ಎಲ್ಲಿ ಚುನಾವಣೆ ಇರುತ್ತದೋ ಅಲ್ಲಿಗೆ ಮೋದಿಗಿಂತ ಮೊದಲೇ ತನಿಖಾ ಸಂಸ್ಥೆಗಳು ತಲುಪುತ್ತವೆ: ಕವಿತಾ ವಾಗ್ದಾಳಿ

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಬಿಆರ್ಎಸ್ ನಾಯಕಿ ಕೆ.ಕವಿತಾ ಅವರು ಕೇಂದ್ರದ ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಗುರುವಾರ ವಾಗ್ದಾಳಿ ನಡೆಸಿದ್ದು, ' ಎಲ್ಲಿ ಚುನಾವಣೆ ಇರುತ್ತದೋ ಅಲ್ಲಿಗೆ ಪ್ರಧಾನಿ ಮೋದಿಗಿಂತ ಮೊದಲೇ ತಲುಪುವುದನ್ನು ಖಚಿತಪಡಿಸಿಕೊಳ್ಳುವುದು ಈಡಿ ಸಹಿತ ಹಲವು ತನಿಖಾ ಸಂಸ್ಥೆಗಳ ಸ್ವಭಾವವಾಗಿದೆ. ತೆಲಂಗಾಣ ವಿಧಾನಸಭೆಗೆ ಡಿಸೆಂಬರ್ನಲ್ಲಿ ಚುನಾವಣೆ ನಡೆಯಲಿದ್ದು, ಕಳೆದ ವರ್ಷದ ಜೂನ್ನಿಂದ ಕೇಂದ್ರ ಸರಕಾರವು ತನಿಖಾ ಸಂಸ್ಥೆಗಳನ್ನು ರಾಜ್ಯಕ್ಕೆ ಕಳುಹಿಸುತ್ತಿದೆ ಎಂದು ಅವರು ಹೇಳಿದರು.
ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ (ED) ಕವಿತಾರಿಗೆ ಸಮನ್ಸ್ ನೀಡಿತ್ತು. ಮಾರ್ಚ್ 11 ರಂದು ಹೊಸದಿಲ್ಲಿಯಲ್ಲಿರುವ ಈಡಿ ಕಚೇರಿಯ ಮುಂದೆ ಹಾಜರಾಗುವುದಾಗಿ BRS ನಾಯಕಿ ಹೇಳಿದ್ದಾರೆ.
ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೆ.ಕವಿತಾ, ‘ಇವತ್ತೂ ಈಡಿ ಬಳಿ ಹೋಗಲು ಧರಣಿ ರದ್ದು ಮಾಡಬಹುದಿತ್ತು ಆದರೆ ಅವರ ತಂತ್ರಕ್ಕೆ ನಾವು ಹೆದರುವುದಿಲ್ಲಎಂಬ ಸಂದೇಶ ರವಾನಿಸಬೇಕಿತ್ತು. ಈಡಿ ಕೇಳುವ ಯಾವುದೇ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ಎಂದು ಹೇಳಿದರು.
ಪ್ರಸಕ್ತ ಸಂಸತ್ತಿನ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸುವಂತೆ ಕೋರಿ ಮಾರ್ಚ್ 10 ರಂದು ಜಂತರ್ ಮಂತರ್ನಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ಬಿಆರ್ಎಸ್ ನಾಯಕಿ ಸಜ್ಜಾಗಿದ್ದಾರೆ.







