ಗಂಗಾನದಿಗೆ ಭಕ್ತರೇ ಮುಳುವಾದರೇ?
ಮಾನ್ಯರೇ,
ಇತ್ತೀಚೆಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ‘‘ಗಂಗಾ ನಂದಿ ನೀರು ಕುಡಿಯಲು ಅನರ್ಹ’’ ಎಂದು ಘೋಷಿಸಿದೆ. ಸಿಗರೇಟಿನ ಮೇಲೆ ‘ಆರೋಗ್ಯಕ್ಕೆ ಹಾನಿಕರ’ ಎಂದು ಬರೆದಿರುವಾಗ, ಕುಡಿಯಲು ಅನರ್ಹವಾದ ಗಂಗಾ ನದಿಯ ಗುಣಮಟ್ಟದ ಬಗ್ಗೆಯೂ ಜನರಿಗೆ ಮಾಹಿತಿ ನೀಡಿ ಎಂದು ಅದು ಸೂಚಿಸಿದೆ. ವಿಪರ್ಯಾಸದ ಸಂಗತಿಯೆಂದರೆ, ಇಂದು ಗಂಗಾ ನದಿ ಸಂಪೂರ್ಣ ಕೆಟ್ಟು ಹೋಗಲು ಅದರ ಆರಾಧಕರೇ ಕಾರಣ. ಯಾರು ಗಂಗಾ ನದಿಯನ್ನು ಪುಣ್ಯ ನದಿಯೆಂದು, ದೇವತೆಯೆಂದು ಭಾವಿಸಿ ಆರಾಧಿಸುತ್ತಿದ್ದಾರೆಯೋ ಅವರೇ ಗಂಗಾನದಿಯ ಅವನತಿಗೆ ಕಾರಣವಾಗಿದ್ದಾರೆ. ಅರ್ಧ ಬೆಂದ ಹೆಣಗಳನ್ನು ಮೋಕ್ಷ ಸಿಗಲೆಂದು ಗಂಗಾನದಿಗೆ ಎಸೆಯುವವರೂ ಇವರೆ. ಗಂಗಾನದಿಯಲ್ಲಿ ಇಂತಹ ಸಾವಿರಾರು ಹೆಣಗಳು ಈಗಾಗಲೇ ಪತ್ತೆಯಾಗಿವೆ. ಗಂಗಾ ನದಿಯ ತಟ್ಟದಲ್ಲಿರುವ ದೇವಾಲಯಗಳೂ ಗಂಗೆ ಮಾಲಿನ್ಯ ಹೊಂದಲು ಕಾರಣವಾಗಿವೆ. ಭಕ್ತರ ಎಲ್ಲ ತ್ಯಾಜ್ಯಗಳೂ ಈ ಗಂಗಾ ನದಿಯನ್ನು ಸೇರುತ್ತಿವೆ. ಇಂದು ಗಂಗೆಯನ್ನು ಗಂಗೆಯ ಭಕ್ತರಿಂದಲೇ ಕಾಪಾಡಬೇಕಾಗಿದೆ.
ಇದರ ಜೊತೆಗೆ ಕೈಗಾರಿಕೆಗಳಿಂದ ಹರಿಯ ಬಿಡುತ್ತಿರುವ ತ್ಯಾಜ್ಯಗಳೂ ಗಂಗೆ ಮಾಲಿನ್ಯಗೊಳ್ಳಲು ಕಾರಣವಾಗಿದೆ. ಇವೆಲ್ಲವನ್ನು ತಡೆಯದೆ ಗಂಗಾನದಿ ಶುದ್ಧೀಕರಣಕ್ಕೆ ಕೋಟಿ ಗಟ್ಟಲೆ ಹಣ ಸುರಿದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಈಗಾಗಲೇ ಹಲವು ಸಾವಿರ ಕೋಟಿ ಸುರಿದರೂ ಗಂಗೆ ಶುದ್ಧೀಕರಣವಾಗಿಲ್ಲ ಎನ್ನುವುದು ಸರಕಾರದ ದೊಡ್ಡ ವೈಫಲ್ಯವಾಗಿದೆ. ಗಂಗೆಯ ಶುದ್ಧೀಕರಣದ ಹೆಸರಲ್ಲಿ ರಾಜಕಾರಣಿಗಳು ಕೋಟ್ಯಂತರ ಹಣ ನುಂಗಿದ್ದೇ ಬಂತು.