ಜರ್ಮನಿಯ ವಿದೇಶಾಂಗ ಸಚಿವರಿಗೆ ಕೆಂಪು ಹಾಸು ಸ್ವಾಗತ ನೀಡದ ವಿವಾದ: ಶಿಷ್ಟಾಚಾರ ಮಾರ್ಗಸೂಚಿಗಳು ಏನು ಹೇಳುತ್ತವೆ?

ಹೊಸದಿಲ್ಲಿ: ಜರ್ಮನಿಯ ವಿದೇಶಾಂಗ ಸಚಿವೆಗೆ (Germany’s Foreign minister) ಕೆಂಪು ಹಾಸಿನ ಸ್ವಾಗತ (red carpet) ನೀಡದ ಕುರಿತು ತೀವ್ರ ಸ್ವರೂಪದ ವಿವಾದ ಭುಗಿಲೆದ್ದಿರುವ ಬೆನ್ನಿಗೇ, "ಈ ವಾರ ಭಾರತೀಯ ಶಿಷ್ಟಾಚಾರ ಅಸಾಧಾರಣವಾಗಿ ಕಾರ್ಯನಿರ್ವಹಿಸಿದೆ" ಎಂದು ಸೋಮವಾರ ಜರ್ಮನಿಯ ರಾಯಭಾರಿ ಫಿಲಿಪ್ ಏಕರ್ಮನ್ ಸಮರ್ಥಿಸಿಕೊಂಡಿದ್ದಾರೆ ಎಂದು indianexpress.com ವರದಿ ಮಾಡಿದೆ.
ಮಾರ್ಚ್ 1ರಂದು ಜಿ-20 ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಜರ್ಮನಿಯ ವಿದೇಶಾಂಗ ಸಚಿವೆ ಅನ್ನಲೆನಾ ಬೇರ್ಬಾಕ್ (Annalena Baerbock) ಭಾರತಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಹೊಸದಿಲ್ಲಿಯಲ್ಲಿ ಏಕಾಂಗಿಯಾಗಿ ವಿಮಾನದಿಂದ ಇಳಿಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅವರ ಆಗಮನದ ಸಂದರ್ಭದಲ್ಲಿ ಕೆಂಪು ಹಾಸು ಸ್ವಾಗತವನ್ನು ನೀಡದಿರುವುದು ಹಾಗೂ ಅವರ ಆಗಮನದ ವೇಳೆ ಅಧಿಕಾರಿಗಳು ಹಾಜರಿರದಿರುವುದು ಆ ವಿಡಿಯೊದಲ್ಲಿ ಸೆರೆಯಾಗಿತ್ತು. ಇದರಿಂದ ಇತರ ವಿದೇಶಿ ಗಣ್ಯರಿಗಿಂತ ಜರ್ಮನಿಯ ಸಚಿವೆಯನ್ನು ಕೀಳಾಗಿ ನಡೆಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಶಿಷ್ಟಾಚಾರದ ಪ್ರಕಾರ, ವಿದೇಶಾಂಗ ಸಚಿವರನ್ನು ಬರಮಾಡಿಕೊಳ್ಳುವಾಗ ಕೆಂಪು ಹಾಸಿನ ಸ್ವಾಗತ ನೀಡಿ, ಇಕ್ಕೆಲಗಳಲ್ಲಿ ಅಧಿಕಾರಿಗಳು ಹಾಜರಿದ್ದು, ನಿಯೋಗವನ್ನು ಸ್ವಾಗತಿಸಬೇಕಿತ್ತು. ಈ ಶಿಷ್ಟಾಚಾರವನ್ನು ಸಚಿವರು ತಮ್ಮ ಸ್ವಂತ ವಿಮಾನದಲ್ಲಿ ಆಗಮಿಸಿದಾಗ ನೀಡಲಾಗುತ್ತದೆಯೇ ಹೊರತು ವಾಣಿಜ್ಯ ವಿಮಾನದಲ್ಲಿ ಆಗಮಿಸಿದಾಗಲಲ್ಲ. ಸಾಮಾನ್ಯವಾಗಿ ಆಗಮನದ ವಿಷಯವನ್ನು ಆಗಮಿಸಿದ ದೇಶದ ರಾಯಭಾರ ಕಚೇರಿ ಹಾಗೂ ವಿದೇಶಾಂಗ ಸಚಿವಾಲಯದ ಶಿಷ್ಟಾಚಾರ ವಿಭಾಗದೊಂದಿಗೆ ಹಂಚಿಕೊಳ್ಳಲಾಗುತ್ತದೆ. ಆದರೆ, ವಿಮಾನ ಆಗಮಿಸುವ ಸಮಯ ಕೆಲವೊಮ್ಮೆ ಅರ್ಧ ಗಂಟೆಯಷ್ಟು ವ್ಯತ್ಯಯವಾಗುವ ಸಾಧ್ಯತೆ ಇರುತ್ತದೆ. ಇದನ್ನು ಶಿಷ್ಟಾಚಾರ ಅಧಿಕಾರಿಗಳು ಗಣನೆಗೆ ತೆಗೆದುಕೊಳ್ಳುತ್ತಾರೆ.
