾಟಕದ ಬೆಂಗಳೂರಿನಲ್ಲಿ ತನ್ನ ತಂಡವನ್ನು ನಿಯೋಜಿಸಿದ್ದರು.
ತನ್ನ ಫೋನ್ ಸ್ವಿಚ್ ಆಫ್ ಮಾಡಿದ್ದ ಮಿಶ್ರಾ ತನ್ನ ಸ್ನೇಹಿತರೊಂದಿಗೆ ಸಂವಹನ ನಡೆಸಲು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಬಳಸುತ್ತಿದ್ದ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.
34 ವರ್ಷದ ಮಿಶ್ರಾ ಅವರು ಕನಿಷ್ಠ ಒಂದು ಸ್ಥಳದಲ್ಲಿ ತಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಅನ್ನು ಬಳಸಿದ್ದ ಎಂದು ಮೂಲಗಳು ತಿಳಿಸಿವೆ.
ನವೆಂಬರ್ 26 ರಂದು ನ್ಯೂಯಾರ್ಕ್-ದಿಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಶಂಕರ್ ಮಿಶ್ರಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಆರೋಪ ಕಳವಳಕಾರಿಯಾಗಿದೆ ಎಂದಿರುವ ಮಿಶ್ರಾ ಕೆಲಸ ಮಾಡುತ್ತಿದ್ದ ಅಮೆರಿಕದ ಕಂಪನಿಯು ಆತನನ್ನು ಕೆಲಸದಿಂದ ವಜಾಗೊಳಿಸಿದೆ.