ಶ್ರೀನಗರ: ಜಾಮಿಯಾ ಮಸೀದಿಯಲ್ಲಿ ಜುಮಾಅತುಲ್ ವಿದಾಅ್ ಪ್ರಾರ್ಥನೆಗೆ ಆಡಳಿತ ಅನುಮತಿ ನಿರಾಕರಣೆ
ಶ್ರೀನಗರ, ಎ. 14: ಶ್ರೀನಗರದಲ್ಲಿರುವ ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನಾ ಸಭೆ ಜುಮಾಅತುಲ್ ವಿದಾಅ್ (ರಮಝಾನ್ನ ಕೊನೆಯ ಶುಕ್ರವಾರ)ಗೆ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ ಎಂದು ಜಾಮಿಯಾ ಆಡಳಿತ ಸಮಿತಿ ಶುಕ್ರವಾರ ತಿಳಿಸಿದೆ.
ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಜಾಮಿಯಾ ಮಸೀದಿಗೆ ಬೆಳಗ್ಗೆ 9.30ಕ್ಕೆ ಭೇಟಿ ನೀಡಿದ್ದಾರೆ. ಈ ಮಸೀದಿಯಲ್ಲಿ ಜುಮಾಅತುಲ್ ವಿದಾಅ್ ಪ್ರಾರ್ಥನೆಗೆ ಅನುಮತಿ ನೀಡದಿರಲು ಆಡಳಿತ ನಿರ್ಧರಿಸುವುದರಿಂದ ಮಸೀದಿಯ ಗೇಟುಗಳಿಗೆ ಬೀಗ ಹಾಕುವಂತೆ ಆಡಳಿತ ಮಂಡಳಿಗೆ ಸೂಚಿಸಿದೆ ಎಂದು ಶ್ರೀನಗರದ ಜಾಮಿಯಾ ಮಸೀದಿ ಆಡಳಿತ ಸಮಿತಿ ಅಂಜುಮಾನ್ ಔಕಾಫ್ ನೀಡಿದ ಹೇಳಿಕೆ ತಿಳಿಸಿದೆ.
ಈ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಅಂಜುಮಾನ್, ಜಾಮಿಯಾ ಮಸೀದಿಯಲ್ಲಿ ರಮಝಾನ್ ಕೊನೆಯ ಶುಕ್ರವಾರ ಪ್ರಾರ್ಥನೆ ಸಲ್ಲಿಸಲು ಸಾಮಾನ್ಯವಾಗಿ ಕಣಿವೆಯ ಎಲ್ಲ ಭಾಗಗಳಿಂದ ಆಗಮಿಸುವ ಲಕ್ಷಾಂತರ ಜನರಿಗೆ ಇದು ಸಂಕಷ್ಟ ಉಂಟು ಮಾಡಲಿದೆ ಎಂದಿದೆ. ರಮಝಾನ್ನ ಕೊನೆಯ ಶುಕ್ರವಾರ ಪ್ರಾರ್ಥನೆ ಸಲ್ಲಿಸುವುದು ಹೆಚ್ಚಿನ ಮಹತ್ವ ಪಡೆದಿದೆ ಎಂದು ಅದು ತಿಳಿಸಿದೆ.