ಜೆ.ಎನ್. ನಾಯ್ಕ
ಭಟ್ಕಳ : ನಾಮದಾರಿ ಸಮಾಜದ ಹಿರಿಯ ಮುಖಂಡರಾದ ಜೆ.ಎನ್. ನಾಯ್ಕ (84) ಬುಧವಾರದಂದು ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ ಅಸೌಖ್ಯದಿಂದ ನಿಧನ ಹೊಂದಿದರು.
ಅವರು ಪತ್ನಿ, ಐವರು ಪುತ್ರಿಯರು ,ಈರ್ವರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ನಾಮಧಾರಿ ಸಮಾಜದ ಬೀಷ್ಮರೆಂದೇ ಪ್ರಸಿದ್ಧಿ ಪಡೆದಿದ್ದು, ನಾಮಧಾರಿ ಸಮಾಜದ ಗುರುಮಠದ ಮಾಜಿ ಅಧ್ಯಕ್ಷರಾಗಿ, ಶ್ರೀರಾಮ ಕ್ಷೇತ್ರ ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಟ್ರಸ್ಟಿಯಾಗಿ ಹಾಗೂ ಹಲವು ಧಾರ್ಮಿಕ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.
ಇವರು ಭಟ್ಕಳದಲ್ಲಿ ನಾಮಧಾರಿ ಸಮಾಜದ ಗುರುಪೀಠ ಸ್ಥಾಪನೆಗೆ ಮೂಲ ಕಾರಣೀಕರ್ತರಾಗಿದ್ದು ಸಮಾಜವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶಾಸಕ ಸುನೀಲ್ ನಾಯ್ಕ ಮಾಜಿ ಶಾಸಕ ಜೆ.ಡಿ.ನಾಯ್ಕ, ಮಂಕಾಳ ವೈದ್ಯ, ಕಾಸ್ಕಾರ್ಡ ಬ್ಯಾಂಕಿನ ಉಪಾಧ್ಯಕ್ಷ ಈಶ್ವರ ನಾಯ್ಕ, ಜಿಲ್ಲಾ ಬಿ.ಜೆ.ಪಿ. ಕಾರ್ಯದರ್ಶಿ ಗೋವಿಂದ ನಾಯ್ಕ, ನಾಮಧಾರಿ ಗುರುಮಠದ ಆಡಳಿತ ಮಂಡಳಿ, ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಭಟ್ಕಳ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪ್ರಮುಖರು ಮೃತರ ದರ್ಶನ ಪಡೆದು ಶೋಕ ವ್ಯಕ್ತಪಡಿಸಿದ್ದಾರೆ.