ದನವನ್ನು ರಕ್ಷಣೆ ಮಾಡುವ ಯತ್ನದಲ್ಲಿ ಮಹಿಳೆಯನ್ನು ಬಲಿ ತೆಗೆದ ಪೊಲೀಸ್ ಜೀಪ್
ಮೂವರಿಗೆ ಗಾಯ
ಬಲ್ರಾಂಪುರ್, ಜೂ.3: ಪೊಲೀಸ್ ಜೀಪು ಡಿಕ್ಕಿಯಾಗಿ ಓರ್ವ ಮಹಿಳೆ ಮೃತಪಟ್ಟು ಆಕೆಯ ಇಬ್ಬರು ಮೊಮ್ಮಕ್ಕಳ ಸಹಿತ ಮೂವರು ಗಾಯಗೊಂಡ ಘಟನೆ ಉ.ಪ್ರದೇಶದಲ್ಲಿ ನಡೆದಿದೆ. ರಸ್ತೆಗೆ ಅಡ್ಡ ಬಂದ ದನವನ್ನು ರಕ್ಷಿಸಲು ಜೀಪಿನ ಚಾಲಕ ಪ್ರಯತ್ನಿಸಿದಾಗ ಈ ದುರಂತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹರಿಯ ಟೌನ್ಶಿಪ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಉಷಾ ದೇವಿ(60 ವರ್ಷ) ಎಂಬ ಮಹಿಳೆ ತನ್ನ ಇಬ್ಬರು ಮೊಮ್ಮಕ್ಕಳೊಂದಿಗೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಆ ರಸ್ತೆಯಲ್ಲಿ ಸಾಗುತ್ತಿದ್ದ ಪೊಲೀಸ್ ಜೀಪೊಂದಕ್ಕೆ ದನವೊಂದು ಅಡ್ಡ ಬಂದಿದ್ದು ದನವನ್ನು ಬಚಾವ್ ಮಾಡುವ ಯತ್ನದಲ್ಲಿ ಡ್ರೈವರ್ನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಪಕ್ಕ ಸಾಗುತ್ತಿದ್ದವರ ಮೇಲೆ ನುಗ್ಗಿದೆ. ಉಷಾ ದೇವಿ ಸ್ಥಳದಲ್ಲೇ ಮೃತಪಟ್ಟರೆ ಆಕೆಯ ನಾಲ್ಕು ಮತ್ತು ಎರಡು ವರ್ಷದ ಮೊಮ್ಮಕ್ಕಳು ಹಾಗೂ ಮತ್ತೋರ್ವ ಗಾಯಗೊಂಡಿದ್ದು ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಜೀಪಿನ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.