‘ಕ್ರೈಸ್ತರಲ್ಲಿ ಭಯದ ವಾತಾವರಣ’: ಮಾಜಿ ಸರಕಾರಿ ಅಧಿಕಾರಿಗಳಿಂದ ಪ್ರಧಾನಿಗೆ ಪತ್ರ
ಹೊಸದಿಲ್ಲಿ,ಮಾ.4: ಇತ್ತೀಚಿನ ದಿನಗಳಲ್ಲಿ ಕ್ರೈಸ್ತರ ವಿರುದ್ಧ ಹೆಚ್ಚುತ್ತಿರುವ ಸಂಪೂರ್ಣ ತಾರತಮ್ಯದ ಘಟನೆಗಳ ಕುರಿತು ಕಾನ್ಸ್ಟಿಟ್ಯೂಷನಲ್ ಕಂಡಕ್ಟ್ ಗ್ರೂಪ್ ಡಿ 93 ಮಾಜಿ ಸರಕಾರಿ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ಕಾರ್ಯಾಂಗ ಮತ್ತು ಕಾನೂನಿನಿಂದ ಸಮಾನವಾಗಿ ಮತ್ತು ತಾರತಮ್ಯರಹಿತವಾಗಿ ನಡೆಸಿಕೊಳ್ಳಲಾಗುವುದು ಎಂದು ಕ್ರೈಸ್ತ ಸಮುದಾಯಕ್ಕೆ ಭರವಸೆ ನೀಡುವಂತೆ ಅವರು ಪ್ರಧಾನಿಯನ್ನು ಆಗ್ರಹಿಸಿದ್ದಾರೆ.
ಬಲವಂತದ ಮತಾಂತರ ಕ್ರೈಸ್ತ ಸಮುದಾಯದ ವಿರುದ್ಧದ ಪ್ರಮುಖ ಆರೋಪವಾಗಿದೆಯಾದರೂ 1951ರ ಜನಗಣತಿಯ ಬಳಿಕ ಕ್ರೈಸ್ತರ ಜನಸಂಖ್ಯೆ ಹೆಚ್ಚುಕಡಿಮೆ ಶೇ.2.3ರಲ್ಲಿಯೇ ಸ್ಥಿರವಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಈ ಆರೋಪದಿಂದಾಗಿ ಸಮುದಾಯದ ವ್ಯಕ್ತಿಗಳು ಮತ್ತು ಸಂಸ್ಥೆಗಳು ಮೌಖಿಕ,ದೈಹಿಕ ಮತ್ತು ಮಾನಸಿಕ ದಾಳಿಗಳಿಗೆ ಗುರಿಯಾಗಿವೆ. ಇತರರ ಹೆಸರು ಕೆಡಿಸುವುದರಿಂದ ತಮ್ಮ ಬಲ ವರ್ಧನೆಯಾಗುತ್ತದೆ ಎಂದು ಭಾವಿಸುವ ಶಕ್ತಿಗಳು ನಮ್ಮ ಮಧ್ಯೆ ಇರುವುದು ದುರದೃಷ್ಟಕರ ಮತ್ತು ಇದು ನಿರಾಕರಿಸಲಾಗದ ಸತ್ಯವಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹಾಗೂ ಸಾಮಾಜಿಕ ಸುಧಾರಣೆಗಳಲ್ಲಿ ಕ್ರೈಸ್ತರ ಕೊಡುಗೆಯನ್ನು ಬೆಟ್ಟು ಮಾಡಿರುವ ಈ ಮಾಜಿ ಸರಕಾರಿ ಅಧಿಕಾರಿಗಳು,ಕಾಮನ್ ಇರಾ (ಸಿಇ) ಅಥವಾ ಸಾಮಾನ್ಯ ಶಕೆಯ ಮೊದಲ ಶತಮಾನದಿಂದಲೇ ಇಂದು ಕ್ರಿಶ್ಚಿಯನ್ ಪ್ರಾಬಲ್ಯದ ಹಲವಾರು ದೇಶಗಳಲ್ಲಿ ಪರಿಚಯಿಸಲ್ಪಡುವ ಬಹಳ ಮೊದಲೇ ಭಾರತವು ಕ್ರಿಶ್ಚಿಯಾನಿಟಿಗೆ ನೆಲೆಯಾಗಿತ್ತು. ಆದರೂ ಇಂದು ಕ್ರೈಸ್ತರು,ವಾಸ್ತವದಲ್ಲಿ ಎಲ್ಲ ಅಲ್ಪಸಂಖ್ಯಾತರು ತಮ್ಮದೇ ದೇಶದಲ್ಲಿ ಅಪರಿಚಿತರಾಗಿದ್ದೇವೆ ಮತ್ತು ತಮ್ಮ ಸ್ವಂತ ಧರ್ಮಗಳನ್ನು ಅನುಸರಿಸುತ್ತಿರುವುದರಿಂದ ತಪ್ಪಿಸ್ಥರೆಂದು ಭಾವಿಸುವಂತೆ ಮಾಡಲಾಗುತ್ತಿದೆ. ಕೆಲವು ಮೂಲಭೂತವಾದಿ ಧ್ವನಿಗಳು ನಿರ್ಭೀತಿಯಿಂದ ಮತ್ತು ಕೆಲವೊಮ್ಮೆ ರಾಜಕೀಯ ಅಥವಾ ಕಾನೂನು ಜಾರಿ ಅಧಿಕಾರಿಗಳ ಮೌನ ಸಮ್ಮತಿಯೊಂದಿಗೆ ಕಾರ್ಯಾಚರಿಸುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ,ಕೇಂದ್ರ ಮತ್ತು ರಾಜ್ಯಸರಕಾರಗಳ ಹಿರಿಯ ನಾಯಕರು ಒಂದು ಮಾತನ್ನು ಹೇಳಿದರೆ ಈ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬಹುದು ಎಂದೂ ಅವರು ಪತ್ರದಲ್ಲಿ ಒತ್ತಿ ಹೇಳಿದ್ದಾರೆ.