ವಿಧವೆಯ ಸಾಮೂಹಿಕ ಅತ್ಯಾಚಾರ, ಹತ್ಯೆ
ಒಡಿಶಾದಲ್ಲೊಂದು ನಿರ್ಭಯಾ ಪ್ರಕರಣ
ಭುವನೇಶ್ವರ, ಜೂ.15: ವಿಧವೆಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ನಿರ್ದಯವಾಗಿ ಹತ್ಯೆ ಮಾಡಿದ ಹೃದಯ ವಿದ್ರಾವಕ ಘಟನೆ ಧೇನ್ಕಾನಲ್ ಜಿಲ್ಲೆಯ ಕಂಕದಹಾಡ ಎಂಬಲ್ಲಿ ನಡೆದಿದೆ. ಆರೋಪಿಗಳಲ್ಲಿ ಮಹಿಳೆಯ ಸೊಸೆಯ ಪತಿ ಕೂಡಾ ಸೇರಿದ್ದಾನೆ.
ಸೊಸೆಯ ಪತಿ ತನ್ನ ಪತ್ನಿಯ ವಿರುದ್ಧವೇ ವ್ಯಭಿಚಾರ ಆರೋಪ ಹೊರಿಸಿದ್ದ. ಆಗ ಈ ಮಹಿಳೆ ಸೊಸೆಯ ಪರವಾಗಿ ನಿಂತದ್ದೇ ಈ ದೌರ್ಜನ್ಯಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿ ಪಾತ್ರ, ರಘು ಲೋಹರ್, ಆನಂದ ಪಾತ್ರ ಹಾಗೂ ಸದಾಶಿವ ಲೋಹರ್ ಎಂಬವರನ್ನು ಬಂಧಿಸಲಾಗಿದೆ. ಮೊದಲ ಇಬ್ಬರು ಅತ್ಯಾಚಾರ ಎಸಗಿ ಮಹಿಳೆಯನ್ನು ಹತ್ಯೆ ಮಾಡಿದ್ದರೆ, ಉಳಿದ ಇಬ್ಬರು ಈ ಕೃತ್ಯ ಎಸಗುವ ವೇಳೆ ಸಂತ್ರಸ್ತೆ ಮನೆಯ ಮುಂದೆ ಕಾವಲು ಕಾಯುವ ಮೂಲಕ ಅತ್ಯಾಚಾರಿಗಳಿಗೆ ನೆರವಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಎಲ್ಲಾ ಆರೋಪಿಗಳು 20-25 ವರ್ಷ ವಯಸ್ಸಿನವರಾಗಿದ್ದು, ಹತ್ಯೆಗೀಡಾದ ಮಹಿಳೆ 45 ವರ್ಷದವರು. ಕಾಡಿನೊಳಗೆ ಇರುವ ಬುಡಕಟ್ಟು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಹರಿ ಪಾತ್ರ ಮೂರು ದಿನಗಳ ಹಿಂದೆ ತನ್ನ ಪತ್ನಿಯ ವಿರುದ್ಧ ವ್ಯಭಿಚಾರದ ಆರೋಪ ಹೊರಿಸಿದ್ದ. ಈ ವಿಷಯವನ್ನು ಗ್ರಾಮದ ಮುಖ್ಯಸ್ಥನ ಬಳಿಗೆ ಒಯ್ದಿದ್ದ. ನ್ಯಾಯ ಪಂಚಾಯ್ತಿಯಲ್ಲಿ ಹರಿ ತನ್ನ ಪತ್ನಿಯನ್ನು ಬಿಡುವಂತೆ ಸೂಚಿಸಲಾಗಿತ್ತು. ಆ ಸಂದರ್ಭದಲ್ಲಿ ಸೊಸೆಯ ಪರವಾಗಿ ಮಹಿಳೆ ನಿಂತ ಹಿನ್ನೆಲೆಯಲ್ಲಿ ಹರಿ ಕೋಪಗೊಂಡು ಈ ಕೃತ್ಯಕ್ಕೆ ಮುಂದಾಗಿದ್ದ.
ಸಂತ್ರಸ್ತೆಯ ಮನೆಗೆ ನುಗ್ಗಿದ ಆರೋಪಿಗಳು, ಆಕೆಯ ಎರಡನೇ ಮಗನ ಎದುರೇ ಸಾಮೂಹಿಕವಾಗಿ ಅತ್ಯಾಚಾರ ಎಸಗಿ, ಕಬ್ಬಿಣದ ಸಲಾಕೆ ಮತ್ತಿತರ ಸಾಮಗ್ರಿಗಳನ್ನು ಗುಪ್ತಾಂಗಕ್ಕೆ ತಿವಿದಿದ್ದಾರೆ. ಭೀಕರ ರಕ್ತಸ್ರಾವದಿಂದ ಮಹಿಳೆ ಒದ್ದಾಡುತ್ತಿದ್ದಾಗ, ಮಗ ಬೊಬ್ಬಿಟ್ಟಿದ್ದ. ಈ ಸಂದರ್ಭ ಅವರನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಯ್ಯುವ ಮಧ್ಯೆಯೇ ಮೃತಪಟ್ಟರು. ಘಟನೆ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಘಟನೆಯ ಸ್ಥಳದಲ್ಲಿ ಸಂಜಯ ಪಾತ್ರ ಎಂಬವರಿಗೆ ಸೇರಿದ ಮೊಬೈಲ್ ಪತ್ತೆಯಾಗಿದ್ದು, ಪ್ರಕರಣದಲ್ಲಿ ಬೇರೆಯವರೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.