ಧಾರ್ಮಿಕ ಗ್ರಂಥ ಹರಿದೆಸೆದ ಬಿಜೆಪಿ ಮುಖಂಡ: ಆರೋಪ
ಪ್ರತಾಪಗಡ(ಉ.ಪ್ರದೇಶ), ಜೂ.24: ಇಲ್ಲಿಗೆ ಸಮೀಪದ ಲಾಲ್ಗಂಜ್ ಎಂಬಲ್ಲಿರುವ ಸ್ಮಶಾನದಲ್ಲಿರುವ ಮರಗಳನ್ನು ಕಡಿಯುವುದನ್ನು ವಿರೋಧಿಸಿದ ವ್ಯಕ್ತಿಯೋರ್ವರ ಮನೆಗೆ ನುಗ್ಗಿ, ಧಾರ್ಮಿಕ ಗ್ರಂಥವನ್ನು ಹರಿದು ಬಿಸಾಕಿ, ಮನೆಯಲ್ಲಿದ್ದ ವಸ್ತುಗಳನ್ನು ದೋಚಿದ ಆರೋಪದಲ್ಲಿ ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ ದಾಖಲಾಗಿದೆ.
ಮಾಜಿ ವಿಧಾನಪರಿಷತ್ ಸದಸ್ಯ ಆನಂದ್ ಭೂಷಣ್ ಸಿಂಗ್ ಮತ್ತು ಅವರ ಕೆಲ ಸಹಚರರು ಸ್ಮಶಾನದಲ್ಲಿದ್ದ ಮರಗಳನ್ನು ಕಡಿಯಲು ಮುಂದಾಗಿದ್ದು ಅದನ್ನು ತಾನು ವಿರೋಧಿಸಿದ್ದೆ. ಆಗ ಅವರು ಬೆನ್ನಟ್ಟಿಕೊಂಡು ಬಂದರು. ತಾನು ಮನೆಯೊಳಗೆ ಓಡಿಬಂದಾಗ ಅವರೂ ಮನೆಗೆ ನುಗ್ಗಿ ಮನೆಯಲ್ಲಿದ್ದ ವಸ್ತುಗಳನ್ನು ಲೂಟಿ ಮಾಡಿದರಲ್ಲದೆ, ಮನೆಯಲ್ಲಿದ್ದ ಧಾರ್ಮಿಕ ಗ್ರಂಥವನ್ನು ಹರಿದು ಹಾಕಿದ್ದಾರೆ ಎಂದು ಸಯ್ಯದ್ ಅಹ್ಮದ್ ಎಂಬವರು ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಆನಂದ್ ಭೂಷಣ್ ಸಿಂಗ್, ಆತನ ಸಹಚರರಾದ ರಾಮ್ ಹರಕ್, ದುಷ್ಯಂತ್ ಸಿಂಗ್, ದೇವ್ನಾರಾಯಣ್ ಯಾದವ್ ಹಾಗೂ ಇತರ 25 ಮಂದಿ ಗುರುತಿಸಲಾಗದ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಕ್ಷೇತರ ಸದಸ್ಯನಾಗಿ ವಿಧಾನಪರಿಷತ್ ಶಾಸಕರಾಗಿದ್ದ ಆನಂದ್ಭೂಷಣ್ 2011ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇದು ತನ್ನ ಹೆಸರು ಕೆಡಿಸಲು ವಿರೋಧಿಗಳು ಮಾಡಿರುವ ಸಂಚಾಗಿದೆ ಎಂದು ಆನಂದ್ ಭೂಷಣ್ ಪ್ರತಿಕ್ರಿಯಿಸಿದ್ದಾರೆ.