ಉತ್ತರಪ್ರದೇಶದಲ್ಲಿ ಆಪ್ನಿಂದ ʼಬುಲ್ಡೋಝರ್ ಆಹುತಿ ಯಾಗʼ: ಆದಿತ್ಯನಾಥ್ ಸರಕಾರವನ್ನು ತಾಲಿಬಾನ್ಗೆ ಹೋಲಿಕೆ
ಲಕ್ನೋ: ರಾಜ್ಯಸಭಾ ಸಂಸದ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕ ಸಂಜಯ್ ಸಿಂಗ್ ಅವರು ರವಿವಾರ ಲಕ್ನೋದಲ್ಲಿ ಮಹಾಶಿವರಾತ್ರಿಯ ಸಂದರ್ಭದಲ್ಲಿ ಪ್ರಾರ್ಥನೆ ಮಾಡುವಾಗ "ಬುಲ್ಡೋಝರ್ ಆಹುತಿ ಯಾಗ" ನಡೆಸುವ ಮೂಲಕ ಬುಲ್ಡೋಜರ್ ಮಾದರಿಗಳನ್ನು ಸುಟ್ಟುಹಾಕಿದರು.
ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಬಡವರ ಗುಡಿಸಲುಗಳನ್ನು ನೆಲಸಮ ಮಾಡುತ್ತಿದೆ ಎಂದು ಎಎಪಿ ನಾಯಕ ಆರೋಪಿಸಿದ್ದಾರೆ.
ವೀಡಿಯೊದಲ್ಲಿ, ಆಪ್ ನಾಯಕ ಕುಳಿತು ಪಕ್ಷದ ಇತರ ಸದಸ್ಯರು ಬುಲ್ಡೋಝರ್ ಮಾದರಿಯನ್ನು ಒಡೆದು ಬೆಂಕಿಗೆ ಹಾಕುವುದನ್ನು ಕಾಣಬಹುದು.
"ಬಾಬಾಜಿಯವರ ಬುಲ್ಡೋಝರ್ "ಸಾವಿನ ಬುಲ್ಡೋಝರ್" ಆಗಿ ಮಾರ್ಪಟ್ಟಿದೆ. ಇಂದು ಲಕ್ನೋದಲ್ಲಿ ಮಹಾಶಿವರಾತ್ರಿಯಂದು ಬುಲ್ಡೋಜರ್ ಆಹುತಿ ಯಾಗವನ್ನು ನಡೆಸಲಾಯಿತು. ಬುಲ್ಡೋಝರ್ ಭಯೋತ್ಪಾದನೆ ಮತ್ತು ದೌರ್ಜನ್ಯಕ್ಕೆ ಸಮಾನಾರ್ಥಕವಾಗಿದೆ. ಈಗ ಸಾರ್ವಜನಿಕರ ಬುಲ್ಡೋಝರ್ ಅಧಿಕಾರದ ದುರಹಂಕಾರವನ್ನು ಕಿತ್ತೊಗೆಯುತ್ತದೆ. ಇದು ತಾಲಿಬಾನ್ ಮಾದರಿಯ ಸರಕಾರ” ಎಂದು ಸಂಜಯ್ ಸಿಂಗ್ ಸಿಎಂ ಆದಿತ್ಯನಾಥ್ ವಿರುದ್ಧ ವಾಗ್ದಾಳಿ ನಡೆಸಿದರು. ಯುಪಿ ಸರ್ಕಾರವು "ಅಕ್ರಮ" ಅತಿಕ್ರಮಣ ವಿರೋಧಿ ಅಭಿಯಾನವನ್ನು ನಡೆಸುವ ಮೂಲಕ ಬಲಿಪಶುಗಳನ್ನು ಕೊಂದಿದೆ ಎಂದು ಆರೋಪಿಸಿದರು.