ದೊರೆಸ್ವಾಮಿ ಅವರನ್ನು 'ಪಾಕ್ ಏಜೆಂಟ್' ಎನ್ನುವುದಕ್ಕೆ ಇವರ ನಾಲಿಗೆ ಹೇಗೆ ಹೊರಳಿತು?
-

ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ನೀಡಿರುವ ವಿವಾದಾತ್ಮಕ ಹೇಳಿಕೆಗಳು ಭಾರೀ ವಿವಾದವನ್ನು ಸೃಷ್ಟಿಸಿದೆ. ಈ ನಡುವೆ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವ ಸುರೇಶ್ ಕುಮಾರ್ ಅವರು 'ಆಡಬಾರದ ಮಾತನ್ನಾಡಿದರೆ ಕೇಳಬಾರದ ಮಾತು ಕೇಳಬೇಕಾಗುತ್ತದೆ' ಎಂದಿದ್ದರು. ಈ ಹೇಳಿಕೆ ಬಗ್ಗೆ ಸಾಹಿತಿ ದೇವನೂರ ಮಹಾದೇವ ಅವರು ಸುರೇಶ್ ಕುಮಾರ್ ರಿಗೆ ಬರೆದ ಪತ್ರ ಈ ಕೆಳಗಿದೆ.
ಮಾನ್ಯ ಶಿಕ್ಷಣ ಸಚಿವರಾದ ಎಸ್.ಸುರೇಶ್ ಕುಮಾರ್ ಅವರಿಗೆ
ವಂದನೆಗಳು
ನಿಮ್ಮ ಇ-ಮೇಲ್ ಐಡಿ nimmasuresh (ನಿಮ್ಮ ಸುರೇಶ್) ಎಂದಿದೆ. ನೀವು ನಮ್ಮ ಸುರೇಶ್ ಅಂದುಕೊಂಡಿದ್ದರಿಂದಲೇ ತಮಗೆ ಈ ಪತ್ರ ಬರೆಯುತ್ತಿದ್ದೇನೆ. ನಿಮ್ಮ ಹೇಳಿಕೆ, "ಆಡಬಾರದ ಮಾತನ್ನಾಡಿದರೆ ಕೇಳಬಾರದ ಮಾತು ಕೇಳಬೇಕಾಗುತ್ತದೆ ''-ನೋಡಿ ನನಗೆ ಶಾಕ್ ಆಯಿತು.
ಶ್ರೀ ಎಚ್.ಎಸ್.ದೊರೆಸ್ವಾಮಿಯವರು ಕಳೆದ ಚುನಾವಣೆಯ ಹಿಂದಿನ ದಿನ ಯಾರಿಗೆ ಮತನೀಡಬೇಕೆಂದು ಕರೆ ನೀಡುತ್ತಾ, ಮೋದಿಯವರ ವೈಫಲ್ಯಗಳನ್ನು ಹಾಗೂ ಸರ್ವಾಧಿಕಾರಿ ಪ್ರವೃತ್ತಿಯನ್ನು ವಿವರಿಸುತ್ತಾ, "ಆತ ಮಾತು ಕೊಟ್ಟಿದ್ದನ್ನು ಉಳಿಸಿಕೊಂಡಿಲ್ಲ. ಯಾವ ಕೆಲಸ ಮಾಡಿಲ್ಲ. ಕರ್ನಾಟಕವನ್ನು ತೆಗೆದುಕೊಂಡು ಬಿಟ್ರೆ ಇಡೀ ದೇಶವನ್ನು ತಗೋಬಹುದು ಎನ್ನುವ ಆಲೋಚನೆ ಇದೆ. ಆದ್ದರಿಂದ ಈಗ ನಾವು ಆತನನ್ನು ಮುಗಿಸಬೇಕು. ಆತನನ್ನು ಸೋಲಿಸಬೇಕು'' ಎಂದು ಹೇಳುತ್ತಾರೆ. ಇದರ ಅರ್ಥ ಸಾಯಿಸಬೇಕು ಎಂದಾಗುವುದೇ? ಅವರ ಮಾತುಗಳಲ್ಲಿ ಎತ್ತಿದ ಸಮಸ್ಯೆಗಳತ್ತ ಕಣ್ಣೆತ್ತೂ ನೋಡುವ ಧೈರ್ಯವಿಲ್ಲದೆ, ಅದನ್ನು ಅಪಾರ್ಥ ಮಾಡಿ, ನೂರು ವರ್ಷಕ್ಕೂ ಮಿಗಿಲಾಗಿ ಅಹಿಂಸೆಯ ವ್ರತ ಪಾಲಿಸಿಕೊಂಡು, ಯಾವುದೋ ಯುಗದ ಮನುಷ್ಯನೊಬ್ಬ ನಮ್ಮ ನಡುವೆ ಬದುಕಿರುವ ಸೋಜಿಗ ಕಾಣದೆ ಸದೆಬಡಿಯುವುದಾದರೆ ನಾವು ಲಿಲ್ಲಿ ಪುಟ್ಟರಂತಾಗಿಬಿಡುತ್ತೇವೆ.
