ಪಡಿತರ ಚೀಟಿ ಲೋಪ ಸರಿಪಡಿಸಿದ ಬಳಿಕ 17 ಕ್ವಿಂಟಾಲ್ ರೇಷನ್ ಪಡೆದ ವ್ಯಕ್ತಿ!
ಡೆಹ್ರಾಡೂನ್: ಮೊದಲು ತಾಂತ್ರಿಕ ಸಮಸ್ಯೆ; ಇದೀಗ ಭರಪೂರ ಪಡಿತರ. ಇಂತಹದೊಂದು ಘಟನೆಗೆ ಸಾಕ್ಷಿಯಾಗಿರುವುದು ಹರಿದ್ವಾರದ ರಾಜೇಶ್ ಕುಮಾರ್ ಎಂಬ ವ್ಯಕ್ತಿ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಎಸಗಿದ ಲೋಪದಿಂದ ರಾಜೇಶ್ ಕುಮಾರ್ ಎರಡು ವರ್ಷಗಳ ಕಾಲ ಪಡಿತರದಿಂದ ವಂಚಿತನಾಗಿದ್ದ. ಈಗ ತಾಂತ್ರಿಕ ಸಮಸ್ಯೆ ಪರಿಹಾರವಾಗಿರುವುದರಿಂದ ಹಿಂಬಾಕಿಯೂ ಸೇರಿ ಒಟ್ಟು 17 ಕ್ವಿಂಟಾಲ್ ಪಡಿತರವನ್ನು ಆತ ಒಂದೇ ಬಾರಿಗೆ ಪಡೆಯಲಿದ್ದಾನೆ ಎಂದು Times of India ಸುದ್ದಿ ಸಂಸ್ಥೆ ವರದಿ ಮಾಡಿದೆ.
ತನ್ನ ಪಡಿತರ ಪೂರೈಕೆ ಏಕೆ ಸ್ಥಗಿತವಾಗಿದೆ ಮತ್ತು ಅದರ ಕಾರಣವೇನೆಂದು ಅರ್ಥವಾಗದೆ ರಾಜೇಶ್ ಕುಮಾರ್ ಮಾಹಿತಿ ಹಕ್ಕು ಅರ್ಜಿಯಡಿ ಉತ್ತರ ಬಯಸಿದ್ದರು. ಆದರೆ, ಹರಿದ್ವಾರದ ಲಕ್ಸರ್ ಪ್ರದೇಶದ ಪೂರೈಕೆ ನಿರೀಕ್ಷಕರೂ ಆಗಿರುವ ಸಾರ್ವಜನಿಕ ಮಾಹಿತಿ ಅಧಿಕಾರಿಯು ಆ ಅರ್ಜಿಗೆ ಸೂಕ್ತ ಉತ್ತರ ನೀಡಿರಲಿಲ್ಲ. ನಂತರ ಮಧ್ಯಪ್ರವೇಶಿಸಿದ ರಾಜ್ಯ ಮಾಹಿತಿ ಆಯುಕ್ತ ಯೋಗೇಶ್ ಭಟ್, ಆತನಿಗಿರುವ ಬಾಕಿ ಪಡಿತರವನ್ನು ಲೆಕ್ಕ ಹಾಕಿ ಅದನ್ನು ಆತನಿಗೆ ಪೊರೈಸುವಂತೆ ಸೂಚಿಸಿದ್ದಾರೆ. ಈ ಲೆಕ್ಕದಲ್ಲಿ ಆತನಿಗೆ ಒಟ್ಟಾರೆ 17 ಕ್ವಿಂಟಾಲ್ ಪ್ರಮಾಣದ ಅಕ್ಕಿ ಮತ್ತು ಗೋಧಿ ದೊರೆಯಲಿದೆ.
ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿರುವ ನೀವು ಇಷ್ಟು ದೊಡ್ಡ ಪ್ರಮಾಣದ ಪಡಿತರವನ್ನು ಹೇಗೆ ಸಂಗ್ರಹಿಸಿಡುತ್ತೀರಿ ಎಂಬ ಪ್ರಶ್ನೆಗೆ, "ಸಾಂಕ್ರಾಮಿಕ ಅವಧಿಯಲ್ಲಿ ನನ್ನ ಇಬ್ಬರು ಸಹೋದರಿಯರು ಹಾಗೂ ಸ್ನೇಹಿತರು ಗೋಧಿ ಹಾಗೂ ಅಕ್ಕಿ ಒದಗಿಸುವ ಮೂಲದ ದೊಡ್ಡ ಉಪಕಾರ ಮಾಡಿದರು. ಈಗ ಅವರಿಗೆ ಉಪಕಾರ ಮಾಡುವ ಸರದಿ ನನ್ನದು. ಉಳಿದ ಪಡಿತರವನ್ನು ಸಂಗ್ರಹಿಸಿಟ್ಟುಕೊಳ್ಳಲು ನನ್ನ ಬಳಿ ಸಾಕಷ್ಟು ಸ್ಥಳಾವಕಾಶವಿದೆ ಎಂದು ಭಾವಿಸಿದ್ದೇನೆ" ಎಂದು ರಾಜೇಶ್ ಕುಮಾರ್ ಉತ್ತರಿಸಿದ್ದಾರೆ.
