‘ದೋಷಿ’ ಸಂಸದ, ಶಾಸಕರ ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ
ಹೊಸದಿಲ್ಲಿ, ಮಾ.25: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿದ ಬೆನ್ನಲ್ಲೇ, ಕ್ರಿಮಿನಲ್ ಪ್ರಕರಣದಲ್ಲಿ ದೋಷಿಗಳೆಂದು ಪರಿಗಣಿಸಲ್ಪಟ್ಟ ಜನಪ್ರತಿನಿಧಿಗಳು ಲೋಕಸಭೆ ಅಥವಾ ವಿಧಾನಸಭಾ ಸದಸ್ಯತ್ವದಿಂದ ತನ್ನಷ್ಟಕ್ಕೆ ಅನರ್ಹಗೊಳ್ಳುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ನಲ್ಲಿ ಶನಿವಾರ ಅರ್ಜಿ ಸಲ್ಲಿಕೆಯಾಗಿದೆ.
ಸಾಮಾಜಿಕ ಹೋರಾಟಗಾರ ಹಾಗೂ ಪಿಎಚ್ಡಿ ವಿಧ್ವಾಂಸ ಆಭಾ ಮುರಳೀಧರನ್ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಜನತಾ ಪ್ರಾತಿನಿಧ್ಯ ಕಾಯ್ದೆಯ 8(3)ನೇ ಪರಿಚ್ಚೇದದಡಿ ಜನಪ್ರತಿನಿಧಿಗಳನ್ನು ಶಾಸನಸಭೆಗಳ ಸದಸ್ಯತ್ವದಿಂದ ತನ್ನಷ್ಟಕ್ಕೆ ಅನರ್ಹಗೊಳ್ಳುವುದು ಏಕಪಕ್ಷೀಯವಾದುದು ಹಾಗೂ ಅಕ್ರಮವೆಂದು ಘೋಷಿಸಬೇಕೆಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.
ಮಾನಹಾನಿಕರನಿಂದನೆಯನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸುವ ಭಾರತೀಯ ದಂಡಸಂಹಿತೆಯ ಸೆಕ್ಷನ್ 499ನಡಿ ಅಥವಾ ಇತರ ಯಾವುದೇ ಅಪರಾಧಕ್ಕಾಗಿ ಎರಡು ವರ್ಷಗಳ ಗರಿಷ್ಠ ಜೈಲು ಶಿಕ್ಷೆ ವಿಧಿಸಲ್ಪಟ್ಟ, ಯಾವುದೇ ಶಾಸನಸಭೆಯ ಹಾಲಿ ಸದಸ್ಯನನ್ನು ಅನರ್ಹಗೊಳಿಸಬಾರದೆಂದು ಘೋಷಿಸುವಂತೆ ನ್ಯಾಯವಾದಿ ದೀಪಕ್ ಪ್ರಕಾಶ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ಕೋರಲಾಗಿದೆ. ಚುನಾಯಿತ ಜನಪ್ರತಿನಿಧಿಗಳನ್ನು ಶಾಸನಸಭೆಗಳಿಂದ ಅನರ್ಹಗೊಳಿಸುವುದು ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ ಅವರಿಗೆ ಗುಜರಾತ್ನ ಸೂರತ್ ನಗರದ ನ್ಯಾಯಾಲಯವು ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಅವರ ಲೋಕಸಭಾ ಸದಸ್ಯತ್ವವನ್ನು ಅನರ್ಹಗೊಳಿಸಿರುವ ಸಂದರ್ಭದಲ್ಲಿ ಈ ಅರ್ಜಿ ಸಲ್ಲಿಕೆಯಾಗಿರುವುದು ಹೆಚ್ಚಿನ ಮಹತ್ವವನ್ನು ಪಡೆದಿದೆ.
1951ರ ಜನತಾ ಪ್ರಾತಿನಿಧ್ಯ ಕಾಯ್ದೆಯಡಿ 3ನೇ ಅಧ್ಯಾಯದಡಿ ಶಾಸನಸಭಾ ಸದಸ್ಯತ್ವದಿಂದ ಅನರ್ಹಗೊಳಿಸುವ ಬಗ್ಗೆ ಪರಿಶೀಲಿಸುವ ಸಂದರ್ಭ ಆರೋಪಿಯು ಎಸಗಿರುವ ಅಪರಾಧದ ಸ್ವರೂಪ, ತೀವ್ರತೆ, ಆತ ವಹಿಸಿದ್ದ ಪಾತ್ರ ಇತ್ಯಾದಿ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ಅರ್ಜಿದಾರರು ಒತ್ತಾಯಿಸಿದ್ದಾರೆ.