ಜಲಾಲಾಬಾದ್ ಕೋಟೆಯನ್ನು 'ಮನ್ಹಾರ್ಖೇಡಾ' ಎಂದು ಮರುನಾಮಕರಣ ಮಾಡಲು ಉತ್ತರ ಪ್ರದೇಶ ಸಿಎಂಗೆ ಮನವಿ
ಶಾಮ್ಲಿ: ಪ್ರಸ್ತುತ ಆರ್ಎಲ್ಡಿ ಶಾಸಕ ಥಾನಾಭವಾನ್ ಅಶ್ರಪ್ ಅಲಿಯವರ ಸ್ವಾಧೀನದಲ್ಲಿರುವ ಜಿಲ್ಲೆಯ ಜಲಾಲಾಬಾದ್ ಕೋಟೆ ಮೂಲತಃ ಹಿಂದೂ ಅರಸರಿಗೆ ಸೇರಿದ್ದು ಎಂದು ಮನ್ಹಾರ್ ಖೇರಾ ದುರ್ಗ್ ಕಲ್ಯಾಣ್ ಸಮಿತಿ ಪ್ರತಿಪಾದಿಸಿದೆ. ಈ ಮೂಲಕ ಅಶ್ರಫ್ ಅಲಿ ಕುಟುಂಬ "ಶತಮಾನಗಳಿಂದ" ವಾಸ್ತವ್ಯ ಇರುವ ಈ ಕೋಟೆ ವಿವಾದದ ಕೇಂದ್ರಬಿಂದುವಾಗಿ ಪರಿಣಮಿಸಿದೆ ಎಂದು timesofindia ವರದಿ ಮಾಡಿದೆ.
ಸಮಿತಿಯ ಕಾರ್ಯದರ್ಶಿ ಭಾನುಪ್ರತಾಪ್ ಸಿಂಗ್ ಮತ್ತು ಹಲವು ಮಂದಿ ಸದಸ್ಯರು ವಿಶೇಷ ಜಿಲ್ಲಾಧಿಕಾರಿ ನಿಖಿತಾ ಶರ್ಮಾ ಅವರನ್ನು ಭೇಟಿ ಮಾಡಿ ಈ ಸಂಬಂಧ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಸಲ್ಲಿಸಿದ ಮನವಿಯಲ್ಲಿ ಈ ಪ್ರತಿಪಾದನೆ ಮಾಡಲಾಗಿದೆ.
"ಶತಮಾನಗಳಷ್ಟು ಹಳೆಯದಾದ ಜಲಾಲಾಬಾದ್ ಕೋಟೆ ನೂರಾರು ಎಕರೆ ಪ್ರದೇಶದಲ್ಲಿ ಹರಡಿದೆ. ಇದನ್ನು ಔರಂಗಜೇಬನ ಕಮಾಂಡರ್ಗಳ ಪೈಕಿ ಒಬ್ಬರಾದ ಜಲಾಲ್ ಖಾನ್ ಎಂಬವರು ಮೂಲ ಮಾಲಕರಾದ ಹಿಂದೂ ಧರ್ಮಕ್ಕೆ ಸೇರಿದ ಒಬ್ಬರಿಂದ ವಶಪಡಿಸಿಕೊಂಡರು" ಎಂದು ಸಮಿತಿ ಪ್ರತಿಪಾದಿಸಿದೆ. "ಅಶ್ರಫ್ ಅಲಿಯವರು ಈ ಕೋಟೆ ತನ್ನ ಪಿತ್ರಾರ್ಜಿತ ಆಸ್ತಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಮೂಲತಃ ಇದು ಹಿಂದೂ ಅರಸರಿಗೆ ಸೇರಿದ್ದು, ಜಲಾಲ್ಖಾನ್ ಈ ರಾಜನಿಗೆ ವಿಷಪ್ರಾಶನ ಮಾಡಿಸಿದ್ದ. ಜಲಾಲಾಬಾದ್ ಕೋಟೆಗೆ ’ಮನ್ಹಾರ್ಖೇಡಾ’ ಎಂದು ಮರು ನಾಮಕರಣ ಮಾಡುವ ಜತೆಗೆ ಅದನ್ನು ಭಾರತದ ಪ್ರಾಚ್ಯವಸ್ತು ಸರ್ವೇಕ್ಷಣಾಲಯದ ವಶಕ್ಕೆ ಒಪ್ಪಿಸಬೇಕು" ಎಂದು ಆಗ್ರಹಿಸಲಾಗಿದೆ.
ಈ ಕೋಟೆಯನ್ನು ಸೂರ್ಯವಂಶಿ ಕ್ಷತ್ರಿಯ ರಾಜರು ಕಟ್ಟಿದ್ದಾರೆ. ಇದಕ್ಕೆ ಮನ್ಹಾರ್ ಕೋಟೆ ಎಂದು ಹೆಸರಿಡಲಾಗಿತ್ತು. ಇದು 400 ವರ್ಷಕ್ಕೂ ಹೆಚ್ಚು ಹಳೆಯದು. ಜಲಾಲಾಬಾದ್ ಪಟ್ಟಣಕ್ಕೆ ಮನ್ಹಾರ್ ಖೇಡಾ ಎಂದು ಹೆಸರು. ಆದರೆ ಅದ ಹೆಸರನ್ನು ಜಲಾಲಾಬಾದ್ ಎಂದು ಬದಲಿಸಿ ವಶಪಡಿಸಿಕೊಳ್ಳಲಾಗಿದೆ ಎಂದು ಆಪಾದಿಸಲಾಗಿದೆ.