ನನ್ನ ಮೇಲೆ ದಾಳಿ ನಡೆಯಬಹುದು ಎಂದು ಎಚ್ಚರಿಕೆ ನೀಡಲಾಗಿತ್ತು, ಕಾಶ್ಮೀರದ ಜನರು ಪ್ರೀತಿ ತೋರಿಸಿದರು: ರಾಹುಲ್ ಗಾಂಧಿ
ಹೊಸದಿಲ್ಲಿ: ಕಾಶ್ಮೀರದಲ್ಲಿ ನನ್ನ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿತ್ತು ಆದರೆ, "ಇಲ್ಲಿನ ಜನರು ನನಗೆ ಹ್ಯಾಂಡ್ ಗ್ರೆನೇಡ್ಗಳನ್ನು ನೀಡಲಿಲ್ಲ ಬದಲಿಗೆ ಪ್ರೀತಿ ತುಂಬಿದ್ದಾರೆ" ಎಂದು ಸೋಮವಾರ ನಡೆದ ಭಾರತ್ ಜೋಡೊ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು.
ಜಮ್ಮು ಹಾಗೂ ಕಾಶ್ಮೀರದಲ್ಲಿ ಬಿಜೆಪಿ ಸದಸ್ಯರಿಗೆ ಈ ರೀತಿ ನಡೆಯಲು ಸಾಧ್ಯವಿಲ್ಲ. ಏಕೆಂದರೆ ಅವರು ಭಯಭೀತರಾಗಿದ್ದಾರೆ ಎಂದು ಅವರು ಹೇಳಿದರು.
ತನ್ನ ತಂದೆ ರಾಜೀವ್ ಗಾಂಧಿ ಅವರ ಹತ್ಯೆಯನ್ನು ನೆನಪಿಸಿಕೊಂಡ ರಾಹುಲ್, ಪುಲ್ವಾಮಾ ದಾಳಿಯಲ್ಲಿ ತಮ್ಮ ಸಂಬಂಧಿಕರನ್ನು ಕಳೆದುಕೊಂಡವರ ನೋವನ್ನು ನಾನು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದರು. ಈ ಸಂದರ್ಭವನ್ನು ಸ್ಮರಿಸಲು ಅವರು ಸಾಂಪ್ರದಾಯಿಕ ಕಾಶ್ಮೀರಿ ಫೆರಾನ್ ಧರಿಸಿದ್ದರು.
ಶ್ರೀನಗರದಲ್ಲಿ ಸೋಮವಾರ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, "ನಾನು ಯಾತ್ರೆಯನ್ನು ನನಗಾಗಲಿ ಅಥವಾ ಕಾಂಗ್ರೆಸ್ಗಾಗಿ ಮಾಡಿಲ್ಲ, ದೇಶದ ಅಡಿಪಾಯವನ್ನು ನಾಶ ಮಾಡುವ ಸಿದ್ಧಾಂತದ ವಿರುದ್ಧ ನಿಲ್ಲುವ ಗುರಿ ನನ್ನದ್ದಾಗಿತ್ತು" ಎಂದು ಹೇಳಿದರು.
ಶ್ರೀನಗರದಲ್ಲಿ ಹಿಮಪಾತದ ನಡುವೆ ಭಾರತ್ ಜೋಡೊ ಯಾತ್ರೆಯ ಸಮಾರೋಪದ ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕರು ರಾಹುಲ್ ಗಾಂಧಿ ಅವರೊಂದಿಗೆ ಸೇರಿಕೊಂಡರು. ಡಿಎಂಕೆ, ಎನ್ಸಿ, ಪಿಡಿಪಿ, ಸಿಪಿಐ, ಆರ್ಎಸ್ಪಿ ಹಾಗೂ ಐಯುಎಂಎಲ್ನ ನಾಯಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಭಾರತ್ ಜೋಡೋ ಯಾತ್ರೆ ಚುನಾವಣೆ ಗೆಲ್ಲುವುದಕ್ಕಾಗಿ ಅಲ್ಲ, ದ್ವೇಷದ ವಿರುದ್ಧವಾಗಿತ್ತು ಎಂದರು
ಇದಕ್ಕೂ ಮುನ್ನ ಶ್ರೀನಗರದ ಚೆಷ್ಮಾ ಸಾಹಿಯಲ್ಲಿರುವ ಯಾತ್ರೆಯ ಶಿಬಿರದಲ್ಲಿ ರಾಹುಲ್ ರಾಷ್ಟ್ರ ಧ್ವಜಾರೋಹಣ ಮಾಡಿದರು. ಅವರು ಐದು ತಿಂಗಳ ಅವಧಿಯಲ್ಲಿ 12 ರಾಜ್ಯಗಳನ್ನು ಒಳಗೊಂಡ 4,000 ಕಿ.ಮೀ. ಪಾದಯಾತ್ರೆಯನ್ನು ರವಿವಾರ ಕೊನೆಗೊಳಿಸಿದರು. ಏತನ್ಮಧ್ಯೆ, ಶ್ರೀನಗರದಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಖರ್ಗೆ, ತ್ರಿವರ್ಣ ಧ್ವಜವನ್ನು ಹಾರಿಸಿದರು. ಅಲ್ಲಿ ಭಾರತ್ ಜೋಡೊ ಯಾತ್ರಾ ಸ್ಮಾರಕವನ್ನು ಕೂಡ ಹಾಕಲಾಗಿದೆ.
LIVE: #BharatJodoYatraFinale rally in Srinagar, J&K. https://t.co/aj2Go6S7I9
— Congress (@INCIndia) January 30, 2023