ಆಚರಣೆ ಅರ್ಥಪೂರ್ಣವಾಗಿರಲಿ
ಮಾನ್ಯರೇ,
ಇಂದು ದೇಶದೆಲ್ಲೆಡೆ ಗಾಂಧಿ ಜಯಂತಿಯನ್ನು ಆಚರಿಸುತ್ತಿದ್ದೇವೆ. ಆದರೆ ಗಾಂಧಿ ಕಂಡ ರಾಮರಾಜ್ಯದ ಕನಸು ಮಾತ್ರ ಕನಸಾಗಿಯೇ ಉಳಿದಿದೆ. ಕುಡಿತ ಮನುಷ್ಯನ ಮೊದಲ ಶತ್ರು ಎಂದಿದ್ದರು ಗಾಂಧೀಜಿ. ಆದರೆ ದೇಶದ ಆದಾಯ ಮೂಲಕ್ಕಾಗಿ ಕುಡಿತವನ್ನೇ ನಾವು ನಂಬಿ ಕೊಂಡಿದ್ದೇವೆ. ದೇಶಾದ್ಯಂತ ಮದ್ಯ ವ್ಯಸನದಿಂದಲೇ ಅದೆಷ್ಟೋ ಮಂದಿ ದಿನನಿತ್ಯ ಸಾವನ್ನಪ್ಪುತ್ತಿದ್ದಾರೆ. ಅವರ ಸಂಸಾರಗಳು ಬೀದಿ ಪಾಲಾಗುತ್ತಿವೆ. ಇನ್ನು ಹೆಣ್ಣು ಮಕ್ಕಳ ವಿಚಾರವಂತೂ ಇನ್ನೂ ನಿಕೃಷ್ಟ ಪರಿಸ್ಥಿತಿ. ಹೆಣ್ಣುಮಕ್ಕಳು ನಡು ರಾತ್ರಿಯಲ್ಲಿ ಓಡಾಡುವುದು ಹಾಗಿರಲಿ, ಹಗಲಿನಲ್ಲೂ ಒಬ್ಬಂಟಿಯಾಗಿ ಸಂಚರಿಸುವುದು ಕೂಡಾ ಭಯವೆನ್ನಿಸುತ್ತದೆ.
ಗಾಂಧಿ ಭಾವ ಚಿತ್ರದ ಕೆಳಗೆ ಕುಳಿತು ಮದ್ಯಮಾರಾಟಕ್ಕೆ ಲೈಸೆನ್ಸ್ ನೀಡುವ, ಅತ್ಯಾಚಾರಿ ಎಂದು ತಿಳಿದಿದ್ದರೂ ಅಂತಹವರ ವಿರುದ್ಧ ಜಾಣಕುರುಡರಾಗಿರುವ ಅಧಿಕಾರಶಾಹಿಗಳು ತೋರಿಕೆಗೆ ಮಾತ್ರ ಗಾಂಧಿ ಜಯಂತಿಯನ್ನು ಆಚರಿಸುತ್ತಾರೆ.
ಕ್ರಿಯೆ ಮತ್ತು ಆಲೋಚನೆಗಳ ನಡುವೆ ವ್ಯತ್ಯಾಸ ಇದ್ದಾಗ ಆಚರಣೆ ಅರ್ಥ ಕಳೆದುಕೊಳ್ಳುತ್ತದೆ.ಹಾಗಾಗಿ ಯಾವುದೋ ಒಂದು ದಿನ ಗಾಂಧೀಜಿಯವರನ್ನು ಸ್ಮರಿಸಿದರಷ್ಟೇ ಸಾಲದು. ಅವರ ನುಡಿಯನ್ನು ನಡೆಯಲ್ಲಿ ಆಚರಣೆಗೆ ತಂದಾಗಷ್ಟೇ ಗಾಂಧಿ ಜಯಂತಿ ಅರ್ಥ ಪೂರ್ಣವಾಗುತ್ತದೆ.
-ಜನನಿವತ್ಸಲ, ಬೆಂಗಳೂರು