ಬೇರ್ಬಾಕ್ ಅವರ ವಿಮಾನ ಅರ್ಧ ಗಂಟೆ ಮುಂಚಿತವಾಗಿ ಭೂಸ್ಪರ್ಶ ಮಾಡಿತು. ಸಚಿವೆಗೆ ಕೆಲ ಸಮಯ ವಿಮಾನದಲ್ಲೇ ಕಾಯುವಂತೆ ಮನವಿ ಮಾಡಲಾಯಿತಾದರೂ, ಅವರು ವಿಮಾನದಿಂದ ಇಳಿಯಲು ನಿರ್ಧರಿಸಿದರು ಎಂದು ಜರ್ಮನಿಯ ರಾಯಭಾರಿ ಏಕರ್ಮನ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಏಕರ್ಮನ್, "ನಾವು ಆಕೆಯನ್ನು ಸಮ್ಮೇಳನ ಕೇಂದ್ರಕ್ಕೆ ಕರೆದೊಯ್ಯಬೇಕಿತ್ತು ಮತ್ತು ಆಕೆ ಕೊಂಚ ಮುಂಚಿತವಾಗಿ ಆಗಮಿಸಿದ್ದರು. ಹೀಗಾಗಿ ಜರ್ಮನಿಯ ಪ್ರಾಧಿಕಾರಗಳು ಕೆಲ ಸಮಯ ವಿಮಾನದಲ್ಲೇ ಉಳಿಯುವಂತೆ ಆಕೆಗೆ ಮನವಿ ಮಾಡಿದವು. ಆಕೆ ಸ್ವಲ್ಪ ಉಪಾಹಾರ ಸೇವಿಸಿ, ಅಧಿಕಾರಿಗಳು ಸಾಲುಗಟ್ಡುವ ಮುನ್ನವೇ ವಿಮಾನದಿಂದ ಕೆಳಗಿಳಿಯುವ ದಿಢೀರ್ ನಿರ್ಣಯ ಕೈಗೊಂಡರು. ಇದಕ್ಕೂ ಭಾರತೀಯ ಶಿಷ್ಟಾಚಾರಕ್ಕೂ ಯಾವುದೇ ಸಂಬಂಧವಿಲ್ಲ. ಈ ವಾರ ಭಾರತೀಯ ಶಿಷ್ಟಾಚಾರ ಅಸಾಧಾರಣವಾಗಿ ಕಾರ್ಯನಿರ್ವಹಿಸಿದೆ ಎಂಬುದನ್ನು ಮತ್ತೆ ಮತ್ತೆ ಹೇಳಲು ಬಯಸುತ್ತೇನೆ" ಎಂದು ಸ್ಪಷ್ಟಪಡಿಸಿದ್ದಾರೆ.
"ಅಲ್ಲದೆ, ಸಚಿವೆಯು ತೋರಿಕೆಯ ವ್ಯಕ್ತಿಯಲ್ಲ ಮತ್ತು ಸ್ವಾಗತಿಸುವ ಸಾಲಿನ ಗೈರಿನ ಬಗ್ಗೆ ಅವರು ಪರಿಗಣಿಸುವುದಿಲ್ಲ" ಎಂದೂ ಅವರು ಹೇಳಿದ್ದಾರೆ.
ಜಿ-20 ವಿದೇಶಾಂಗ ಸಚಿವರ ಸಭೆಯಲ್ಲಿ ರಷ್ಯಾ-ಉಕ್ರೇನ್ ಯುದ್ಧದ ಕುರಿತು ಅಮೆರಿಕಾ ನೇತೃತ್ವದ ಪಶ್ಚಿಮ ದೇಶಗಳು ಹಾಗೂ ರಷ್ಯಾ-ಚೀನಾ ದೇಶಗಳ ನಡುವೆ ವಿಭಿನ್ನ ನಿಲುವು ವ್ಯಕ್ತವಾಗಿದ್ದರಿಂದಾಗಿ ಮಾರ್ಚ್ 2ರಂದು ನೀಡಬೇಕಿದ್ದ ಜಂಟಿ ಹೇಳಿಕೆಗೆ ಸಮ್ಮತಿ ದೊರೆಯಲಿಲ್ಲ.
ಜಿ-20 ವಿದೇಶಾಂಗ ಸಚಿವರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್, "ಉಕ್ರೇನ್ ಬಿಕ್ಕಟ್ಟಿನ ಕುರಿತು ಭಿನ್ನಾಭಿಪ್ರಾಯಗಳಿದ್ದು, ಅವುಗಳ ಕುರಿತು ಸಹಮತಕ್ಕೆ ಬರಲು ಸಾಧ್ಯವಾಗಲಿಲ್ಲ" ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದಿದ್ದ ಜಿ-20 ಹಣಕಾಸು ಸಚಿವರ ಸಭೆಯಲ್ಲೂ ಒಮ್ಮತ ಮೂಡದ ಕಾರಣ ಜಂಟಿ ಹೇಳಿಕೆ ಬಿಡುಗಡೆಯಾಗಿರಲಿಲ್ಲ.
ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಆಪ್ತ ಸಹಾಯಕನ ವಿರುದ್ಧ ಜೀವ ಬೆದರಿಕೆ ಆರೋಪ ಹೊರಿಸಿದ ಬಿಗ್ ಬಾಸ್ ಸ್ಪರ್ಧಿ ಅರ್ಚನಾ
Warm welcome for Germanys foreign minister in India.pic.twitter.com/ubaP5ot3Yh
— Zlatti71 (@djuric_zlatko) March 3, 2023







