ಪಶ್ಚಿಮಬಂಗಾಳ: ಬಾಂಬ್ ಸ್ಪೋಟ; ಟಿಎಂಸಿ ಕಾರ್ಯಕರ್ತ ಸಾವು
ಕೋಲ್ಕತ್ತಾ, ಫೆ. 5: ಬಿರ್ಭೂಮ್ ಜಿಲ್ಲೆಯ ಮಾಗ್ರಾಮ್ ಗ್ರಾಮದಲ್ಲಿ ರವಿವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ತೃಣಮೂಲ ಕಾಂಗ್ರೆಸ್ ನ ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ. ಆಡಳಿತರೂಢ ಟಿಎಂಸಿಯ ಗ್ರಾಮ ಪಂಚಾಯತ್ ಅಧ್ಯಕ್ಷರ ಸಹೋದರ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ.
ಈ ಘಟನೆ ರಾಜಕೀಯ ಪಕ್ಷಗಳ ಪರಸ್ಪರ ಕೆಸರೆರೆಚಾಟಕ್ಕೆ ಕಾರಣವಾಗಿದೆ. ಈ ಬಾಂಬ್ ದಾಳಿಯಲ್ಲಿ ತೃಣಮೂಲ ಕಾಂಗ್ರೆಸ್ ನ ಕಾರ್ಯಕರ್ತ ನ್ಯೂಟನ್ ಶೇಖ್ ಸಾವನ್ನಪ್ಪಿದ್ದರೆ, ಆಡಳಿತರೂಢ ಟಿಎಂಸಿಯ ಗ್ರಾಮ ಪಂಚಾಯತ್ ಅಧ್ಯಕ್ಷನ ಸಹೋದರ ಲಾಲ್ಟು ಶೇಖ್ ಹಾಗೂ ಇನ್ನೊಬ್ಬರು ಗಾಯಗೊಂಡಿದ್ದಾರೆ. ಲಾಲ್ಟು ಶೇಖ್ ಅವರನ್ನು ಹಾಗೂ ಇನ್ನೊಬ್ಬರನ್ನು ಕೋಲ್ಕತ್ತಾದಲ್ಲಿರುವ ಎಸ್ಎಸ್ಕೆಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ದಾಳಿಗೆ ಕಾಂಗ್ರೆಸ್ ಬೆಂಬಲಿಗರು ಹೊಣೆ ಎಂದು ನ್ಯೂಟನ್ ಶೇಕ್ ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ನಿರಾಕರಿಸಿರುವ ಪಶ್ಚಿಮಬಂಗಾಳ ಕಾಂಗ್ರೆಸ್ ನ ಅಧ್ಯಕ್ಷ ಅಧೀರ್ ರಂಜನ್ ಚೌಧುರಿ, ಯಾವುದೇ ರೀತಿಯ ದಾಳಿ ನಡೆಸುವ ಪ್ರಾಬಲ್ಯವನ್ನು ಪಕ್ಷ ಮಾಗ್ರಾಮ್ ಗ್ರಾಮ ಹೊಂದಿಲ್ಲ ಎಂದಿದ್ದಾರೆ. ಈ ದಾಳಿಯನ್ನು ಏಕೆ ಮತ್ತು ಹೇಗೆ ನಡೆಸಲಾಯಿತು ಎಂದು ಪತ್ತೆ ಮಾಡಲು ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಬೇಕು ಬೇಕು ಎಂದು ಪಶ್ಚಿಮಬಂಗಾಳ ನಗರಾಭಿವೃದ್ಧಿ ಸಚಿವ ಫಿರ್ಹಾದ್ ಹಕೀಮ್ ಅವರು ಆಗ್ರಹಿಸಿದ್ದಾರೆ.
‘‘ಈ ದಾಳಿಯ ಹಿಂದೆ ಅತಿ ದೊಡ್ಡ ಪಿತೂರಿ ಇದೆ ಎಂಬುದು ನನ್ನ ಭಾವನೆ. ಬಾಂಬ್ ತಯಾರಿಸಲು ಬಳಸಲಾದ ಕಚ್ಚಾ ಸಾಮಗ್ರಿಗಳ ಬಗ್ಗೆ ತನಿಖೆ ನಡೆಸಬೇಕು’’ ಎಂದು ಲಾಟ್ಲು ಸಹೋದರ, ಮಾರ್ಗ್ರಾಮ್ನ ಗ್ರಾಮ ಪಂಚಾಯತ್ ನ ಅಧ್ಯಕ್ಷರು ತಿಳಿಸಿದ್ದಾರೆ.