ಸ್ಪಷ್ಟತೆಗಾಗಿ ಒಂದು ಉದಾಹರಣೆ ನೋಡೋಣ: ಇಂದಿನ ಓಲೈಕೆ, ಅವಕಾಶವಾದಿ ರಾಜಕಾರಣದಲ್ಲಿ ಇದೇ ಶ್ರೀ ಬಸವನಗೌಡ ಯತ್ನಾಳ್, ಶ್ರೀ ಈಶ್ವರಪ್ಪ ಅಥವಾ ಮತ್ತಾರೋ ಮೋದಿಯವರ ವಿರೋಧಿಗಳಾಗಿದ್ದರೆ ಅವರು ತಮ್ಮ ಸ್ವಭಾವಕ್ಕೆ ತಕ್ಕಂತೆ ಏನು ಹೇಳುತ್ತಿದ್ದರು? ಮೋದಿಯವರ ತಲೆಗೆ ಹತ್ತಿಪ್ಪತ್ತು ಕೋಟಿ ಫತ್ವಾ ಹೊರಡಿಸುತ್ತಿದ್ದರೇನೋ! ಇಂಥವರು ದೊರೆಸ್ವಾಮಿ ಅವರನ್ನು "ನಕಲಿ ಸ್ವಾತಂತ್ರ್ಯ ಹೋರಾಟಗಾರ'' ಎನ್ನುತ್ತಾರೆ ! ಅಂದರೆ, ರಾಜಕಾರಣವೆಂಬುದು ಅದೇನು ಜಾದೂ, ಕಣ್ಕಟ್ಟು ವಿದ್ಯೆಯೇ? ಅಸಲಿಯನ್ನು ನಕಲಿ ಮಾಡುವುದಕ್ಕೆ, ನಕಲಿಯನ್ನು ಅಸಲಿ ಮಾಡುವುದಕ್ಕೆ? ದೊರೆಸ್ವಾಮಿ ಅವರನ್ನು "ಪಾಕ್ ಏಜೆಂಟ್ ''ಎನ್ನುವುದಕ್ಕೆ ಇವರ ನಾಲಿಗೆ ಹೇಗೆ ಹೊರಳಿತು? ಇಂದಿನ ನಮ್ಮ ಬಹುತೇಕ ರಾಜಕಾರಣಿಗಳಲ್ಲಿ ಕೆಲವರಿಗೆ ನಾಲಿಗೆ ಇಲ್ಲ. ಇನ್ನೂ ಕೆಲವರಿಗೆ ನಾಕಾರು ನಾಲಿಗೆಗಳು. ಇಲ್ಲಿದ್ದಾಗ ಮಾತನಾಡಲು ಒಂದು, ಇನ್ನೊಂದು ಕಡೆ ಹೋದಾಗ ಮತ್ತೊಂದು, ನುಂಗಲು ಮಗದೊಂದು-ಹೀಗೆ.
