ಆಚಾರ್ಯ ಧರ್ಮೇಂದ್ರ ಪ್ರಕಾರ ಗೋವು ರಾಷ್ಟ್ರೀಯ ಪ್ರಾಣಿ ಅಲ್ಲ, ಅದು ರಾಷ್ಟ್ರೀಯ...!
ರಾಜಸ್ಥಾನ, ಜೂ.1: ಗೋವನ್ನು ರಾಷ್ಟ್ರಪ್ರಾಣಿಯಾಗಿ ಘೋಷಿಸಬೇಕು ಎಂಬ ರಾಜಸ್ಥಾನ ಹೈಕೋರ್ಟ್ ನ್ಯಾಯಾಧೀಶರ ಹೇಳಿಕೆಗೆ ಅಸಮ್ಮತಿ ವ್ಯಕ್ತಪಡಿಸಿರುವ ಸಂಘಪರಿವಾರ ಮುಖಂಡ ಆಚಾರ್ಯ ಧರ್ಮೇಂದ್ರ ಗೋವನ್ನು ರಾಷ್ಟ್ರಪ್ರಾಣಿಯ ಬದಲಾಗಿ “ರಾಷ್ಟ್ರಮಾತೆ” ಎಂದು ಘೋಷಿಸಬೇಕು ಎಂದಿದ್ದಾರೆ.
“ಗೋವನ್ನು ಪ್ರಾಣಿಯೆಂದು ಕರೆಯಲಾಗದು. ಆದ್ದರಿಂದ ರಾಷ್ಟ್ರಪ್ರಾಣಿ ಎಂದು ಘೋಷಿಸುವುದು ಸರಿಯಲ್ಲ. ಬದಲಾಗಿ ಗೋವನ್ನು ರಾಷ್ಟ್ರಮಾತೆ ಎಂದು ಘೋಷಿಸಬೇಕು” ಎಂದು ಬಾಬರಿ ಮಸೀದಿ ದ್ವಂಸ ಪ್ರಕರಣದ ಆರೋಪಿ ಧರ್ಮೇಂದ್ರ ಹೇಳಿದ್ದಾರೆ.
ಪ್ರಚೋದನಕಾರಿ ಭಾಷಣ ಪ್ರಕರಣದಲ್ಲಿ ಬಾರನ್ ನ್ಯಾಯಾಲಯದಿಂದ ಜಾಮೀನು ಪಡೆದ ನಂತರ ಅವರು ಮಾತನಾಡುತ್ತಿದ್ದರು.
ಹೆಣ್ಣು ನವಿಲು ಗಂಡು ನವಿಲಿನ ಕಣ್ಣೀರಿನಿಂದ ಗರ್ಭ ಧರಿಸುತ್ತದೆ ಎನ್ನುವ ನ್ಯಾಯಾಧೀಶ ಶರ್ಮಾ ಅವರ ಹೇಳಿಕೆ ಒಪ್ಪುವಂತದ್ದಲ್ಲ. ನವಿಲುಗಳು ಲೈಂಗಿಕ ಕ್ರಿಯೆಯ ಮೂಲಕ ಸಂತಾನೋತ್ಪತ್ತಿ ನಡೆಸುತ್ತದೆ ಎಂದವರು ಹೇಳಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರ ಹಿಂದೂಗಳ ಬೇಡಿಕೆಗಳನ್ನು ಈಡೇರಿಸಿಲ್ಲ. ಪಿಂಕ್ ರೆವೆಲ್ಯೂಶನ್ (ಗುಲಾಬಿ ಕ್ರಾಂತಿ) ಬಗ್ಗೆ ಟೀಕಿಸುತ್ತಾ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದ ಅವಧಿಯಲ್ಲಿ ಬೀಫ್ ರಫ್ತು ಹೆಚ್ಚುತ್ತಿದೆ. ಪಾಕಿಸ್ತಾನವನ್ನು ಶತ್ರುದೇಶ ಎನ್ನುವ ಬದಲು ನೆರೆಯದೇಶ ಎಂದು ಪರಿಗಣಿಸಲಾಗುತ್ತಿದೆ ಎಂದವರು ಟೀಕಿಸಿದರು.