ಡಾ.ಯು.ಕರುಣಾಕರ ಶೆಟ್ಟಿ
ಉಡುಪಿ, ಜು.9: ಭದ್ರಾವತಿಯ ಜನಪ್ರಿಯ ಹಿರಿಯ ಆಯುರ್ವೇದ ವೈದ್ಯ, ಸಮಾಜ ಸೇವಕ, ಬಂಟ ಸಮಾಜದ ಮುಂದಾಳು ಡಾ. ಯು.ಕರುಣಾಕ ಶೆಟ್ಟಿ (83) ಜು.7ರ ರಾತ್ರಿ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೂಲತ: ಉಡುಪಿ ತಾಲೂಕಿನ ಉಪ್ಪೂರಿನವರಾದ ಇವರು ತೆಂಕಬೆಟ್ಟು ಓಣಿಮನೆಯ ಪ್ರತಿಷ್ಠಿತ ಆಯುರ್ವೇದ ಪಂಡಿತರ ಕುಟುಂಬಕ್ಕೆ ಸೇರಿದವರು. ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ ವ್ಯಾಸಂಗ ಮಾಡಿ 1963ರಲ್ಲಿ ಭದ್ರಾವತಿಯ ಜನ್ನಾಪುರದಲ್ಲಿ ಶ್ರೀರಾಮ ಕ್ಲಿನಿಕ್ ತೆರೆದು ತನ್ನ ಕೊನೆಯ ಕ್ಷಣದವರೆಗೂ ಆಯುರ್ವೇದ ವೈದ್ಯಕೀಯ ವೃತ್ತಿ ನಡೆಸಿಕೊಂಡು ಬಂದಿದ್ದರು.
ಯಕ್ಷಗಾನ ಮತ್ತು ರಂಗಭೂಮಿಯಲ್ಲೂ ತನ್ನನ್ನು ತೊಡಗಿಸಿಕೊಂಡು ಹವ್ಯಾಸಿ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದ ಇವರು, ವಿವಿಧ ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿದ್ದರು. ಭದ್ರಾವತಿಯ ತುಳುಕೂಟ ಹಾಗೂ ಬಂಟರ ಸಂಘಗಳ ಸ್ಥಾಪಕ ಅಧ್ಯಕ್ಷರಾಗಿ, ಸ್ಥಳೀಯ ಲಯನ್ಸ್ ಕ್ಲಬ್ ಸ್ಥಾಪಕ ಸದಸ್ಯರು, ಅಧ್ಯಕ್ಷರಾಗಿ ಹಾಗೂ ಶ್ರೀಪೂರ್ಣಪ್ರಜ್ಞ ವಿದ್ಯಾಸಂಸ್ಥೆ ಕೋಶಾಧಿಕಾರಿ ಯಾಗಿಯೂ ಕಾರ್ಯ ನಿರ್ವಹಿಸಿದ್ದರು.
ಗುರುವಾರ ಅಪರಾಹ್ನ ಭದ್ರಾವತಿಯಲ್ಲಿ ನಡೆದ ಮೃತರ ಅಂತ್ಯಕ್ರಿಯೆಯಲ್ಲಿ ಸ್ಥಳೀಯ ಶಾಸಕ ಬಿ.ಕೆ. ಸಂಗಮೇಶ್ವರ ಹಾಗೂ ಊರ ಪರವೂರ ಸಾವಿರಾರು ಗಣ್ಯರು ಪಾಲ್ಗೊಂಡು ಮೃರಿಗೆ ಅಂತಿಮ ನಮನ ಸಲ್ಲಿಸಿದರು.