ನೀಟ್ ಕುರಿತು ಚಳವಳಿ ನಡೆಯದಂತೆ ನೋಡಿಕೊಳ್ಳಿ
ತಮಿಳುನಾಡು ಸರಕಾರಕ್ಕೆ ಸುಪ್ರೀಂ ಕೋರ್ಟ್ ತಾಕೀತು
ಹೊಸದಿಲ್ಲಿ,ಸೆ.8: ನೀಟ್ ಪರೀಕ್ಷೆ ಕುರಿತಂತೆ ರಾಜ್ಯದಲ್ಲಿ ಯಾವುದೇ ಚಳವಳಿ ನಡೆಯದಂತೆ ನೋಡಿಕೊಳ್ಳುವಂತೆ ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ತಮಿಳುನಾಡು ಸರಕಾರಕ್ಕೆ ನಿರ್ದೇಶ ನೀಡಿದೆ.
ರಾಜ್ಯದಲ್ಲಿ ಸಾಮಾನ್ಯ ಜನಜೀವನಕ್ಕೆ ವ್ಯತ್ಯಯವನ್ನುಂಟು ಮಾಡುವ ಯಾವುದೇ ಚಟುವಟಿಕೆಯಲ್ಲಿ ತೊಡಗುವ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನಿನಡಿ ಪ್ರಕರಣವನ್ನು ದಾಖಲಿಸಿಕೊಳ್ಳುವಂತೆ ನಿರ್ದೇಶ ನೀಡಿದ ಮುಖ್ಯ ನ್ಯಾಯಮೂರ್ತಿ ದೀಪಕ ಮಿಶ್ರಾ ನೇತೃತ್ವದ ಪೀಠವು, ನೀಟ್ ಪರೀಕ್ಷೆಯನ್ನು ಸರ್ವೋಚ್ಚ ನ್ಯಾಯಾಲಯವು ಈಗಾಗಲೇ ಎತ್ತಿ ಹಿಡಿದಿದೆ. ಮಧ್ಯಂತರ ಕ್ರಮವಾಗಿ ನೀಟ್ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಚಳವಳಿ ನಡೆಯದಂತೆ ನೋಡಿಕೊಳ್ಳುವುದು ತಮಿಳುನಾಡಿನ ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಕಾರ್ಯದರ್ಶಿಗಳ ಜವಾಬ್ದಾರಿಯಾಗಿರುತ್ತದೆ ಎಂದು ನಿರ್ದೇಶ ನೀಡಲಾಗಿದೆ ಎಂದು ತಿಳಿಸಿತು.
ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯನ್ನು ಕಾಯ್ದುಕೊಳ್ಳುವಂತೆ ಹಾಗೂ ನೀಟ್ ಪರೀಕ್ಷೆಯ ವಿರುದ್ಧ ರಾಜಕೀಯ ಪಕ್ಷಗಳು ಅಥವಾ ವ್ಯಕ್ತಿಗಳು ಚಳವಳಿ, ಮುಷ್ಕರ ಅಥವಾ ಪ್ರತಿಭಟನೆಯನ್ನು ನಡೆಸದಂತೆ ನೋಡಿಕೊಳ್ಳುವಂತೆ ನಿರ್ದೇಶವನ್ನು ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯವು ತಮಿಳುನಾಡು ಸರಕಾರಕ್ಕೆ ಈ ನೋಟಿಸ್ ಹೊರಡಿಸಿದೆ.
ನೀಟ್ ವಿರುದ್ಧ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ಸಾಮಾನ್ಯ ಜನಜೀವನದ ಮೇಲೆ ತೀವ್ರ ಪರಿಣಾಮವುಂಟಾಗಿದೆ ಎಂದೂ ಅರ್ಜಿದಾರರು ತಿಳಿಸಿದ್ದರು.
ಮುಂದಿನ ವಿಚಾರಣೆ ಸೆ.18ರಂದು ನಡೆಯಲಿದೆ.