ಗುಜರಾತ್ ಹತ್ಯಾಕಾಂಡ: ದೋಷಿಗಳ ಜಾಮೀನು ಅರ್ಜಿಗೆ ಗುಜರಾತ್ ಸರಕಾರದ ಪ್ರತಿಕ್ರಿಯೆ ಕೋರಿದ ಸುಪ್ರೀಂ
ಹೊಸದಿಲ್ಲಿ, ಜ. 30: 2002ರ ಗೋಧ್ರಾ ರೈಲು ಬೋಗಿ ದಹನ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೆಲವು ದೋಷಿಗಳ ಜಾಮೀನು ಅರ್ಜಿಗೆ ಸುಪ್ರೀಂ ಕೋರ್ಟ್ ಸೋಮವಾರ ಗುಜರಾತ್ ಸರಕಾರದ ಪ್ರತಿಕ್ರಿಯೆ ಕೋರಿದೆ.
ಇದು ಕೇವಲ ಕಲ್ಲೆಸತದ ಪ್ರಕರಣ ಅಲ್ಲ. ಬದಲಾಗಿ ದೋಷಿಗಳು ಸಬರ್ಮತಿ ಎಕ್ಸ್ಪ್ರೆಸ್ ರೈಲಿನ ಬೋಗಿಗೆ ಬೋಲ್ಟ್ ಹಾಕಿದ್ದರು. ಇದರಿಂದ ರೈಲಿನಲ್ಲಿದ್ದ ಹಲವು ಪ್ರಯಾಣಿಕರು ಸಾವನ್ನಪ್ಪಿದ್ದರು ಎಂದು ಪ್ರಕರಣಕ್ಕೆ ಸಂಬಂಧಿಸಿ ಗುಜರಾತ್ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರೂಡ್ ನೇತೃತ್ವದ ಪೀಠಕ್ಕೆ ತಿಳಿಸಿದರು.
‘ಕೆಲವರು ತಾವು ಕೇವಲ ಕಲ್ಲು ತೂರಾಟ ನಡೆಸಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಬೋಗಿಯ ಹೊರಗಿನಿಂದ ಬೋಲ್ಟ್ ಹಾಕಿ, ಬೆಂಕಿ ಹಚ್ಚಿ ಕಲ್ಲು ತೂರಾಟ ನಡೆಸಿದರೆ, ಅದು ಕೇವಲ ಕಲ್ಲು ತೂರಾಟವಲ್ಲ’ಎಂದು ಅವರು ನ್ಯಾಯಮೂರ್ತಿ ಪಿ. ನರಸಿಂಹ ಹಾಗೂ ಜೆ.ಬಿ. ಪರ್ದಿವಾಲ ಅವರನ್ನು ಕೂಡ ಒಳಗೊಂಡ ಪೀಠಕ್ಕೆ ತಿಳಿಸಿದರು.
‘‘ಸರಿ, ನೀವು ಇದನ್ನು ಪರಿಶೀಲನೆ ನಡೆಸಿ. ನಾವು ಈ ಪ್ರಕರಣವನ್ನು ಎರಡು ವಾರಗಳ ಬಳಿಕ ವಿಚಾರಣೆ ನಡೆಸಲಿದ್ದೇವೆ” ಎಂದು ಪೀಠ ಮೆಹ್ತಾ ಅವರಿಗೆ ತಿಳಿಸಿತು.