-

‘‘ನವ ಭಾರತ’’ದಲ್ಲಿ ವಿಪಕ್ಷ ನಾಯಕರೇ ಪ್ರಧಾನ ಗುರಿ: ರಾಹುಲ್ ಅನರ್ಹತೆ ಕುರಿತು ಪ್ರತಿಪಕ್ಷ ನಾಯಕರು ಹೇಳಿದ್ದೇನು?

-

ಹೊಸದಿಲ್ಲಿ, ಮಾ. 24: ಲೋಕಸಭಾ ಸದಸ್ಯತ್ವದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿರುವ ಕ್ರಮವನ್ನು ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಾರ್ಟಿ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿವೆ.

ಪ್ರಧಾನಿ ನರೇಂದ್ರ ಮೋದಿಯ ‘‘ಹೊಸ ಭಾರತದಲ್ಲಿ’’ ವಿರೋಧ ಪಕ್ಷಗಳ ನಾಯಕರು ಬಿಜೆಪಿಯ ಪ್ರಧಾನ ಗುರಿಗಳಾಗುತ್ತಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

‘‘ಪ್ರಧಾನಿ ಮೋದಿಯ ಹೊಸ ಭಾರತದಲ್ಲಿ, ವಿರೋಧ ಪಕ್ಷಗಳ ನಾಯಕರು ಬಿಜೆಪಿಯ ಪ್ರಧಾನ ಗುರಿಯಾಗಿದ್ದಾರೆ! ಕ್ರಿಮಿನಲ್ ಇತಿಹಾಸವುಳ್ಳ ಬಿಜೆಪಿ ನಾಯಕರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಲಾಗುತ್ತಿದೆ ಹಾಗೂ ಪ್ರತಿಪಕ್ಷ ನಾಯಕರನ್ನು ಅವರ ಭಾಷಣಗಳಿಗಾಗಿ ಅನರ್ಹಗೊಳಿಸಲಾಗುತ್ತಿದೆ. ಇಂದು ನಾವು ನಮ್ಮ ಸಾಂವಿಧಾನಿಕ ಪ್ರಜಾಪ್ರಭುತ್ವವು ಮತ್ತಷ್ಟು ಕೆಳಗೆ ಕುಸಿದಿರುವುದನ್ನು ನೋಡುತ್ತಿದ್ದೇವೆ’’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪ್ರತಿಪಕ್ಷಗಳ ನಾಯಕರ ಧ್ವನಿಯನ್ನು ಹತ್ತಿಕ್ಕಿದರೆ, ಜನರ ಸಮಸ್ಯೆಗಳ ಬಗ್ಗೆ ಯಾರು ಮಾತನಾಡುತ್ತಾರೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದಿಲ್ಲಿ ಸಚಿವ ಸೌರಭ್ ಭಾರದ್ವಾಜ್ ಪ್ರಶ್ನಿಸಿದರು.

‘‘ನಾವು ಕಾಂಗ್ರೆಸ್ ನೊಂದಿಗೆ ತುಂಬಾ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದೇವೆ. ನಮ್ಮ ಮೇಲೆ ಕೇಂದ್ರ ಸರಕಾರ ಆಕ್ರಮಣ ಮಾಡಿದಾಗಲೆಲ್ಲ ಕಾಂಗ್ರೆಸ್ ನಾಯಕರು ಚಪ್ಪಾಳೆ ತಟ್ಟಿ ಸಂತೋಷ ವ್ಯಕ್ತಪಡಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ದಿಲ್ಲಿ ಮುಖ್ಯಮಂತ್ರಿಯ ವಿರುದ್ಧ ದಾಳಿ ನಡೆಸಿದಾಗ ಕಾಂಗ್ರೆಸ್ ನಾಯಕ ಅಜಯ್ ಮಾಕನ್ ಚಪ್ಪಾಳೆ ತಟ್ಟಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಪಕ್ಷದ ಧ್ವನಿಯನ್ನು ಕೇಂದ್ರ ಸರಕಾರ ಹತ್ತಿಕ್ಕಿದರೆ, ಜನರ ಸಮಸ್ಯೆಗಳನ್ನು ಯಾರು ಪ್ರಸ್ತಾಪಿಸುತ್ತಾರೆ? ಸಂಸತ್ನಲ್ಲಿ ಪ್ರತಿಪಕ್ಷಗಳನ್ನು ಹಲವು ಬಾರಿ ಹತ್ತಿಕ್ಕಲಾಗಿದೆ. ಆದರೆ, ಈಗ ಕ್ಷುಲ್ಲಕ ವಿಷಯಗಳಲ್ಲಿ ಡಝನ್ಗಟ್ಟಳೆ ಮೊಕದ್ದಮೆಗಳನ್ನು ಪ್ರತಿಪಕ್ಷ ನಾಯಕರ ವಿರುದ್ಧ ಹೂಡಲಾಗಿದೆ. ಇದೇ ಪ್ರವೃತ್ತಿ ಮುಂದುವರಿದರೆ, ಮುಂದೆ ಪ್ರಧಾನಿ ಮತ್ತು ಬಿಜೆಪಿಯೊಂದೇ ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸಲಿ. ಪ್ರತಿಪಕ್ಷಗಳೇ ಇರುವುದಿಲ್ಲ. ಅದು ಸರ್ವಾಧಿಕಾರ’’ ಎಂದು ಭಾರದ್ವಾಜ್ ಹೇಳಿದರು.

