ಮಸೂದೆಗಳು ಅನುಮೋದನೆಗೆ ಬಾಕಿ: ರಾಜ್ಯಪಾಲರ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋದ ತೆಲಂಗಾಣ
ಹೈದರಾಬಾದ್: ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅನುಮೋದನೆ ನೀಡುವಂತೆ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರಿಗೆ ನಿರ್ದೇಶನ ನೀಡುವಂತೆ ಕೋರಿ ತೆಲಂಗಾಣ ಸರಕಾರವು ಸುಪ್ರೀಂ ಕೋರ್ಟ್ಗೆ ಮೊರೆ ಹೋಗಿದೆ.
ರಾಜಭವನದಲ್ಲಿ 10 ಮಸೂದೆಗಳು ಬಾಕಿ ಉಳಿದಿವೆ ಎಂದು ರಾಜ್ಯ ಸರಕಾರವು ರಿಟ್ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ನ ಗಮನಕ್ಕೆ ತಂದಿದೆ.
ಸೆಪ್ಟೆಂಬರ್ 2022 ರಿಂದ ಏಳು ಮಸೂದೆಗಳು ಬಾಕಿ ಉಳಿದಿದ್ದರೆ, ಮೂರು ಮಸೂದೆಗಳನ್ನು ಕಳೆದ ತಿಂಗಳು ಅವರ ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳುಹಿಸಲಾಗಿದೆ. ಪ್ರಕರಣದಲ್ಲಿ ರಾಜ್ಯಪಾಲರ ಕಾರ್ಯದರ್ಶಿ ಹಾಗೂ ಕೇಂದ್ರ ಕಾನೂನು ಸಚಿವಾಲಯವನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಸಾಮಾನ್ಯ ನೇಮಕಾತಿ ಮಂಡಳಿ ಮಸೂದೆ, ಖಾಸಗಿ ವಿಶ್ವವಿದ್ಯಾಲಯಗಳ ಮಸೂದೆ, ಮೋಟಾರು ವಾಹನ ತೆರಿಗೆ ಮಸೂದೆ ಹಾಗೂ ಕೃಷಿ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆಗಳು ರಾಜ್ಯಪಾಲರ ಬಳಿ ಬಾಕಿ ಉಳಿದಿವೆ ಎಂದು ಸರಕಾರ ಹೇಳಿದೆ.
ಮುಲುಗುವಿನಲ್ಲಿ ಅರಣ್ಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯನ್ನು ಅರಣ್ಯ ವಿಶ್ವವಿದ್ಯಾನಿಲಯವಾಗಿ ಮೇಲ್ದರ್ಜೆಗೆ ಏರಿಸುವ ಮಸೂದೆ, ಅಝಮಾಬಾದ್ ಕೈಗಾರಿಕಾ ಪ್ರದೇಶ ಮಸೂದೆ ಹಾಗೂ ಇತರ ಕೆಲವು ಮಸೂದೆಗಳು ರಾಜ್ಯಪಾಲರ ಅನುಮೋದನೆಗೆ ಕಾಯುತ್ತಿವೆ.
ಮಾರ್ಚ್ 3ರಂದು ಶುಕ್ರವಾರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆ ಇದೆ.