ತುನಿಶಾ ಶರ್ಮ ಸಾವು: ನಟ ಶೀಝನ್ ಖಾನ್ಗೆ ಜಾಮೀನು ನಿರಾಕರಣೆ
ಮುಂಬೈ, ಜ. 14: ಸಹ ನಟಿ ತುನಿಶಾ ಶರ್ಮ ಆತ್ಮಹತ್ಯೆಗೈಯಲು ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನಟ ಶೀಝನ್ ಖಾನ್ಗೆ ಮಹಾರಾಷ್ಟ್ರದ ನ್ಯಾಯಾಲಯವೊಂದು ಶುಕ್ರವಾರ ಜಾಮೀನು ನಿರಾಕರಿಸಿದೆ.
20 ವರ್ಷದ ಶರ್ಮ ಟೆಲಿವಿಶನ್ ಕಾರ್ಯಕ್ರಮವೊಂದರ ಶೂಟಿಂಗ್ ಸೆಟ್ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಒಂದು ದಿನದ ಬಳಿಕ, ಅಂದರೆ ಡಿಸೆಂಬರ್ 25ರಂದು ಖಾನ್ರನ್ನು ಬಂಧಿಸಲಾಗಿತ್ತು. ಆ ಶೂಟಿಂಗ್ನಲ್ಲಿ ಇಬ್ಬರೂ ನಟರು ಕೆಲಸ ಮಾಡುತ್ತಿದ್ದರು.
ಶರ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸೆಟ್ನಲ್ಲಿದ್ದವರು ಹೇಳಿದ್ದಾರಾದರೂ, ಇತರ ಸಾಧ್ಯತೆಗಳ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಖಾನ್ ಬಂಧನದ ವೇಳೆ ಹೇಳಿದ್ದರು.
ಶುಕ್ರವಾರ ಖಾನ್ಗೆ ಜಾಮೀನು ನೀಡಲು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆರ್.ಡಿ. ದೇಶಪಾಂಡೆ ನಿರಾಕರಿಸಿದರು. ಖಾನ್ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸೆಶನ್ಸ್ ನ್ಯಾಯಾಧೀಶರ ತೀರ್ಪನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗುವುದು ಎಂದು ಅವರ ವಕೀಲರು ಹೇಳಿದರು.
Next Story