ಸ್ವಘೋಷಿತ ದೇವಮಾನವ ನಿತ್ಯಾನಂದನ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಸ್ಥಾನಮಾನವೇನು?

ಹೊಸದಿಲ್ಲಿ: ಸ್ವಘೋಷಿತ ದೇವಮಾನವ ನಿತ್ಯಾನಂದನ (Nithyananda) ಸ್ವಂತ ದೇಶವೆನ್ನಲಾದ 'ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ'ದ (Kailasa) ಪ್ರತಿನಿಧಿಯೊಬ್ಬರು ಕಳೆದ ತಿಂಗಳು ವಿಶ್ವ ಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದ ನಂತರ ನಿತ್ಯಾನಂದ ಮತ್ತೆ ಸುದ್ದಿಯಾಗಿದ್ದಾನೆ.
ಅತ್ಯಾಚಾರ ಮತ್ತು ಅಪಹರಣ ಪ್ರಕರಣದ ಆರೋಪಿಯಾಗಿರುವ ನಿತ್ಯಾನಂದ 2019 ರಲ್ಲಿ ದೇಶದಿಂದ ಪಲಾಯನಗೈದಿದ್ದ. ಒಂದು ವರ್ಷದ ನಂತರ ಮತ್ತೆ ಸುದ್ದಿಯಲ್ಲಿದ್ದ ಆತ ತಾನು ತನ್ನ ಸ್ವಂತ ರಾಷ್ಟ್ರ ಸ್ಥಾಪಿಸಿರುವುದಾಗಿ ಹೇಳಿಕೊಂಡಿದ್ದ.
ಆದರೆ ಆತನ ಈ ದೇಶ ಎಲ್ಲಿದೆ ಎಂದು ಯಾರಿಗೂ ತಿಳಿದಿಲ್ಲ. ಅವನ ಅನುಯಾಯಿಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುತ್ತಿರುತ್ತಾರೆ. ಬಿಬಿಸಿ ಪ್ರಕಾರ ಇಕ್ವೆಡೋರ್ ಕರಾವಳಿಯಲ್ಲಿನ ದ್ವೀಪವೊಂದನ್ನು ನಿತ್ಯಾನಂದ ಖರೀದಿಸಿ ಅಲ್ಲಿ ʻಕೈಲಾಸʼ ಸ್ಥಾಪಿಸಿರುವ ಸಾಧ್ಯತೆಯಿದೆ. ಆದರೆ ಈ ಕೈಲಾಸದ ಚಿತ್ರಣಗಳನ್ನು ಪಡೆಯುವುದು ಕಷ್ಟಕರ. ಆದರೆ ಕೈಲಾಸ ಪ್ರತಿನಿಧಿಗಳು ಪರಸ್ಪರ ನಡೆಸುವ ಸಂವಾದದ ವೀಡಿಯೋಗಳು ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದಾಗಿದೆ.
'ಕೈಲಾಸ' ಎಲ್ಲಿದೆ?
ನಿತ್ಯಾನಂದನ ಕೈಲಾಸ ಇಕ್ವೆಡೋರ್ ಸಮೀಪ ಇದೆ ಎಂದು ಹೇಳಲಾಗುತ್ತಿದೆಯಾದರೂ ನಿತ್ಯಾನಂದ ಇಕ್ವೆಡೋರ್ನಲ್ಲಿ ಇಲ್ಲ ಎಂದು ಅಲ್ಲಿನ ಸರ್ಕಾರ ಬಿಬಿಸಿಗೆ ಹೇಳಿತ್ತು.
ಈ ಕಪೋಲಕಲ್ಪಿತ ದೇಶ 'ಕೈಲಾಸ'ದ ವೆಬ್ಸೈಟ್ ಪ್ರಕಾರ ಕೈಲಾಸ ಒಂದು ಆಂದೋಲನವಾಗಿದೆ ಹಾಗೂ ಕೆನಡಾ, ಅಮೆರಿಕಾ ಮತ್ತಿತರ ದೇಶಗಳ ಹಿಂದು ಆದಿ ಶೈವ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರ ನೇತೃತ್ವದಲ್ಲಿ ಸ್ಥಾಪಿಸಲಾಗಿದೆ ಹಾಗೂ ಜಗತ್ತಿನ ಶೋಷಣೆಕ್ಕೊಳಗಾದ ಎಲ್ಲಾ ಹಿಂದುಗಳಿಗೆ ಜಾತಿ, ಮತ, ಲಿಂಗ ಬೇಧಭಾವವಿಲ್ಲದೆ ಸುರಕ್ಷಿತ ಸ್ಥಳವಾಗಿದೆ ಎಂದು ಬಣ್ಣಿಸಲಾಗಿದೆ.
