ಅಮೃತಪಾಲ್ ಸಿಂಗ್ ಗೆ ಆಶ್ರಯ ನೀಡಿದ್ದ ಹರ್ಯಾಣದ ಮಹಿಳೆಯನ್ನು ಬಂಧಿಸಿದ ಪೊಲೀಸರು
ಹೊಸದಿಲ್ಲಿ: ಪರಾರಿಯಾಗಿರುವ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಹಾಗೂ ಆತನ ಸಹಚರ ಪಾಪಲ್ಪ್ರೀತ್ ಸಿಂಗ್ ಗೆ ಹರ್ಯಾಣದ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದ ಮಹಿಳೆಯನ್ನು ಹರ್ಯಾಣ ಪೊಲೀಸರು ವಶಕ್ಕೆ ಪಡೆದಿದ್ದು, ನಂತರ ಆಕೆಯನ್ನು ಪಂಜಾಬ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಲ್ಜೀತ್ ಕೌರ್ ಎಂಬ ಮಹಿಳೆಯು ರವಿವಾರ ರಾತ್ರಿ ಕುರುಕ್ಷೇತ್ರದ ಶಹಾಬಾದ್ನಲ್ಲಿರುವ ತನ್ನ ಮನೆಯಲ್ಲಿ ಅಮೃತಪಾಲ್ ಸಿಂಗ್ ಹಾಗೂ ಆತನ ಸಹಚರ ಪಾಪಲ್ಪ್ರೀತ್ ಸಿಂಗ್ ಗೆ ಆಶ್ರಯ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೃತಪಾಲ್ ಸಿಂಗ್ ಹಾಗೂ ಪಾಪಲ್ಪ್ರೀತ್ ಸಿಂಗ್ ಮನೆಯೊಂದರಲ್ಲಿ ತಂಗಿರುವ ಬಗ್ಗೆ ಬಲ್ಜೀತ್ ಕೌರ್ ಅವರ ಸಹೋದರ ಸೋಮವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರವಿವಾರ ರಾತ್ರಿ ಅಮೃತಪಾಲ್ ಹಾಗೂ ಪಾಪಲ್ಪ್ರೀತ್ ತನ್ನ ಮನೆಗೆ ಸ್ಕೂಟರ್ನಲ್ಲಿ ಬಂದು ತಂಗಿದ್ದರು. ಖಾಲಿಸ್ತಾನಿ ನಾಯಕ ತನ್ನ ಮನೆಯಲ್ಲಿ ಬಟ್ಟೆ ಬದಲಾಯಿಸಿಕೊಂಡಿದ್ದಾನೆ ಎಂದು ಕೌರ್ ಪೊಲೀಸರಿಗೆ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ಪಾಪಲ್ಪ್ರೀತ್ ತನ್ನೊಂದಿಗೆ ಸಂಪರ್ಕದಲ್ಲಿದ್ದ. ಅವನು ಹಲವಾರು ಸಂದರ್ಭಗಳಲ್ಲಿ ತನ್ನ ಮನೆಯಲ್ಲಿಯೇ ಇದ್ದ ಎಂದು ಬಲ್ಜೀತ್ ಕೌರ್ ಬಹಿರಂಗಪಡಿಸಿದ್ದಾರೆ.