ನರೇಗಾ ಮೇಲಿನ ದಾಳಿ ವಿರುದ್ಧ ಶಾಂತಿಯುತ ಪ್ರತಿಭಟನೆಯನ್ನು ನಿಲ್ಲಿಸಿದ ದಿಲ್ಲಿ ಪೊಲೀಸರು: ಕಾರ್ಯಕರ್ತರ ಆರೋಪ
ಹೊಸದಿಲ್ಲಿ,ಮಾ.25: ದಿಲ್ಲಿ ವಿವಿಯ ಆರ್ಟ್ಸ್ ಫ್ಯಾಕಲ್ಟಿಯ ಹೊರಗೆ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ದಿಲ್ಲಿ ಪೊಲೀಸರು ನಿಲ್ಲಿಸಿದ್ದಾರೆ ಎಂದು ನರೇಗಾ ಯೋಜನೆಯ ಮೇಲೆ ನಡೆಯುತ್ತಿರುವ ದಾಳಿಯನ್ನು ವಿರೋಧಿಸಿ ಪ್ರತಿಭಟನಾನಿರತ ಕಾರ್ಯಕರ್ತರು ಶುಕ್ರವಾರ ಆರೋಪಿಸಿದ್ದಾರೆ.
ಪ್ರತಿಭಟನಾ ಸ್ಥಳದಿಂದ ತೆರಳುವಂತೆ ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಸೂಚಿಸುತ್ತಿರುವುದನ್ನು ತೋರಿಸುವ ವೀಡಿಯೊವನ್ನು ನರೇಗಾ ಸಂಘರ್ಷ ಮೋರ್ಚಾ ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದೆ.
ಕಡ್ಡಾಯ ಆನ್ಲೈನ್ ಹಾಜರಾತಿ ಮತ್ತು ಆಧಾರ್ ಆಧಾರಿತ ಹಣಪಾವತಿಯಂತಹ ಯೋಜನೆಗೆ ಸಂಬಂಧಿಸಿದ ಕ್ರಮಗಳ ವಿರುದ್ಧ ನರೇಗಾ ಕಾರ್ಮಿಕರು ಮತ್ತು ಕಾರ್ಯಕರ್ತರು ಕಳೆದೊಂದು ತಿಂಗಳಿನಿಂದಲೂ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಅಮೆರಿಕದ ವಿದ್ಯಾರ್ಥಿಯಾಗಿರುವ ಕಾರ್ಯಕರ್ತ ಸೋಮನಾಥ ಮತ್ತು ದಿಲ್ಲಿ ವಿವಿಯ ಹಲವಾರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಮತ್ತು ಅವರನ್ನು ಮಾರಿಸ್ ನಗರ ಸೈಬರ್ ಸೆಲ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಶುಕ್ರವಾರ ಟ್ವೀಟಿಸಿರುವ ನರೇಗಾ ಸಂಘರ್ಷ ಮೋರ್ಚಾ,ಬಡವರ ಪಾಲಿಗೆ ನಿರ್ಣಾಯಕವಾಗಿರುವ ವಿಷಯಗಳ ಮೇಲೆ ಸಾರ್ವಜನಿಕ ಚರ್ಚೆಗಳನ್ನು ನಡೆಸುವ ಶಾಂತಿಯುತ ಪ್ರತಿಭಟನಾಕಾರರ ಹಕ್ಕನ್ನು ಅಧಿಕಾರಿಗಳು ದಮನಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಪ್ರತಿಭಟನೆಯು ಶಾಂತಿ ಮತ್ತು ನೆಮ್ಮದಿಯನ್ನು ಕದಡಬಹುದು ಎಂದು ಆತಂಕಗೊಂಡಿದ್ದ ವಿವಿಯು ಪೊಲೀಸರನ್ನು ಸಂಪರ್ಕಿಸಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ಹೇಳಿದ್ದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.