ಗುರುವಾರ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ತನ್ನ ಟ್ವಿಟರ್ ಹ್ಯಾಂಡಲ್ ಮುಖಾಂತರ ಇ-ಪೌರತ್ವಕ್ಕಾಗಿ ಇ-ವೀಸಾ ಆರ್ಜಿಗಳನ್ನು ಆಹ್ವಾನಿಸಿದೆ. ತನ್ನ ದೇಶಕ್ಕೆ ಧ್ವಜ, ಸಂವಿಧಾನ, ಆರ್ಥಿಕ ವ್ಯವಸ್ಥೆ, ಪಾಸ್ಪೋರ್ಟ್ ಮತ್ತು ಲಾಂಛನವೂ ಇದೆ ಎಂದು ನಿತ್ಯಾನಂದನ ದೇಶ ಹೇಳುತ್ತಿದೆ. ಅಷ್ಟೇ ಅಲ್ಲದೆ ಅದರ ವೆಬ್ಸೈಟ್ ಪ್ರಕಾರ ದೇಶದಲ್ಲಿ ಖಜಾನೆ, ವಾಣಿಜ್ಯ, ವಸತಿ, ಮಾನವ ಸೇವೆಗಳು ಮತ್ತಿತರ ವಿಭಾಗಗಳಿವೆ.
ತಾನು ಅಂತಾರಾಷ್ಟ್ರೀಯ ಹಿಂದು ಸಮುದಾಯಕ್ಕೆ ಆಶ್ರಯ ಮತ್ತು ವಾಸಸ್ಥಾನ ಎಂದೂ ಕೈಲಾಸ ಹೇಳಿಕೊಂಡಿದೆ.
ನಿತ್ಯಾನಂದ ತನ್ನ ಕೈಲಾಸದ ಪ್ರತಿನಿಧಿಗಳನ್ನು ವಿಶ್ವ ಸಂಸ್ಥೆ ಸಭೆಗೆ ಕಳುಹಿಸಿ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಾನ್ಯತೆ ಪಡೆಯಲು ಯತ್ನಿಸಿದರೂ. ಅಲ್ಲಿ ಕೈಲಾಸ ಪ್ರತಿನಿಧಿ ವಿಜಯಪ್ರಿಯ ನಿತ್ಯಾನಂದ ಆಡಿದ ಮಾತುಗಳು ಅಪ್ರಸ್ತುತ ಎಂದು ವಿಶ್ವ ಸಂಸ್ಥೆ ಹೇಳಿದೆ.
ಹಾಗಾದರೆ ಕೈಲಾಸದ ಸ್ಥಾನಮಾನವೇನು?
ಒಂದು ಪ್ರದೇಶಕ್ಕೆ ದೇಶದ ಸ್ಥಾನಮಾನ ದೊರೆಯದೇ ಇದ್ದರೆ ಅದನ್ನು ಮೈಕ್ರೋನೇಷನ್ ಎಂದು ಕರೆಯಬಹುದಾಗಿದೆ. ವರದಿಯೊಂದರ ಪ್ರಕಾರ ಜಗತ್ತಿನಲ್ಲಿ 2019 ರಲ್ಲಿ ಸುಮಾರು 80 ಮೈಕ್ರೋನೇಷನ್ಗಳಿದ್ದವು.
ಭಾರತೀಯ ಆಧ್ಯಾತ್ಮಿಕ ಗುರು ರಜನೀಶ್ ಅವರು 80ರ ದಶಕದಲ್ಲಿ ಓರೆಗಾಂವ್ ಎಂಬಲ್ಲಿ ರಜನೀಶಪುರಂ ಸ್ಥಾಪಿಸಿದ ರೀತಿಯಲ್ಲಿಯೇ ನಿತ್ಯಾನಂದನ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸವಿದೆ ಎಂದೇ ತಿಳಿಯಲಾಗಿದೆ.
ಇದನ್ನೂ ಓದಿ: ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯ ಇನ್ನಷ್ಟು ಇಳಿಮುಖ: ವರದಿ







