-

ಹೈದರಾಬಾದ್ ವಿವಿಯಲ್ಲಿ ಬಿಬಿಸಿಯ ಮೋದಿ ಸಾಕ್ಷಚಿತ್ರ ಪ್ರದರ್ಶನ ಎಬಿವಿಪಿ ದೂರು: ವರದಿ ಕೇಳಿದ ಅಧಿಕಾರಿಗಳು

-

ಹೈದರಾಬಾದ್, ಜ. 24: 2002ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯ ಪಾತ್ರವನ್ನು ಮರುಪರಿಶೀಲಿಸುವ ಬಿಬಿಸಿ ಸಾಕ್ಷಚಿತ್ರವನ್ನು ಶನಿವಾರ ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಪ್ರದರ್ಶಿಸಲಾಗಿದೆ. ಇದರ ಬೆನ್ನಿಗೇ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಸಂಬಂಧಪಟ್ಟವರಿಂದ ವರದಿ ಕೇಳಿದ್ದಾರೆ.

‘ಇಂಡಿಯಾ: ದ ಮೋದಿ ಕ್ವೆಶ್ಚನ್’ ಎಂಬ ಹೆಸರಿನ ಸಾಕ್ಷಚಿತ್ರವನ್ನು ವಿಶ್ವವಿದ್ಯಾನಿಲಯದಲ್ಲಿ ಪ್ರದರ್ಶಿಸಿರುವ ಬಗ್ಗೆ ಸಂಸ್ಥೆಯ ಆಡಳಿತಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ವಿದ್ಯಾರ್ಥಿ ಘಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷದ್ (ಎಬಿವಿಪಿ) ದೂರು ಸಲ್ಲಿಸಿದೆ.

ಎರಡು ಭಾಗಗಳ ಸಾಕ್ಷಚಿತ್ರದ ಮೊದಲ ಭಾಗವನ್ನು ಬಿಬಿಸಿಯು ಜನವರಿ 17ರಂದು ಪ್ರಸಾರಿಸಿದೆ.

‘‘ಗಲಭೆಗಳು ನಡೆದಾಗ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಮೋದಿ ರಾಜ್ಯದಲ್ಲಿ ಶಿಕ್ಷೆಯ ಭಯವಿರದ ವಾತಾವರಣವೊಂದನ್ನು ಸೃಷ್ಟಿಸಿದ್ದರು. ಅದರಿಂದಾಗಿಯೇ ಮುಸ್ಲಿಮರ ವಿರುದ್ಧ ಹಿಂಸಾಚಾರ ನಡೆಯಿತು’’ ಎಂಬುದಾಗಿ ಬ್ರಿಟಿಶ್ ಸರಕಾರ ಕಳಹಿಸಿದ್ದ ತಂಡವೊಂದು ಆರೋಪಿಸಿದೆ ಎಂಬುದಾಗಿ ಸಾಕ್ಷಚಿತ್ರದ ಮೊದಲ ಭಾಗ ಆರೋಪಿಸಿದೆ.

ಹಿಂಸಾಚಾರದ ಬಗ್ಗೆ ಬ್ರಿಟನ್ ಸರಕಾರ ಸಿದ್ಧಪಡಿಸಿದ್ದ ವರದಿಯೊಂದನ್ನೂ ಈ ಸಾಕ್ಷಚಿತ್ರವು ಬಹಿರಂಗಪಡಿಸಿದೆ. ‘‘ಗುಜರಾತ್ ಗಲಭೆಯು ಜನಾಂಗೀಯ ಹತ್ಯೆಯ ಸಕಲ ಗುಣಲಕ್ಷಣಗಳನ್ನೂ ಹೊಂದಿತ್ತು’’ ಎಂಬುದಾಗಿ ಆ ವರದಿ ಹೇಳುತ್ತದೆ.

ಸಾಕ್ಷಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿಲ್ಲ. ಆದರೆ ಅದನ್ನು ವಿವಿಧ ಯೂಟ್ಯೂಬ್ ಚಾನೆಲ್ಗಳಲ್ಲಿ ಹಾಕಲಾಗಿತ್ತು ಹಾಗೂ ಟ್ವಿಟರ್ ಮೂಲಕ ವ್ಯಾಪಕವಾಗಿ ಪ್ರಸಾರಿಸಲಾಗಿತ್ತು.

ಶುಕ್ರವಾರ, ಭಾರತ ಸರಕಾರವು ಮಾಹಿತಿ ತಂತ್ರಜ್ಞಾನ ನಿಯಮಗಳು, 2021ರ ಅಡಿಯಲ್ಲಿ ಲಭ್ಯವಾಗುವ ತುರ್ತು ಅಧಿಕಾರಗಳನ್ನು ಬಳಸಿಕೊಂಡು, ಸಾಕ್ಷಚಿತ್ರವನ್ನು ತೆಗೆದುಹಾಕುವಂತೆ ಯೂಟ್ಯೂಬ್ ಮತ್ತು ಟ್ವಿಟರ್ಗೆ ನಿರ್ದೇಶನಗಳನ್ನು ನೀಡಿತ್ತು.

ಸಾಕ್ಷಚಿತ್ರವನ್ನು ತಡೆಹಿಡಿಯುವ ಕೇಂದ್ರ ಸರಕಾರದ ನಿರ್ಧಾರವನ್ನು ಉಲ್ಲೇಖಿಸಿರುವ ಎಬಿವಿಪಿ, ಸಾಕ್ಷಚಿತ್ರವನ್ನು ಪ್ರದರ್ಶಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ವಿಶ್ವವಿದ್ಯಾನಿಲಯ ಅಧಿಕಾರಿಗಳನ್ನು ಕೋರಿದೆ.

ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ಸುಮಾರು 70-80 ವಿದ್ಯಾರ್ಥಿಗಳು ಸಾಕ್ಷಚಿತ್ರವನ್ನು ವೀಕ್ಷಿಸಿದ್ದಾರೆ ಎನ್ನಲಾಗಿದೆ.

ಅನುಮತಿಯಿಲ್ಲದೆ ವಿಶ್ವವಿದ್ಯಾನಿಲಯ ಆವರಣದೊಳಗೆ ಸಾಕ್ಷಚಿತ್ರವನ್ನು ವೀಕ್ಷಿಸಲಾಗಿದೆ ಎಂದು ಎಬಿವಿಪಿ ವಿದ್ಯಾರ್ಥಿ ನಾಯಕರೊಬ್ಬರು ಪಿಟಿಐಗೆ ಹೇಳಿದ್ದಾರೆ.

ವಿಶ್ವವಿದ್ಯಾನಿಲಯ ಆಡಳಿತವು ಕ್ಯಾಂಪಸ್ ಭದ್ರತಾ ಇಲಾಖೆಯಿಂದ ವಿವರವಾದ ವರದಿಯನ್ನು ಕೇಳಿದೆ ಎಂದು ವಕ್ತಾರರೊಬ್ಬರು ಹೇಳಿದರು.

ಚಿತ್ರ ವೀಕ್ಷಣೆ ಶಾಂತಿಯುತ: ಅನಗತ್ಯ ಗೊಂದಲ; ಹೈದರಾಬಾದ್ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘ

ಸಾಕ್ಷಚಿತ್ರ ವೀಕ್ಷಣೆ ವಿಚಾರದಲ್ಲಿ ಕ್ಯಾಂಪಸ್ನ ಹೊರಗಿನವರನ್ನು ತಪ್ಪುದಾರಿಗೆಳೆಯಲಾಗುತ್ತಿದೆ ಎಂದು ಹೈದರಾಬಾದ್ ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಿ ಸ್ವಾಮಿ ಹೇಳಿದ್ದಾರೆ. ಸಾಕ್ಷಚಿತ್ರ ವೀಕ್ಷಣೆಯು ಶಾಂತಿಯುತವಾಗಿ ನಡೆದಿದ್ದು, ಈ ವಿಷಯಕ್ಕೆ ಅನಗತ್ಯವಾಗಿ ಅಧಿಕ ಮಹತ್ವ ಕೊಡಲಾಗುತ್ತಿದೆ ಎಂದು ಅವರು ಹೇಳಿದರು.

ಅದೇ ವೇಳೆ, ಎಬಿವಿಪಿಯು ಭಾರತೀಯ ಜನತಾ ಪಕ್ಷದ ಏಜಂಟ್ನಂತೆ ವರ್ತಿಸುತ್ತಿದೆ ಎಂಬುದಾಗಿ ಸಂಘದ ಅಧ್ಯಕ್ಷ ಅಭಿಶೇಕ್ ನಂದನ್ ಆರೋಪಿಸಿದರು.

