ಆಯುರ್ವೇದ, ಎಂಬಿಬಿಎಸ್ ವೈದ್ಯರಿಗೆ ಸಮಾನ ವೇತನ ನೀಡಬೇಕೆಂಬ ಗುಜರಾತ್ ಹೈಕೋರ್ಟ್ ಆದೇಶ ತಳ್ಳಿಹಾಕಿದ ಸುಪ್ರೀಂ
ಹೊಸದಿಲ್ಲಿ: ವೇತನ ಸವಲತ್ತನ್ನು ಪರಿಗಣಿಸಿದಾಗ ಆಯುರ್ವೇದ ವೈದ್ಯರನ್ನೂ ಎಂಬಿಬಿಎಸ್ ವೈದ್ಯರನ್ನೂ ಸಮನಾಗಿ ಕಾಣಬೇಕು ಎಂದು ಹೇಳಿ ಗುಜರಾತ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ಸಮಾನ ವೇತನ ಪಡೆಯಲು ಎರಡೂ ಪದ್ಧತಿಗಳ ವೈದ್ಯರು ಸಮನಾದ ಕೆಲಸ ಮಾಡುವುದಿಲ್ಲ ಎಂಬ ಅಂಶವನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ವಿ ರಾಮಸುಬ್ರಮಣಿಯನ್ ಹಾಗೂ ಪಂಕಜ್ ಮಿತ್ತಲ್ ಅವರ ಪೀಠ ಹೇಳಿದೆ.
“ಅಲೋಪಥಿ ವೈದ್ಯರು ತುರ್ತು ಸಂದರ್ಭಗಳಲ್ಲಿ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಅವರು ನಿರ್ವಹಿಸುವ ಈ ಕರ್ತವ್ಯವನ್ನು ಆಯರ್ವೇದ ವೈದ್ಯರು ಮಾಡಲು ಸಾಧ್ಯವಿಲ್ಲ. ಅದೇ ಸಮಯ ಕ್ಲಿಷ್ಟಕರ ಶಸ್ತ್ರಕ್ರಿಯೆಗಳನ್ನು ನಡೆಸುವ ವೈದ್ಯರಿಗೆ ಆಯರ್ವೇದ ವೈದ್ಯರು ಸಹಾಯ ಮಾಡಲು ಸಾಧ್ಯವಿಲ್ಲ, ಬದಲು ಎಂಬಿಬಿಎಸ್ ವೈದ್ಯರಿಗೆ ಇದು ಸಾಧ್ಯವಿದೆ, ಪರ್ಯಾಯ ವೈದ್ಯಕೀಯ ಪದ್ಧತಿ ಪ್ರಮುಖ ಸ್ಥಾನ ಪಡೆದಿದೆಯಾದರೂ ಹಾಗೂ ಆಯುರ್ವೇದ ವೈದ್ಯರಿಗೂ ಮಹತ್ವದ ಸ್ಥಾನವಿದೆಯಾದರೂ ಎರಡೂ ಪದ್ಧತಿಯ ವೈದ್ಯರುಗಳಿಗೆ ಸಮಾನ ವೇತನ ನೀಡಲು ಅವರು ಸಮಾನ ಕೆಲಸ ಮಾಡುತ್ತಿಲ್ಲ ಎಂಬ ಅಂಶ ಕಡೆಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಟಿಕ್ಕು ವೇತನ ಆಯೋಗದ ಶಿಫಾರಸಿನಂತೆ ಆಯುರ್ವೇದ ವೈದ್ಯರಿಗೂ ಎಂಬಿಬಿಎಸ್ ವೈದ್ಯರಂತೆ ಸಮಾನ ವೇತನ ಒದಗಿಸಬೇಕೆಂಬ ಗುಜರಾತ್ ಹೈಕೋರ್ಟಿನ 2013 ಆದೇಶವನ್ನು ಪ್ರಶ್ನಿಸಿ ಗುಜರಾತ್ ಸರ್ಕಾರಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸುವಾಗ ಸುಪ್ರೀಂ ಕೋರ್ಟ್ ಮೇಲಿನಂತೆ ಹೇಳಿದೆ.