ಪಶ್ಚಿಮಬಂಗಾಳ: ಬಾಲಕಿ ಸಾವು; ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರತಿಭಟನಕಾರರು
ಕೋಲ್ಕತಾ, ಎ. 25: ಬಾಲಕಿಯೋರ್ವಳ ಸಾವಿನ ಕುರಿತಂತೆ ಮಂಗಳವಾರ ನಡೆದ ಪ್ರತಿಭಟನೆ ಸಂದರ್ಭ ಉದ್ರಿಕ್ತ ಗುಂಪೊಂದು ಕಾಲಿಯಾಗಂಜ್ ಪಟ್ಟಣದಲ್ಲಿರುವ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದೆ.
ಬಾಲಕಿ ಎಪ್ರಿಲ್ 20ರಂದು ನಾಪತ್ತೆಯಾಗಿದ್ದಳು. ಎಪ್ರಿಲ್ 21ರಂದು ಆಕೆಯ ಮೃತದೇಹ ಕೊಳವೊಂದರಲ್ಲಿ ಪತ್ತೆಯಾಗಿತ್ತು. ಬಾಲಕಿ ವಿಷ ಸೇವಿಸಿರುವುದರಿಂದ ಸಾವನ್ನಪ್ಪಿದ್ದಾಳೆ ಎಂದು ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ತಿಳಿಸಿದೆ ಎಂದು ಪೊಲೀಸರು ಹೇಳಿದ್ದರು.
ಆದರೆ, ಬಾಲಕಿಯ ಕುಟುಂಬ ಈ ವರದಿಯನ್ನು ನಿರಾಕರಿಸಿದೆ. ಬಾಲಕಿಯ ಮೇಲೆ ಅತ್ಯಾಚಾಗೈದು ಹತ್ಯೆಗೈಯಲಾಗಿದೆ ಎಂದು ಅದು ಆರೋಪಿಸಿದೆ. ಘಟನೆಯಲ್ಲಿ ಪೊಲೀಸರ ನಿಷ್ಕ್ರಿಯತೆ ಖಂಡಿಸಿ ಮಂಗಳವಾರ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.
ಬಾಲಕಿಯ ಸಾವಿನ ಕುರಿತಂತೆ ಈ ಪ್ರದೇಶದಲ್ಲಿ ಎಪ್ರಿಲ್ 22ರಂದು ನಡೆದ ಪ್ರತಿಭಟನೆ ಕೂಡ ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನಕಾರರು ಹಲವು ಇ-ರಿಕ್ಷಾ ಹಾಗೂ ಅಂಗಡಿಗಳಿಗೆ ಕಿಚ್ಚಿಟ್ಟಿದ್ದರು. ಇದರಿಂದ ಪೊಲೀಸರು ಪ್ರತಿಭಟನಕಾರರ ಮೇಲೆ ಅಶ್ರುವಾಯು ಸೆಲ್ಗಳನ್ನು ಸಿಡಿಸಿದ್ದರು ಹಾಗೂ ಲಾಠಿ ಪ್ರಹಾರ ಮಾಡಿದ್ದರು.
ಬಾಲಕಿಯ ಕುಟುಂಬ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ ಬಾಲಕಿಯ ಮೃತದೇಹವನ್ನು ರಸ್ತೆಯಲ್ಲಿ ಎಳೆದುಕೊಂಡ ಹೋದ ಆರೋಪದಲ್ಲಿ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಸೋಮವಾರ ಅಮಾನತುಗೊಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಬಾಲಕಿಯ ತಾಯಿ ಸಲ್ಲಿಸಿದ ದೂರಿನ ಆಧಾರದಲ್ಲಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಪೋಕ್ಸೊ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.