‘‘ಅದು ಯಾವುದೇ ನಿಷೇಧಿತ ಸಂಘಟನೆಯೊಂದು ನಿರ್ಮಿಸಿದ ಚಿತ್ರವಲ್ಲ. ಜಾಗತಿಕ ಜಾಲ ಹೊಂದಿರುವ ಮಾಧ್ಯಮ ಸಂಸ್ಥೆಯೊಂದು ಆ ಚಿತ್ರವನ್ನು ನಿರ್ಮಿಸಿದೆ’’ ಎಂದು ಅವರು ಹೇಳಿದರು. ‘‘ಅದನ್ನು ಸರಕಾರವಾಗಲಿ, ಯಾವುದೇ ನ್ಯಾಯಾಲಯವಾಗಲಿ ನಿಷೇಧಿಸಿಲ್ಲ. ವಿಶ್ವವಿದ್ಯಾನಿಲಯ ಕ್ಯಾಂಪಸ್ಗಳಲ್ಲಿ ಚರ್ಚಾ ಸಂಸ್ಕೃತಿಗೆ ಪ್ರೋತ್ಸಾಹ ಸಿಗಬೇಕು ಎಂಬುದಾಗಿ ನಾವು ನಂಬಿದ್ದೇವೆ’’ ಎಂದು ಅವರು ಹೇಳಿದರು.

ಕೇರಳದಲ್ಲೂ ಪ್ರದರ್ಶನ: 3 ರಾಜಕೀಯ ಗುಂಪುಗಳಿಂದ ಘೋಷಣೆ

ಈ ನಡುವೆ, ಗುಜರಾತ್ ಗಲಭೆಗೆ ಸಂಬಂಧಿಸಿದ ಬಿಬಿಸಿ ಸಾಕ್ಷಚಿತ್ರವನ್ನು ಕೇರಳದಲ್ಲೂ ಪ್ರದರ್ಶಿಸುವುದಾಗಿ ಕೇರಳದ ಮೂರು ರಾಜಕೀಯ ಗುಂಪುಗಳು ಮಂಗಳವಾರ ಘೋಷಿಸಿವೆ ಎಂದು ಪಿಟಿಐ ವರದಿ ಮಾಡಿದೆ.

ರಾಜ್ಯಾದ್ಯಂತ 200 ಸ್ಥಳಗಳಲ್ಲಿ ಸಾಕ್ಷಚಿತ್ರವನ್ನು ಪ್ರದರ್ಶಿಸುವುದಾಗಿ ಸಿಪಿಎಮ್ ಪಕ್ಷದ ಯುವ ಘಟಕವಾಗಿರುವ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯ (ಡಿವೈಎಫ್ಐ) ಫೇಸ್ಬುಕ್ನಲ್ಲಿ ಘೋಷಿಸಿದೆ.

ಇದೇ ರೀತಿಯ ಘೋಷಣೆಗಳನ್ನು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಮತ್ತು ಯುವ ಕಾಂಗ್ರೆಸ್ ಕೂಡ ಹೊರಡಿಸಿವೆ.

‘‘ಜನಾಂಗೀಯ ಹತ್ಯಾಕಾಂಡದ ಪಳೆಯುಳಿಕೆಗಳನ್ನು ಅಧಿಕಾರದಲ್ಲಿರುವವರು ಅಡಗಿಸಿಡಲು ಸಾಧ್ಯವಿಲ್ಲ. ಬಿಬಿಸಿ ಸಾಕ್ಷಚಿತ್ರವನ್ನು ರಾಜ್ಯದಲ್ಲಿ ಪ್ರದರ್ಶಿಸಲಾಗುವುದು’’ ಎಂದು ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷ ಶಫಿ ಪರಂಬಿಲ್ ಫೇಸ್ಬುಕ್ನಲ್ಲಿ ಬರೆದಿದ್ದಾರೆ.

ಈ ವಿಷಯದಲ್ಲಿ ತುರ್ತಾಗಿ ಮಧ್ಯಪ್ರವೇಶಿಸಿ ಸಾಕ್ಷಚಿತ್ರ ಪ್ರದರ್ಶನವನ್ನು ನಿಲ್ಲಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ ಬಿಜೆಪಿ ಮನವಿ ಮಾಡಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top