ಎಲ್ಲೆಲ್ಲೂ ಸಿಟ್ಟು, ಭಯ ಮತ್ತು ಕಣ್ಣೀರು: ಭೂಕುಸಿತದಿಂದ ನೆಲಸಮವನ್ನು ಎದುರಿಸುತ್ತಿರುವ ಜೋಶಿಮಠ ನಿವಾಸಿಗಳು
ಡೆಹ್ರಾಡೂನ್, ಜ.10: ಪರಿಸರಸೂಕ್ಷ್ಮ ಪಟ್ಟಣವಾಗಿರುವ ಉತ್ತಾರಾಖಂಡದ ಜೋಶಿಮಠದಲ್ಲಿ ನಿರಂತರ ಭೂಕುಸಿತಗಳಿಂದಾಗಿ ಹೆಚ್ಚುತ್ತಿರುವ ಕಳವಳಗಳ ನಡುವೆಯೇ ಸ್ಥಳೀಯರು ತಾವು ದಶಕಗಳಿಂದಲೂ ಬಾಳಿ ಬದುಕಿದ್ದ ಮನೆಗಳನ್ನು ತೊರೆಯುವ ಅನಿವಾರ್ಯತೆಗೆ ಸಿಲುಕಿದ್ದಾರೆ.
ಅಧಿಕಾರಿಗಳು ನೆಲಸಮ ಕಾರ್ಯಾಚರಣೆಗೆ ಸಜ್ಜಾಗುತ್ತಿದ್ದು, ಪಟ್ಟಣವು ಭಾವನಾತ್ಮಕ ಸನ್ನಿವೇಶಗಳಿಗೆ ಸಾಕ್ಷಿಯಾಗುತ್ತಿದೆ. ಭೂಕುಸಿತಗಳನ್ನು ಜೋಶಿಮಠದಲ್ಲಿ ಮತ್ತು ಸುತ್ತುಮುತ್ತ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳೊಂದಿಗೆ ತಳುಕು ಹಾಕಲಾಗಿದೆ. ಜೋಶಿಮಠ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸರಣಿ ಸಭೆಗಳನ್ನು ನಡೆಸುತ್ತಿರುವ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿಯವರು, ಜನರ ಸುರಕ್ಷತೆಯು ಸರಕಾರದ ಅತ್ಯುನ್ನತ ಆದ್ಯತೆಯಾಗಿದೆ ಎಂದು ಒತ್ತಿ ಹೇಳಿದ್ದಾರೆ.
ಮಂಗಳವಾರ ಸರಕಾರಿ ಸ್ವಾಮ್ಯದ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮ (ಎನ್ಟಿಪಿಸಿ)ದ ವಿರುದ್ಧ ಜೋಶಿಮಠದಲ್ಲಿ ಪ್ರತಿಭಟನೆಗಳು ನಡೆದಿದ್ದು,ಅದರ ತಪೋವನ-ವಿಷ್ಣುಗಡ ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ನಿರ್ಮಾಣ ಕಾಮಗಾರಿಗಳು ಪರಿಸ್ಥಿತಿಯನ್ನು ಉಲ್ಬಣಿಸಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ದೇಶದ ಅತ್ಯಂತ ದೊಡ್ಡ ವಿದ್ಯುತ್ ಉತ್ಪಾದಕನಾಗಿರುವ ಎನ್ಟಿಪಿಸಿ,ಜೋಶಿಮಠದಲ್ಲಿನ ಬಿರುಕುಗಳಿಗೆ ತನ್ನ ಸುರಂಗ ನಿರ್ಮಾಣ ಮತ್ತು ಇತರ ಕಾಮಗಾರಿಗಳನ್ನು ದೂಷಿಸುವಂತಿಲ್ಲ. ಸುರಂಗವು ಜೋಶಿಮಠದ ನೆಲದಡಿಯಿಂದ ಹಾದುಹೋಗಿಲ್ಲ ಎಂದು ತನ್ನ ಜ.5ರ ಹೇಳಿಕೆಯಲ್ಲಿ ಪ್ರತಿಪಾದಿಸಿತ್ತು.