ಇಂದು ಜನಪ್ರತಿನಿಧಿಗಳು ತಮ್ಮನ್ನು ಜನಪ್ರತಿನಿಧಿಗಳು ಅಂದುಕೊಂಡಿಲ್ಲ. ಶಾಸಕರು ಶಾಸಕ ಅಂದುಕೊಂಡಿಲ್ಲ. ಯಾರೂ ತಮ್ಮ ಸ್ಥಾನಕ್ಕೆ ಹೊಣೆಗಾರರಾಗಿಲ್ಲ. ಇದು ಇಂದಿನ ಸಮಸ್ಯೆಯಾಗಿದೆ. ಉದಾಹರಣೆಗೆ, ಶ್ರೀ ಯತ್ನಾಳ್ ಅವರ ವಿಜಯಪುರ ಜಿಲ್ಲೆಯಲ್ಲಿ ನಿರುದ್ಯೋಗ ತಾಂಡವವಾಡುತ್ತಾ ಅದು 'ಗುಳೆ ಜಿಲ್ಲೆ' ಎನ್ನಿಸಿಕೊಂಡುಬಿಟ್ಟಿದೆ. ಯತ್ನಾಳರನ್ನು ಆಯ್ಕೆ ಮಾಡಿದ 'ಮತದಾರ ಪ್ರಭುಗಳು' ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಕೆಲಸ ಅರಸುತ್ತಾ ಗೋವಾ, ಮಹಾರಾಷ್ಟ್ರದ ಕಡೆಗೆ ಗುಳೆ ಹೋಗುವುದು ದಿನೇದಿನೇ ಹೆಚ್ಚುತ್ತಿದೆ. ಅದೇ ವಿಜಯಪುರದಲ್ಲಿ ಒಂದು ದೊಡ್ಡದಾದ ಕೈಗಾರಿಕಾ ಪ್ರದೇಶವಿದೆ. ಆದರೆ, ಆ ಕೈಗಾರಿಕಾ ಪ್ರದೇಶವು ವಿದ್ಯುತ್ ಮತ್ತಿತರ ಮೂಲಸೌಲಭ್ಯಗಳಿಲ್ಲದೆ ನೊಣ ಹೊಡೆಯುತ್ತಿದೆ. ಇಂತಹ ಕಡೆ ಶಾಸಕನಾದವನು ಮಾತಾಡಲೂ ಪುರುಸೊತ್ತಿಲ್ಲದವನಂತೆ ಆ ಕೈಗಾರಿಕಾ ಕ್ಷೇತ್ರಕ್ಕೆ ವಿದ್ಯುತ್ ಮತ್ತಿತರ ಸೌಲಭ್ಯ ಕಲ್ಪಿಸಲು ಕಾರ್ಯಪ್ರವೃತ್ತನಾಗಿರಬೇಕಿತ್ತು. ಆದರೇನಾಗಿದೆ? ಜನಪ್ರತಿನಿಧಿಗಳು ಹೊಣೆಗೇಡಿಯಾಗಿದ್ದಾರೆ. ಜನಪ್ರತಿನಿಧಿಗಳನ್ನು ಎಚ್ಚರಿಸಬೇಕಿರುವ ಜನರು ಅವಜ್ಞೆಗೆ ಒಳಗಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಯಾವ ಪಕ್ಷದಲ್ಲೇ ಇರಲಿ ತಮ್ಮಂಥವರಿಂದ ಹೆಚ್ಚಿನದನ್ನು ನಿರೀಕ್ಷಿಸುವುದು ತಪ್ಪಲ್ಲ ಎಂದುಕೊಂಡಿದ್ದೇನೆ.
ತುಂಬಾ ಹೆಚ್ಚಾಗಿ ಬರೆದುಬಿಟ್ಟೆ. ಕೊಳೆತ ಹಣ್ಣುಗಳ ಜೊತೆ ಒಳ್ಳೆಯ ಹಣ್ಣುಗಳು ಸೇರಿಕೊಂಡಾಗ ಅವೂ ಕೆಡಬಹುದೇ? ನಿಮ್ಮ ಹೇಳಿಕೆ ನೋಡಿದಾಗ ಈ ಪ್ರಶ್ನೆ ನನ್ನೊಳಗೆ ಸುಳಿದಾಡಿತು. ಅದಕ್ಕಾಗಿ ಈ ಪತ್ರ. ಕ್ಷಮೆ ಇರಲಿ.
-ನಿಮ್ಮ ವಿಶ್ವಾಸಿ
ದೇವನೂರ ಮಹಾದೇವ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.