ಸಾಂಪ್ರದಾಯಿಕ ವಿಧಿವಿಧಾನಗಳನ್ನು ಪೂರೈಸಲು ಪ್ರಪ್ರಥಮ ಬಾರಿಗೆ ಯಾಂತ್ರಿಕ ಆನೆಯನ್ನು ನಿಯೋಜಿಸಿದ ಕೇರಳ ದೇವಾಲಯ
ತ್ರಿಶೂರ್: ಪ್ರಪ್ರಥಮ ಬಾರಿಗೆ ಜೀವಂತ ಆನೆಯಂತೆ ಕಾಣಿಸುವ ಯಾಂತ್ರಿಕ ಆನೆಯನ್ನು ಸಾಂಪ್ರದಾಯಿಕ ವಿಧಿವಿಧಾನಗಳನ್ನು ಪೂರೈಸಲು ಇರಿಂಞಾಡಪಿಳ್ಳಿ ಶ್ರೀ ಕೃಷ್ಣ ದೇವಾಲಯದಲ್ಲಿ ನಿಯೋಜಿಸಲಾಗಿದೆ. ಈ ಆನೆಯನ್ನು ನಟಿ ಪಾರ್ವತಿ ತಿರುವೋತು ನೆರವಿನೊಂದಿಗೆ ಪೇಟಾ ಇಂಡಿಯಾ ದೇವಾಲಯಕ್ಕೆ ಕಾಣಿಕೆ ನೀಡಿದೆ ಎಂದು indiatoday.in ವರದಿ ಮಾಡಿದೆ.
ಹತ್ತೂವರೆ ಅಡಿ ಎತ್ತರ ಹಾಗೂ 800 ಕೆಜಿ ತೂಕವಿರುವ ಈ ವಿಶಿಷ್ಟ ಯಾಂತ್ರಿಕ ಆನೆಗೆ ಇರಿಂಞಾಡಪಿಳ್ಳಿ ರಾಮನ್ ಎಂದು ನಾಮಕರಣ ಮಾಡಲಾಗಿದೆ. ಈ ಆನೆಯು ನಾಲ್ಕು ಮಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಅದರ ತಲೆ, ಕಣ್ಣುಗಳು, ಬಾಯಿ, ಕಿವಿಗಳು ಹಾಗೂ ಬಾಲ ವಿದ್ಯುತ್ಚಾಲಿತವಾಗಿ ಕಾರ್ಯನಿರ್ವಹಿಸುತ್ತವೆ.
ಸಾಂಪ್ರದಾಯಿಕ ವಿಧಿವಿಧಾನಗಳು, ಹಬ್ಬಹರಿದಿನಗಳು ಅಥವಾ ಮತ್ಯಾವುದೇ ಕಾರ್ಯಕ್ರಮಗಳಿಗಾಗಿ ಯಾವುದೇ ಜೀವಂತ ಆನೆ ಅಥವಾ ಇತರ ಪ್ರಾಣಿಗಳನ್ನು ಇಟ್ಟುಕೊಳ್ಳಬಾರದು ಅಥವಾ ಬಾಡಿಗೆಗೆ ಪಡೆಯಬಾರದು ಎಂಬ ಸೂಚನೆ ದೇವಾಲಯಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಪೇಟಾ ಇಂಡಿಯಾ ಈ ಯಾಂತ್ರಿಕ ಆನೆಯನ್ನು ಕೊಡುಗೆ ನೀಡಿದೆ.