ರಾಹುಲ್ ಗಾಂಧಿಯ ಅನರ್ಹತೆಯು ‘‘ಪ್ರಜಾಪ್ರಭುತ್ವದ ಕೊಲೆ’’ ಎಂದು ಶಿವಸೇನೆ ಉದ್ಧವ್ ಠಾಕ್ರೆ ಬಣದ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದರು. ‘‘ಇದು ಪ್ರಜಾಪ್ರಭುತ್ವದ ಕೊಲೆ. ಎಲ್ಲಾ ಸಂಸ್ಥೆಗಳು ಒತ್ತಡದಲ್ಲಿವೆ. ಇದು ‘ಸರ್ವಾಧಿಕಾರದ’ ಅಂತ್ಯದ ಆರಂಭ. ಈ ಯುದ್ಧಕ್ಕೆ ಈಗ ಒಂದು ದಿಕ್ಕು ಮಾತ್ರ ಬೇಕಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

ಅನರ್ಹತೆಯು ‘‘ಅವಮಾನಕಾರಿ ಮತ್ತು ದುರದೃಷ್ಟಕರ. ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇದಕ್ಕಿಂತ ದೊಡ್ಡ ಕಳಂಕ ಬೇರೊಂದು ಇರಲು ಸಾಧ್ಯವಿಲ್ಲ’’ ಎಂದು ಲಾಲು ಯಾದವ್ರ ರಾಷ್ಟ್ರೀಯ ಜನತಾ ದಳದ ಮನೋಜ್ ಝಾ ಹೇಳಿದರು.

70 ಶೇ. ಸಂಸದರು ಅನರ್ಹರಾಗಬೇಕಾಗಿತ್ತು!

ಮಾನನಷ್ಟದ ವಿಚಾರದಲ್ಲಿ ಸಂಸದರು ತಮ್ಮ ಲೋಕಸಬಾ ಸದಸ್ಯತ್ವವನ್ನು ಕಳೆದುಕೊಳ್ಳುವುದಾದರೆ, 70 ಶೇಕಡ ಸಂಸದರು ಈಗ ಅನರ್ಹರಾಗಬೇಕಾಗಿತ್ತು. ಅವರ ಪೈಕಿ ಹೆಚ್ಚಿನವರು ಬಿಜೆಪಿಯವರೇ ಆಗಿರುತ್ತಿದ್ದರು ಎಂದು ಮಾಯಾವತಿಯ ಬಹುಜನ ಸಮಾಜ ಪಕ್ಷದ ಸಂಸದ ದಾನಿಶ್ ಅಲಿ ಹೇಳಿದರು.

ನಮ್ಮ ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ?

ನಮ್ಮ ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ ಎಂದು ಸಿಪಿಐ ನಾಯಕ ಬಿನಯ್ ವಿಶ್ವಮ್ ಪ್ರಶ್ನಿಸಿದ್ದಾರೆ.