ಖಾಸಗಿ ಕಂಪನಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿರುವ ರಾಜೇಶ್ ಕುಮಾರ್ ಅವರದು ಐದು ಮಂದಿಯ ಕುಟುಂಬ- ಪತ್ನಿ ಹಾಗೂ ಮೂವರು ಮಕ್ಕಳು ಸೇರಿ. "ನಾನು 2018ರಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದೆ. ನಾನು ಪ್ರತಿ ಬಾರಿ ಪೂರೈಕೆ ನಿರೀಕ್ಷಕರನ್ನು ಭೇಟಿಯಾದಾಗಲೂ ನಿಮ್ಮ ಪಡಿತರ ಚೀಟಿಯ ತಯಾರಿ ಪ್ರಗತಿಯಲ್ಲಿದೆ ಮತ್ತು ಶೀಘ್ರವೇ ನಿನಗೆ ನೀಡಲಾಗುವುದು ಎಂದು ಹೇಳುತ್ತಿದ್ದರು. ಆದರೆ, ಏನೂ ಆಗಲಿಲ್ಲ. ಆಗ ಒಬ್ಬರು, ಮಾಹಿತಿ ಹಕ್ಕು ಅರ್ಜಿಯ ಮೂಲಕ ನಿನ್ನ ಪಡಿತರ ಚೀಟಿಯ ಕುರಿತು ಮಾಹಿತಿ ಪಡೆಯಬಹುದು ಎಂದು ಸಲಹೆ ನೀಡಿದರು ಮತ್ತು ನಾನು ಅದಕ್ಕಾಗಿ ಅರ್ಜಿ ಸಲ್ಲಿಸಿದೆ" ಎಂದು ರಾಜೇಶ್ ಕುಮಾರ್ Times of India ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ನನಗೆ ಡಿಸೆಂಬರ್ 12, ,2021ರಲ್ಲಿ ಪಡಿತರ ಚೀಟಿ ಸಂಖ್ಯೆ ನೀಡಲಾಯಿತಾದರೂ ಪಡಿತರ ಚೀಟಿಯ ಪ್ರತಿಯನ್ನು ಒದಗಿಸಲಿಲ್ಲ. ನಂತರ ನಾನು ಆಹಾರ ಪೂರೈಕೆ ಇಲಾಖೆಯನ್ನು ಸಂಪರ್ಕಿಸಿ, 2022ರಲ್ಲಿ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದೆ. ಅದರಿಂದ ಯಾವುದೇ ಸಹಾಯವಾಗದಿದ್ದಾಗ ರಾಜ್ಯ ಮಾಹಿತಿ ಆಯುಕ್ತರ ಮೊರೆ ಹೋದೆ ಎಂದು ರಾಜೇಶ್ ಕುಮಾರ್ ಹೇಳಿದ್ದಾರೆ.
"ಆಗ ಲಕ್ಸರ್ನ ಪೂರೈಕೆ ನಿರೀಕ್ಷಕರಾಗಿದ್ದ ಬಬಿತಾ (ಆಕೆಯ ಮೊದಲ ಹೆಸರು) ಎಂಬವರು ಇಲಾಖೆಯಲ್ಲಿ ಡಿಸೆಂಬರ್ 16, 2021ರಿಂದ ಅಕ್ಟೋಬರ್ 7, 2022ರವರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ಫಲಾನುಭವಿಗೆ ಪಡಿತರ ಚೀಟಿಯ ಪಿಡಿಎಫ್ ಪ್ರತಿಯನ್ನು ಒದಗಿಸದ ಕಾರಣ ಆತ ಪಡಿತರ ಪಡೆಯಲು ಸಾಧ್ಯವಾಗಿರಲಿಲ್ಲ. ಪೂರೈಕೆ ನಿರೀಕ್ಷಕರು ತಮ್ಮ ಇಲಾಖಾ ಕರ್ತವ್ಯವನ್ನು ಹೊಣೆಗಾರಿಕೆಯಿಂದ ನಿರ್ವಹಿಸಿಲ್ಲ" ಎಂಬ ಸಂಗತಿಯನ್ನು ಗಮನಿಸಿದ ರಾಜ್ಯ ಮಾಹಿತಿ ಹಕ್ಕು ಆಯುಕ್ತರು ಆ ಅಧಿಕಾರಿಗೆ ರೂ. 25,000 ದಂಡವನ್ನೂ ವಿಧಿಸಿದ್ದಾರೆ.
ಭರಪೂರ ಪಡಿತರದಿಂದ ಸಂತಸಗೊಂಡಿರುವ ರಾಜೇಶ್ ಕುಮಾರ್, "ನಾವು ಈ ಪಡಿತರದಿಂದ ಮುಂದಿನ ಹಲವಾರು ಬೇಸಿಗೆ ಹಾಗೂ ಚಳಿಗಾಲಗಳನ್ನು ಕಳೆಯಲಿದ್ದೇವೆ" ಎಂದು ಹೇಳಿದ್ದಾರೆ.