ಇಂದು ಆರೆಸ್ಸೆಸ್, ಬಿಜೆಪಿ ನಾಯಕರೊಂದಿಗೆ ಕೇರಳ ಮುಖ್ಯಮಂತ್ರಿ ಚರ್ಚೆ
ತಿರುವನಂಪುರಂ,ಜು.31: ರಾಜ್ಯದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರೊಡನೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಚರ್ಚೆ ನಡೆಸಲಿದ್ದಾರೆ. ರಾಜ್ಯಪಾಲ ಪಿ. ಸದಾಶಿವಂ ಸೂಚನೆಯಂತೆ ಮುಖ್ಯಮಂತ್ರಿ ಆರೆಸ್ಸೆಸ್- ಬಿಜೆಪಿ ನಾಯಕರನ್ನು ಭೇಟಿಯಾಗಿ ಶಾಂತಿಗಾಗಿ ಮಾತು ಕತೆ ನಡೆಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್, ಬಿಜೆಪಿ ಶಾಸಕ ಒ.ರಾಜಗೋಪಾಲ್, ಆರೆಸ್ಸೆಸ್ ನಾಯಕ ಪಿ. ಗೋಪಾಲನ್ ಕುಟ್ಟಿ ಮುಂತಾದವರೊಡನೆ ಚರ್ಚೆ ನಡೆಯಲಿದೆ.
ಅಹಿತಕರ ಘಟನೆಗಳ ವಿವರಣೆ ಕೇಳಿ ಮುಖ್ಯಮಂತ್ರಿ ಮತ್ತು ಡಿಜಿಪಿ ಲೋಕನಾಥ್ ಬೆಹ್ರಾರನ್ನು ಈ ಹಿಂದೆ ರಾಜ್ಯಪಾಲರು ರಾಜಭವನಕ್ಕೆ ಕರೆಯಿಸಿಕೊಂಡಿದ್ದರು. ಇವರೊಂದಿಗಿನ ಭೇಟಿಯ ನಂತರ ಕೇಂದ್ರ ಗೃಹ ಕಚೇರಿಗೆ ರಾಜ್ಯದ ಸ್ಥಿತಿಗತಿಗಳ ವರದಿಯನ್ನು ರಾಜ್ಯಪಾಲರು ನೀಡಿದ್ದರು.
ಈ ನಡುವೆ, ರಾಜಧಾನಿಯಲ್ಲಿ ಪುನಃ ಇಂತಹ ಘಟನೆಗಳು ನಡೆಯುವ ಸಾಧ್ಯತೆಯಿದೆ ಎಂದು ಪೊಲೀಸರಿಗೆ ಗುಪ್ತ ಮಾಹಿತಿ ದೊರಕಿತ್ತು. ಇದರ ಆಧಾರದಲ್ಲಿ ಎಕೆಜಿ ಸೆಂಟರ್ ಸಹಿತ ಕೆಲವು ಕಚೇರಿಗಳಿಗೆ ಪೊಲೀಸ್ ಕಾವಲು ಬಿಗಿಗೊಳಿಸಲಾಗಿದೆ. ತಿರುವನಂತಪುರದಲ್ಲಿ ನಿಷೇಧಾಜ್ಞೆ ಮೂರುದಿವಸಕ್ಕೆ ಮುಂದುವರಿಸಲಾಗಿದೆ. ಸಿಸಿಟಿವಿ ನಿರೀಕ್ಷಣೆ ಬಿಗುಗೊಳಿಸಲಾಗಿದೆ. ರಜೆಯಲ್ಲಿದ್ದ ಪೊಲೀಸರನ್ನು ತುರ್ತಾಗಿ ಕರ್ತವ್ಯಕ್ಕೆ ಮರಳಲು ಸೂಚಿಸಲಾಗಿದೆ.
ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಪೊಲೀಸರು ಸಜ್ಜಾಗಿದ್ದಾರೆಂದು ಪೊಲೀಸ್ ಡಿಜಿಪಿ ಲೋಕನಾಥ್ ಬೆಹ್ರ ಈ ಹಿಂದೆ ಹೇಳಿದ್ದರು. ಇದೇ ವೇಳೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಿಜೆಪಿಆರೆಸ್ಸೆಸ್ ನಾಯಕರೊಂದಿಗೆ ಚರ್ಚೆ ನಡೆಸಲು ಮುಂದಾಗಿದ್ದಾರೆ.