‘‘ನಮ್ಮ ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ? ಕೋಲಾರದಲ್ಲಿ ಮಾಡಿದ ಭಾಷಣಕ್ಕೆ ಸೂರತ್ನಲ್ಲಿ ಮೊಕದ್ದಮೆ. ಅದು ಕೂಡ ಎಷ್ಟು ವರ್ಷಗಳ ಬಳಿಕ? ಅವರಿಗೆ ಆಗದ ಯಾರೇ ಆದರೂ ಅವರು ನಿರ್ಧರಿಸುವ ಕಾರಣಕ್ಕಾಗಿ ಬಂಧನಕ್ಕೊಳಗಾಗುತ್ತಾರೆ! ಇಂದು ರಾಹುಲ್ ಗಾಂಧಿ, ನಾಳೆ ಅದು ನಾನು ಅಥವಾ ನೀವು ಆಗಬಹುದು. ಪ್ರಜಾಪ್ರಭುತ್ವವನ್ನು ಉಳಿಸಲು ಒಂದಾಗಬೇಕಾದ ಸಮಯವಿದು’’ ಎಂದು ಅವರು ಹೇಳಿದ್ದಾರೆ.

ಈ ವೇಗಕ್ಕೆ ನಾನು ದಂಗಾಗಿದ್ದೇನೆ: ತರೂರ್

ನ್ಯಾಯಾಲಯ ಆದೇಶ ನೀಡಿದ ಬಳಿಕ ಒಂದೇ ದಿನದಲ್ಲಿ ನಡೆದಿರುವ ಈ ಬೆಳವಣಿಗೆಯ ಬಗ್ಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಆಘಾತ ವ್ಯಕ್ತಪಡಿಸಿದ್ದಾರೆ.

‘‘ಈ ಕ್ರಮ ಮತ್ತು ಅದರ ವೇಗವನ್ನು ನೋಡಿ ನಾನು ದಂಗಾಗಿ ಹೋಗಿದ್ದೇನೆ. ನ್ಯಾಯಾಲಯ ಆದೇಶ ನೀಡಿದ 24 ಗಂಟೆಗಳ ಒಳಗೆ ಹಾಗೂ ಮೇಲ್ಮನವಿ ಸಲ್ಲಿಕೆ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ತಿಳಿದೂ ಈ ಕ್ರಮ ತೆಗೆದುಕೊಳ್ಳಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ’’ ಎಂದು ತಿರುವನಂತಪುರಂ ಸಂಸದ ಟ್ವೀಟ್ ಮಾಡಿದ್ದಾರೆ.

ಅಂದು ರಾಹುಲ್ ಅಧ್ಯಾದೇಶವನ್ನು ಹರಿದು ಹಾಕಿರದಿದ್ದರೆ...!

ಸಂಸದರು ಮತ್ತು ಶಾಸಕರ ಅನರ್ಹತೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ನಿವಾರಿಸಿಕೊಳ್ಳಲು 2013ರಲ್ಲಿ ಅಂದಿನ ಯುಪಿಎ ಸರಕಾರವು ಅಧ್ಯಾದೇಶವೊಂದನ್ನು ಜಾರಿಗೆ ತರಲು ಪ್ರಯತ್ನಿಸಿತ್ತು. ಆದರೆ, ಅಂದು ರಾಹುಲ್ ಗಾಂಧಿ ಆ ಅಧ್ಯಾದೇಶದ ಪ್ರತಿಯನ್ನು ಸಂಸತ್ನಲ್ಲಿ ಹರಿದು ಹಾಕಿದರು. ಬಳಿಕ ಸರಕಾರವು ಆ ಅಧ್ಯಾದೇಶವನ್ನು ಹಿಂದಕ್ಕೆ ಪಡೆದುಕೊಂಡಿತು.

ಆ ಅಧ್ಯಾದೇಶವು ಅಂದು ಜಾರಿಗೊಂಡಿದ್ದರೆ 10 ವರ್ಷಗಳ ಬಳಿಕ ಇಂದು ರಾಹುಲ್ ಗಾಂಧಿಯ ಲೋಕಸಭಾ ಸದಸ್ಯತ್ವ ಅನರ್ಹಗೊಳ್ಳುತ್ತಿರಲಿಲ್ಲ!

ಯಾವುದೇ ಪ್ರಕರಣದಲ್ಲಿ ಸಂಸದರು ಮತ್ತು ಶಾಸಕರು ದೋಷಿ ಎನ್ನುವುದನ್ನು ನ್ಯಾಯಾಲಯ ತೀರ್ಮಾನಿಸಿದರೆ ಹಾಗೂ ಅವರಿಗೆ ಕನಿಷ್ಠ ಎರಡು ವರ್ಷಗಳ ಜೈಲು ಶಿಕ್ಷೆ ನೀಡಿದರೆ, ಅವರ ಸದಸ್ಯತ್ವವು ತಕ್ಷಣದಿಂದ ಅನರ್ಹಗೊಳ್ಳುತ್ತದೆ ಹಾಗೂ ಆವರೆಗೆ ಇದ್ದ ಪದ್ಧತಿಯಂತೆ ಅವರಿಗೆ ಮೇಲ್ಮನವಿ ಸಲ್ಲಿಸಲು ಮೂರು ತಿಂಗಳ ಕಾಲಾವಕಾಶ ನೀಡಬಾರದು ಎಂದು ಸುಪ್ರೀಂ ಕೋರ್ಟ್ 2013 ಎಪ್ರಿಲ್ನಲ್ಲಿ ತೀರ್ಪು ನೀಡಿತು.

