ಹಿಂಸಾಪೀಡಿತ ಮಣಿಪುರದಿಂದ ಅಸ್ಸಾಂಗೆ ವಲಸೆ ಹೋದ 1,100 ಕ್ಕೂ ಹೆಚ್ಚು ಜನ
ಸಿಲ್ಚಾರ್: ರಾಜ್ಯದಲ್ಲಿ ಭುಗಿಲೆದ್ದ ಹಿಂಸಾಚಾರದ ನಂತರ ಮಣಿಪುರದ ಜಿರಿಬಾಮ್ ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ 1,100 ಕ್ಕೂ ಹೆಚ್ಚು ಜನರು ಅಂತರರಾಜ್ಯ ಗಡಿಯನ್ನು ದಾಟಿ ಅಸ್ಸಾಂನ ಕ್ಯಾಚಾರ್ ಜಿಲ್ಲೆಗೆ ಪ್ರವೇಶಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ವಲಸಿಗರಲ್ಲಿ ಹೆಚ್ಚಿನವರು ಕುಕಿ ಸಮುದಾಯದವರು ಹಾಗೂ ಮಣಿಪುರದಲ್ಲಿರುವ ತಮ್ಮ ಮನೆಗಳನ್ನು ಗುಂಪುಗಳು ದಾಳಿ ನಡೆಸಿ ಧ್ವಂಸಗೊಳಿಸುವ ಭಯದಲ್ಲಿ ಗುರುವಾರ ರಾತ್ರಿಯೇ ಪಲಾಯನಗೈದಿದ್ದಾರೆ.
"ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ನಮ್ಮ ಪ್ರದೇಶದಲ್ಲಿ ಕಿರುಚಾಟ ಕೇಳಿದಾಗ ನಮ್ಮ ಮೇಲೆ ದಾಳಿಯಾಗಿದೆ ಎಂದು ನಮಗೆ ಅರಿವಾಗಲು ಕೆಲವು ನಿಮಿಷಗಳು ಬೇಕಾಯಿತು. ಅವರು ಕಲ್ಲು ತೂರಾಟ ನಡೆಸುತ್ತಿದ್ದರು, ಬೆದರಿಕೆ ಹಾಕಿದರು ಹಾಗೂ ಇದು ತಮ್ಮ ಅಂತಿಮ ಯುದ್ಧ ಎಂದು ಹೇಳುತ್ತಿದ್ದರು'' ಎಂದು 43- ವರ್ಷ ವಯಸ್ಸಿನ ಎಲ್. ಮುವಾಂಗ್ಪು, ಜಿರಿಬಾಮ್ ನಿವಾಸಿ ರಾಜ್ಯದ ಗಡಿ ದಾಟಿದ ನಂತರ ಹೇಳಿದರು.
ತನ್ನ ಕುಟುಂಬ ಸದಸ್ಯರೊಂದಿಗೆ ತಮ್ಮ ಮನೆಯಿಂದ ಪಲಾಯನಗೈದಿರುವ ಮತ್ತೊಬ್ಬ ನಿವಾಸಿ, 24 ವರ್ಷದ ವಹ್ಸಿ ಖೋಂಗ್ಸಾಯಿ,, ಗುರುವಾರ ಬೆಳಿಗ್ಗೆ ತಮ್ಮ ಪ್ರದೇಶದಲ್ಲಿ ಶಾಂತಿ ಸಭೆ ಇತ್ತು ಮತ್ತು ಮೈಟೆ ಮತ್ತು ಕುಕಿ ಎರಡೂ ಸಮುದಾಯಗಳು ಪರಸ್ಪರರ ರಕ್ಷಣೆಗೆ ಭರವಸೆ ನೀಡಿದ್ದವು ಎಂದು ಹೇಳಿದರು.
"ಒಂದು ನಿರ್ಣಯವನ್ನು ತೆಗೆದುಕೊಳ್ಳಲಾಗಿತ್ತು. ಎರಡೂ ಸಮುದಾಯಗಳು ಪರಸ್ಪರರ ರಕ್ಷಣೆಗೆ ಒಪ್ಪಿಕೊಂಡಿರುವುದಕ್ಕೆ ನಮಗೆ ಸಂತೋಷವಾಗಿತ್ತು. ಆದರೆ ರಾತ್ರಿಯ ವೇಳೆ ಅದು ಸುಳ್ಳು ಒಪ್ಪಂದ ಎಂಬ ಅರಿವು ನಮಗಾಯಿತು. ಅವರು ಮೊದಲು ಚರ್ಚ್ ಮೇಲೆ ದಾಳಿ ಮಾಡಿ ನಮ್ಮ ಮನೆಗಳನ್ನು ಸುಡಲು ಪ್ರಯತ್ನಿಸಿದರು. ನಮ್ಮಲ್ಲಿರುವ ಪುರುಷರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ನಮ್ಮನ್ನು ರಕ್ಷಿಸಿದರು”ಎಂದು ಖೋಂಗ್ಸಾಯಿ ಹೇಳಿದರು.