ಬೆಂಗಳೂರು ಪ್ರಕರಣದ ಬೆನ್ನಲ್ಲೇ 35 ಪ್ರಯಾಣಿಕರನ್ನು ಬಿಟ್ಟು ಸಿಂಗಾಪುರಕ್ಕೆ ಹಾರಿದ ಮತ್ತೊಂದು ವಿಮಾನ
ಅಮೃತಸರ: ಅಮೃತಸರ ವಿಮಾನ ನಿಲ್ದಾಣದಲ್ಲಿ 35 ಪ್ರಯಾಣಿಕರನ್ನು ಬಿಟ್ಟು ಸಿಂಗಾಪುರಕ್ಕೆ ತೆರಳಿರುವ ವಿಮಾನವೊಂದು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಟೇಕ್ ಆಫ್ ಆಗಿದ್ದು ಹೇಗೆ ಎಂಬ ಬಗ್ಗೆ ತನಿಖೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಆದೇಶಿಸಿದೆ.
ಅಮೃತಸರ ವಿಮಾನ ನಿಲ್ದಾಣದಿಂದ ಬುಧವಾರ ಸಂಜೆ 7.55ಕ್ಕೆ ಹೊರಡಬೇಕಿದ್ದ ಸ್ಕೂಟ್ ಏರ್ಲೈನ್ ವಿಮಾನವು ಅದರ ನಿರ್ಗಮನ ಸಮಯಕ್ಕಿಂತ ಗಂಟೆಗಳ ಮೊದಲು ಮಧ್ಯಾಹ್ನ 3 ಗಂಟೆಗೆ ಟೇಕ್ ಆಫ್ ಆದ ನಂತರ ವಾಯುಯಾನ ನಿಯಂತ್ರಣ ಪ್ರಾಧಿಕಾರವು ತನಿಖೆಯನ್ನು ಆರಂಭಿಸಿತು.
ಸಿಂಗಾಪುರ ವಿಮಾನವನ್ನು ತಪ್ಪಿಸಿಕೊಂಡ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಗದ್ದಲ ಉಂಟು ಮಾಡಿದರು ಹಾಗೂ ಪ್ರತಿಭಟನೆಯನ್ನು ನಡೆಸಿದರು. ಅವರು ವಿಮಾನ ನಿಲ್ದಾಣದಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ತಮ್ಮ ದೂರನ್ನು ದಾಖಲಿಸಿದ್ದಾರೆ.
ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನಯಾನ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಪ್ರಯಾಣಿಕರಿಗೆ ಇ-ಮೇಲ್ ಮೂಲಕ ಹಾರಾಟದ ಸಮಯದಲ್ಲಿ ಬದಲಾವಣೆಯ ಬಗ್ಗೆ ತಿಳಿಸಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
"ಸುಮಾರು 280 ಪ್ರಯಾಣಿಕರು ಸಿಂಗಾಪುರಕ್ಕೆ ಪ್ರಯಾಣಿಸಬೇಕಾಗಿತ್ತು. ಆದರೆ 253 ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ್ದು, ಇದರಿಂದಾಗಿ 30 ಕ್ಕೂ ಹೆಚ್ಚು ಪ್ರಯಾಣಿಕರು ಉಳಿದಿದ್ದಾರೆ" ಎಂದು ಅಮೃತಸರ ವಿಮಾನ ನಿಲ್ದಾಣದ ನಿರ್ದೇಶಕ ANI ಗೆ ತಿಳಿಸಿದ್ದಾರೆ.
ಏರ್ಲೈನ್ಸ್ ಪ್ರಕಾರ, ಎಲ್ಲಾ ಪ್ರಯಾಣಿಕರಿಗೆ ಇಮೇಲ್ ಮೂಲಕ ಸಮಯದ ಬದಲಾವಣೆಯ ಬಗ್ಗೆ ತಿಳಿಸಲಾಗಿದೆ
ಒಂದು ಗುಂಪಿನಲ್ಲಿ 30 ಜನರಿಗೆ ಟಿಕೆಟ್ಗಳನ್ನು ಕಾಯ್ದಿರಿಸಿದ ಟ್ರಾವೆಲ್ ಏಜೆಂಟ್, ವಿಮಾನದ ಸಮಯದಲ್ಲಿ ಬದಲಾವಣೆಯ ಬಗ್ಗೆ ಅವರಿಗೆ (ಪ್ರಯಾಣಿಕರಿಗೆ) ತಿಳಿಸಲಿಲ್ಲ, ಇದರಿಂದಾಗಿ ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣಕ್ಕೆ ಬಂದ ಪ್ರಯಾಣಿಕರೊಂದಿಗೆ ವಿಮಾನವು ಹಾರಾಟ ನಡೆಸಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ANI ಗೆ ತಿಳಿಸಿದ್ದಾರೆ.
ಇದೇ ರೀತಿಯ ಘಟನೆ ಇತ್ತೀಚೆಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ವರದಿಯಾಗಿತ್ತು. ಶಟಲ್ ಬಸ್ ಮೂಲಕ ವಿಮಾನಕ್ಕೆ ತೆರಳುತ್ತಿದ್ದ 55 ಪ್ರಯಾಣಿಕರನ್ನು ಬಿಟ್ಟು ದಿಲ್ಲಿಗೆ ಹೋಗುವ ಗೋ ಫಸ್ಟ್ ವಿಮಾನ ಟೇಕ್ ಆಫ್ ಆಗಿತ್ತು.