ಜಿ.ಎಸ್. ಕಾಮತ್
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪ್ರಥಮ ಚಾರ್ಟರ್ಡ್ಅಕೌಂಟೆಂಟ್ ಖ್ಯಾತಿಯ ಜಿ.ಎಸ್. ಕಾಮತ್ ಕುಮಟಾ (77) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆದರು. ಮೃತರು ಪುತ್ರ ಚಾರ್ಟರ್ಡ್ ಅಕೌಂಟೆಂಟ್ ಯೋಗೀಶ ಕಾಮತ್, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕಾಮತ್ ಅವರು ಸಿ.ಎ. ಮುಗಿಸಿದ ನಂತರ 1967ರಲ್ಲಿ ಕುಮಟಾದಲ್ಲಿ ತಮ್ಮ ಸೇವೆಯನ್ನು ಆರಂಭಿಸಿ ಜಿಲ್ಲೆಯ ಜನತೆಗೆ ಚಾರ್ಟರ್ಡ್ ಅಕೌಂಟೆಂಟ್ ಆಗಿ ನಿರಂತರ 53 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಶ್ರೀ ಕೃಷ್ಣಾ ಮಿಲ್ಕ್ಸ್ ಪ್ರೈವೇಟ್ ಲಿಮಿಟೆಡ್ಇದರ ಸಂಸ್ಥಾಪಕ ಅಧ್ಯಕ್ಷರು, ಜಿ.ಎಸ್.ಬಿ. ಸಮಾಜದ ಪ್ರಮುಖರು, ಶ್ರೀ ಪರ್ತಗಾಳಿ ಜೀವೋತ್ತಮ ಮಠದ ಭಕ್ತರಾದಇವರು ಶ್ರೀ ಮಠದ ಆಡಿಟರ್ ಕೂಡಾ ಆಗಿದ್ದಾರೆ.
ಶ್ರೀನಿವಾಸ ಡೆಂಪೋ ಗೋವಾ, ಆರ್.ವಿ.ದೇಶಪಾಂಡೆ ಹಳಿಯಾಳ, ಡಾ.ರಾಜನ್ ಕುಂಕೋಳಿಕರ್ ಗೋವಾ, ರಾಜನ್ ಭಟ್ ಮುಂಬೈ, ಮುಕುಂದ ಕಾಮತ್ ಮುಂಬೈ, ನಿರ್ಮಲಾ ಕಾನ್ವೆಂಟ್ ಪ್ರಾಂಶುಪಾಲರು ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.