ನಾವು ಪ್ರಕರಣದ ವಿಚಾರಣೆ ನಡೆಸುವುದು ಅವರಿಗೆ ಬೇಕಿಲ್ಲ: ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳ ಕುರಿತು ಸುಪ್ರೀಂಕೋರ್ಟ್
ಹೊಸದಿಲ್ಲಿ: ವಿಚಾರಣೆಯನ್ನು ತಪ್ಪಿಸಲು ಹಲವಾರಿ ಪ್ರಕ್ರಿಯಾತ್ಮಕ ಆಕ್ಷೇಪಣೆಗಳನ್ನು ಎತ್ತಿ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳು ಹೆಚ್ಚು ಸಮಯ ಪಡೆಯಲು ಯತ್ನಿಸುತ್ತಿರುವುದು ಸ್ಪಷ್ಟವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ ಎಂ ಜೋಸೆಫ್ ಹೇಳಿದ್ದಾರೆ. ಅಪರಾಧಿಗಳೆಲ್ಲರನ್ನೂ ಜೀವಾವಧಿ ಶಿಕ್ಷೆ ಅವಧಿ ಪೂರ್ಣಗೊಳ್ಳುವ ಮುನ್ನವೇ ಸನ್ನಡತೆಯ ಕಾರಣ ನೀಡಿ ಬಿಡುಗಡೆಗೊಳಿಸಲಾಗಿದೆ.
ತಮ್ಮ ನಿವೃತ್ತಿಗೆ ಇನ್ನು ಕೆಲವೇ ದಿನಗಳಿರುವುದರಿಂದ ತಮ್ಮ ಬಳಿ ಹೆಚ್ಚು ಸಮಯವಿಲ್ಲ ಎಂದೂ ನ್ಯಾಯಮೂರ್ತಿ ಜೋಸೆಫ್ ಹೇಳಿದರು.
“ನಾನು ಜೂನ್ 16ಕ್ಕೆ ನಿವೃತ್ತಿಗೊಳ್ಳುತ್ತಿದ್ದೇನೆ. ನನ್ನ ಕೊನೆಯ ಕೆಲಸದ ದಿನ ಮೇ 19(ಜುಲೈ 2ರ ತನಕದ ಬೇಸಿಗೆ ರಜಾ ಮುಂಚಿತವಾಗಿ ಕೊನೆಯ ಕಾರ್ಯ ದಿನ). ನಾವು ಪ್ರಕರಣ ವಿಚಾರಣೆ ನಡೆಸುವುದು ಅವರಿಗೆ ಬೇಕಿಲ್ಲ ಎಂಬುದು ಸ್ಪಷ್ಟ,” ಎಂದು ಬಾನು ಅವರ ವಕೀಲರಾದ ಶೋಭಾ ಗುಪ್ತಾ ಅವರನ್ನದ್ದೇಶಿಸಿ ಜಸ್ಟಿಸ್ ಜೋಸೆಫ್ ಹೇಳಿದರು. ಈ ಪೀಠದಲ್ಲಿ ಜಸ್ಟಿಸ್ ಬಿ ವಿ ನಾಗರತ್ನ ಕೂಡ ಇದ್ದಾರೆ ಎಂದು thehindu.com ವರದಿ ಮಾಡಿದೆ.
ತಮಗೆ ನೋಟಿಸ್ ಬಂದಿಲ್ಲ ಎಂದು ಬಿಡುಗಡೆಗೊಂಡಿರುವ 11 ಮಂದಿ ಅಪರಾಧಿಗಳ ಪರ ವಕೀಲರ ಸಲ್ಲಿಕೆಗಳ ನಂತರ ನ್ಯಾಯಪೀಠದ ಮೌಖಿಕ ಹೇಳಿಕೆ ಬಂದಿದೆ. ಅಷ್ಟೇ ಅಲ್ಲದೆ ಅಪರಾಧಿಗಳು ತಮಗೆ ಕೌಂಟರ್ ಅಫಿಡವಿಟ್ ಸಲ್ಲಿಸಲು ಅನುಕೂಲವಾಗಲು ಪ್ರಕರಣದ ವಿಚಾರಣೆಯನ್ನು ಕನಿಷ್ಠ ಎರಡು ವಾರಗಳ ಕಾಲ ಮುಂದೂಡಬೇಕೆಂದು ಕೋರಿದರು.
ಅಪರಾಧಿಗಳ ಜೀವಾವಧಿ ಶಿಕ್ಷೆ ಕಡಿತಗೊಳಿಸಿ ಬಿಡುಗಡೆಗೊಳಿಸಿದ ಗುಜರಾತ್ ಸರ್ಕಾರ ಕೈಗೊಂಡ ನಿರ್ಧಾರವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭ ಈ ಬೆಳವಣಿಗೆ ನಡೆದಿದೆ.
ಬಿಡುಗಡೆಗೊಂಡ ಅಪರಾಧಿಗಳಿಗೆ ಈ ರೀತಿ ನ್ಯಾಯದಾನ ಪ್ರಕ್ರಿಯೆಗೆ ಅಡ್ಡಿ ಬರಲು ಅನುಮತಿಸಬಾರದು, ಈ ರೀತಿಯ ನೆಪಗಳಿಗೆ ಅನುಮತಿಸಬಾರದು ಎಂದು ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಮತ್ತು ವೃಂದಾ ಗ್ರೋವರ್ ಹೇಳಿದರು.
ಒಂದು ಹಂತದಲ್ಲಿ ಈ ಪ್ರಕರಣವನ್ನು ಬೇಸಿಗೆ ರಜಾಸಮಯದಲ್ಲೂ ವಿಚಾರಣೆ ನಡೆಸಲು ಪೀಠ ಮುಂದೆ ಬಂತಾದರೂ ಕೇಂದ್ರ ಮತ್ತು ಗುಜರಾತ್ ಸರ್ಕಾರ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅದಕ್ಕೆ ಒಪ್ಪಲಿಲ್ಲ.
ಪ್ರಕರಣದ ಮುಂದಿನ ವಿಚಾರಣೆ ಜುಲೈ ತಿಂಗಳಿನಲ್ಲಿ ನಡೆಯಲಿದೆ.