ಕ್ರಿಕೆಟ್ ಪಂದ್ಯಾಟದ ವೇಳೆ ಸಚಿವ ಸಿಂಧಿಯಾ ಹೊಡೆದ ಚೆಂಡು ಹಣೆಗೆ ತಗುಲಿ ಬಿಜೆಪಿ ಕಾರ್ಯಕರ್ತ ಆಸ್ಪತ್ರೆಗೆ !
ಭೋಪಾಲ್: ಮಧ್ಯಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಲಾದ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯಾಟದಲ್ಲಿ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಾರಿಸಿದ ಚೆಂಡು ಬಿಜೆಪಿ ಪದಾಧಿಕಾರಿಯ ತಲೆಗೆ ತಗುಲಿದ ಕಾರಣ ಅವರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವರು ಹೊಡೆದ ಚೆಂಡನ್ನು ವಿಕಾಸ್ ಮಿಶ್ರಾ ಕ್ಯಾಚ್ ಹಿಡಿಯಲು ಪ್ರಯತ್ನಿಸಿದ್ದು, ಆದರೆ ಚೆಂಡು ಅವರ ಹಣೆಯ ಮೇಲೆ ಬಿದ್ದ ಪರಿಣಾಮವಾಗಿ ಆಳವಾದ ಗಾಯವಾಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಹಣೆಗೆ ಹಲವಾರು ಹೊಲಿಗೆಗಳನ್ನು ಹಾಕಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಇಟೌರಾದಲ್ಲಿ ಹೊಸದಾಗಿ ನಿರ್ಮಿಸಲಾದ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಈ ಘಟನೆ ನಡೆದಿದೆ ಎಂದು ಸ್ಥಳೀಯ ಬಿಜೆಪಿ ಕಾರ್ಯಾಧ್ಯಕ್ಷ ಧೀರಜ್ ದ್ವಿವೇದಿ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. ಕ್ರೀಡಾಂಗಣ ಉದ್ಘಾಟನೆಗೊಂಡ ನಂತರ ಸೌಹಾರ್ದ ಪಂದ್ಯವನ್ನು ಆಡಲಾಯಿತು.
ವಿಕಾಸ್ ಗಾಯಗೊಂಡ ತಕ್ಷಣ ಆಟವನ್ನು ನಿಲ್ಲಿಸಲಾಯಿತು ಮತ್ತು ಅವರನ್ನು ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು. ಮಾಜಿ ಸಚಿವ ರಾಜೇಂದ್ರ ಶುಕ್ಲಾ ಮತ್ತು ರೇವಾ ಸಂಸದ ಜನಾರ್ದನ್ ಮಿಶ್ರಾ ಅವರೊಂದಿಗೆ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಆಸ್ಪತ್ರೆಗೆ ಭೇಟಿ ಮಾಡಿದರು.
Local BJP worker Vikas Mishra hurt on forehead while trying to catch the ball hit by union minister Jyotiraditya Scindia in Rewa district of MP. After inaugurating cricket stadium in Itaura (Rewa) showcased his batting skills. @NewIndianXpress @TheMornStandard @santwana99 pic.twitter.com/S2VJQd4yKJ
— Anuraag Singh (@anuraag_niebpl) February 15, 2023