ಅಂದಾಜು 20,000 ಜನಸಂಖ್ಯೆಯನ್ನು ಹೊಂದಿರುವ ಈ ಪುಟ್ಟ ಪಟ್ಟಣದಲ್ಲಿಯ ಕನಿಷ್ಠ 678 ಮನೆಗಳನ್ನು ಅಸುರಕ್ಷಿತವೆಂದು ಈವರೆಗೆ ಗುರುತಿಸಲಾಗಿದೆ. ಜಿಲ್ಲಾಡಳಿತವು ಇಂತಹ ಮನೆಗಳಿಗೆ ಕೆಂಪುಬಣ್ಣದ ಗುರುತುಗಳನ್ನು ಹಾಕುತ್ತಿದೆ.
ಹೋಟೆಲ್ ಮಲಾರಿ ಇನ್ ಮತ್ತು ಹೋಟೆಲ್ ಮೌಂಟ್ ವ್ಯೂಗಳನ್ನೂ ಗುರುತಿಸಲಾಗಿದ್ದು,ಈ ಪೈಕಿ ಮೊದಲ ಹೋಟೆಲ್ನ್ನು ಮಂಗಳವಾರ ಹಂತಹಂತವಾಗಿ ನೆಲಸಮಗೊಳಿಸಲಾಗಿದೆ.
ಪಟ್ಟಣದಲ್ಲಿಯ ಬಿರುಕು ಮೂಡಿರುವ ಮನೆಗಳು ಮತ್ತು ವಾಲಿ ನಿಂತಿರುವ ಕಟ್ಟಡಗಳ ಆಘಾತಕಾರಿ ದೃಶ್ಯಗಳು ಹೊರಹೊಮ್ಮುತ್ತಿವೆ. ಯಾತ್ರಿಕರು ಮಾತ್ರವಲ್ಲ,ಪ್ರವಾಸಿಗಳು ಮತ್ತು ಚಾರಣಿಗರೂ ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ.
ಈ ನಡುವೆ,ಪ್ರಧಾನಿ ನರೇಂದ್ರ ಮೋದಿ ಸಂಕಷ್ಟ ಸ್ಥಿತಿಯ ಕುರಿತು ನಿಯಮಿತವಾಗಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಧಾಮಿ ತಿಳಿಸಿದ್ದಾರೆ.
ಪ್ರದೇಶದಲ್ಲಿಯ ಎಲ್ಲ ಒಂಭತ್ತು ಜಿಲ್ಲೆಗಳನ್ನು ಅಸುರಕ್ಷಿತ ಎಂದು ಸರಕಾರವು ರವಿವಾರ ಘೋಷಿಸಿತ್ತು. ಅದೇ ದಿನ ಪ್ರಧಾನಿ ಕಚೇರಿಯೂ ಪರಿಸ್ಥಿತಿಯ ಪುನರ್ಪರಿಶೀಲನೆಗೆ ಸಭೆಯನ್ನು ನಡೆಸಿತ್ತು. ಹಾಲಿ ಬೆಳವಣಿಗೆಯನ್ನು ಪ್ರತಿಕೂಲ ಹವಾಮಾನದ ಘಟನೆಗಳು ಮತ್ತು ಕ್ಷಿಪ್ರ ನಿರ್ಮಾಣ ಕಾಮಗಾರಿಗಳೊಂದಿಗೆ ತಳುಕು ಹಾಕಿರುವ ತಜ್ಞರು,ಈ ಎಲ್ಲ ವರ್ಷಗಳಲ್ಲಿ ಪರಿಸ್ಥಿತಿಯು ತೀವ್ರವಾಗಿ ಬಿಗಡಾಯಿಸಿದೆ ಎಂದು ಹೇಳಿದ್ದಾರೆ.
ಹೆಚ್ಚುತ್ತಿರುವ ಭೀತಿಯ ನಡುವೆಯೇ ಜೋಶಿಮಠ ಭೂಕುಸಿತವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೂ ಹತ್ತಿದೆ.