ಐದು ತಿಂಗಳ ಬಳಿಕ, ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು, ಸುಪ್ರೀಂ ಕೋರ್ಟ್ನ ತೀರ್ಪನ್ನು ನಿವಾರಿಸಿಕೊಳ್ಳುವುದಕ್ಕಾಗಿ ಅಧ್ಯಾದೇಶವೊಂದನ್ನು ತರಲು ಮುಂದಾಯಿತು. ಆಗ ರಾಹುಲ್ ಗಾಂಧಿ ಪಕ್ಷದ ನಿರ್ಧಾರವನ್ನು ಬಹಿರಂಗವಾಗಿಯೇ ವಿರೋಧಿಸಿದರು ಹಾಗೂ ಈ ಕ್ರಮವು ‘‘ಸಂಪೂರ್ಣ ಅಸಂಬದ್ಧ’’ ಎಂದು ಬಣ್ಣಿಸಿದರು.

‘‘ಅಧ್ಯಾದೇಶದ ವಿಷಯದಲ್ಲಿ ಸರಕಾರ ಮಾಡುತ್ತಿರುವುದು ತಪ್ಪು ಎಂದು ನನ್ನ ವೈಯಕ್ತಿಕ ಅಭಿಪ್ರಾಯ. ಇದೊಂದು ರಾಜಕೀಯ ನಿರ್ಧಾರ. ಇದನ್ನು ಎಲ್ಲಾ ಪಕ್ಷಗಳು ಮಾಡುತ್ತವೆ. ಈ ಅಸಂಬದ್ಧವನ್ನು ನಿಲ್ಲಿಸಲು ಇದು ಸಕಾಲ. ನಾವು ಭ್ರಷ್ಟಾಚಾರವನ್ನು ನಿಲ್ಲಿಸಬೇಕೆಂದು ನಿಜವಾಗಿಯೂ ಬಯಸಿದರೆ ಇಂಥ ಹೊಂದಾಣಿಕೆಗಳನ್ನು ಮಾಡುವಂತಿಲ್ಲ’’ ಎಂದು ರಾಹುಲ್ ಗಾಂಧಿ ಅಂದು ಹೇಳಿದ್ದರು.

ಈ ಅಧ್ಯಾದೇಶವನ್ನು ಹರಿದು ಬಿಸಾಡಬೇಕಾಗಿದೆ ಎಂದು ಅವರು ಹೇಳಿದರು. ಬಳಿಕ ಯುಪಿಎ ಸರಕಾರವು ಅದನ್ನು ವಾಪಸ್ ಪಡೆದುಕೊಂಡಿತು. ಇಂದು ಆ ಕಾರಣಕ್ಕಾಗಿಯೇ ರಾಹುಲ್ ಗಾಂಧಿ ತನ್ನ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ.

ಅನರ್ಹಗೊಳಿಸುವ ಅಧಿಕಾರ ಲೋಕಸಭಾ ಕಾರ್ಯಾಲಾಯಕ್ಕಿಲ್ಲ: ಮನೀಶ್ ತಿವಾರಿ

ವಯನಾಡ್ ಸಂಸದ ರಾಹುಲ್ ಗಾಂಧಿಯನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸುವ ನಿರ್ಧಾರ ತಪ್ಪು ಎಂದು ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದ್ದಾರೆ. ‘‘ಲೋಕಸಭಾ ಕಾರ್ಯಾಲಯವು ಸಂಸದರೊಬ್ಬರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ. ಈ ನಿರ್ಧಾರವನ್ನು ರಾಷ್ಟ್ರಪತಿಯವರು ಚುನಾವಣಾ ಆಯೋಗದೊಂದಿಗೆ ಚರ್ಚಿಸಿ ತೆಗೆದುಕೊಳ್ಳಬೇಕು’’ ಎಂದು ಅವರು ಅಭಿಪ್ರಾಯಪಟ್ಟರು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top