ಮಾಂಸಾಹಾರಕ್ಕೆ ಸಂಪೂರ್ಣ ನಿಷೇಧ ಹೇರಬಯಸಿದ ಮುನಿಸಿಪಲ್ ಅಧ್ಯಕ್ಷ
ಫೇಸ್ಬುಕ್ ನಲ್ಲಿ ವೈರಲ್ ಆದ ಬಿಜೆಪಿ ನಾಯಕನ ಪೋಸ್ಟ್
ಭೋಪಾಲ್, ಎ.10: ಖ್ಯಾತ ಹಿಂದಿ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಯವರ ಕೆನ್ನೆಗೆ ಹೊಡೆದವರಿಗೆ ನಗದು ಬಹುಮಾನವನ್ನು ಘೋಷಿಸಿ ಸುದ್ದಿಯಾಗಿದ್ದ ಬಿಜೆಪಿ ನಾಯಕರೊಬ್ಬರು ಇದೀಗ ಭೋಪಾಲದಿಂದ 70 ಕಿ.ಮೀ. ದೂರದಲ್ಲಿರುವ ಸಣ್ಣ ನಗರವಾದ ಹೊಶಂಗಾಬಾದ್ ನಲ್ಲಿ ಸಂಪೂರ್ಣ ಮಾಂಸ ನಿಷೇಧ ಹೇರಬೇಕೆಂದು ಬಯಸಿದ್ದಾರೆ.
ಸಂಪೂರ್ಣ ಮಾಂಸ ನಿಷೇಧಕ್ಕೆ ಮುಂದಾಗಿರುವ ಅಖಿಲೇಶ್ ಖಂಡೇಲ್ವಾಲ್ ಹೊಶಂಗಾಬಾದ್ ಮುನಿಸಿಪಲ್ ಅಧ್ಯಕ್ಷನಾಗಿದ್ದು, ತನ್ನ ನಗರ ಸಂಪೂರ್ಣವಾಗಿ ಶಾಖಾಹಾರಿಯಾಗಬೇಕೆಂದು ಬಯಸಿದ್ದಾರೆ. ‘‘ಹೊಶಂಗಾಬಾದ್ ನಲ್ಲಿ ಮಾಂಸ ಹಾಗೂ ಮೀನು ಮಾರಾಟ ನಿಷೇಧಿಸಬೇಕೇ? ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಡಿದ್ದನ್ನು ನಾನು ಪ್ರಶಂಸಿಸುತ್ತೇನೆ. ಮಾಂಸವನ್ನು ಮಧ್ಯ ಪ್ರದೇಶದಲ್ಲೂ ನಿಷೇಧಿಸಬೇಕು, ಕನಿಷ್ಠ ನರ್ಮದಾ ನದಿ ತೀರದಲ್ಲಿರುವ ಹೊಶಂಗಾಬಾದ್ ನಂತಹ ನಗರಗಳಲ್ಲಿ ನಿಷೇಧಿಸಬೇಕು’’ ಎಂಬ ಅವರ ಪೋಸ್ಟ್ ವೈರಲಾಗಿದೆ. ಅದಕ್ಕೆ ಕೆಲವೇ ನಿಮಿಷಗಳಲ್ಲಿ 400ಕ್ಕೂ ಅಧಿಕ ಲೈಕುಗಳು ಹಾಗೂ 300 ಕಮೆಂಟುಗಳು ಬಂದಿವೆ.
ಹೆಚ್ಚಿನವರು ತಮ್ಮ ನಗರ ಶಾಖಾಹಾರಿಯಾಗುವುದಕ್ಕೆ ಬೆಂಬಲ ವ್ಯಕ್ತಪಡಿಸಿದ್ದರೆ ಕೆಲವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಂತಹ ವಿಚಾರಗಳಿಗೆ ತಲೆಕೆಡಿಸುವ ಬದಲು ನಗರದ ಸಮಸ್ಯೆಗಳತ್ತ ಗಮನ ಹರಿಸುವಂತೆ ಇನ್ನು ಕೆಲವರು ಸಲಹೆ ನೀಡಿದ್ದಾರೆ. ತಮ್ಮ ಈ ಪೋಸ್ಟ್ ನ ಪ್ರತಿಕ್ರಿಯೆ ಹೇಗಿರುತ್ತದೆಯೆಂದು ತಾವು ಒಂದು ವಾರ ಕಾದು ನೋಡುವುದಾಗಿ ಅಖಿಲೇಶ್ ಖಂಡೇಲ್ವಾಲ್ ಹೇಳಿದ್ದಾರೆ.