Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಮಾನ ಶಿಕ್ಷಣ ದಿನವಾಗಲಿ ಸಾವಿತ್ರಿಬಾಯಿ...

ಸಮಾನ ಶಿಕ್ಷಣ ದಿನವಾಗಲಿ ಸಾವಿತ್ರಿಬಾಯಿ ಫುಲೆ ಜನ್ಮದಿನ

ರೂಪಾ ಹಾಸನರೂಪಾ ಹಾಸನ3 Jan 2021 12:10 AM IST
share
ಸಮಾನ ಶಿಕ್ಷಣ ದಿನವಾಗಲಿ ಸಾವಿತ್ರಿಬಾಯಿ ಫುಲೆ ಜನ್ಮದಿನ

ಜ್ಯೋತಿ ಬಾ ಹಾಗೂ ಸಾವಿತ್ರಿಬಾಯಿಯವರ ಅಂದಿನ ಶ್ರಮ ಸಾರ್ಥಕವಾಗಬೇಕಾದರೆ ಸಮಾನ ಶಾಲೆ, ಸಮಾನ ಪಠ್ಯಕ್ರಮ, ಸಮಾನ ಮೂಲಭೂತ ಸೌಕರ್ಯಗಳಿರುವ ಸಮಗ್ರ ಸಮಾನ ರಾಷ್ಟ್ರೀಯ ಶಿಕ್ಷಣ ನೀತಿಯೊಂದನ್ನು ಜಾರಿಗೆ ತರಲು ಸರಕಾರದ ಮೇಲೆ ಒತ್ತಡ ಹೇರಲೇಬೇಕಾಗಿದೆ. ಅದರ ಮೊದಲ ಭಾಗವಾಗಿ ಸರಕಾರ, ಸಾವಿತ್ರಿಬಾಯಿಯವರು ಜನಿಸಿದ ಜನವರಿ 3ನ್ನು ರಾಷ್ಟ್ರೀಯ ಸಮಾನ ಶಿಕ್ಷಣ ದಿನವೆಂದು ಘೋಷಿಸಬೇಕು. ಆಗ ಈ ಘೋಷಣೆ ಭಾರತದ ಕಗ್ಗತ್ತಲೆಗೆ ಬೆಳಕಾದ ತಾಯಿಯೊಬ್ಬಳ ದಿನಾಚರಣೆಯಾಗಿಬಿಡುತ್ತದೆ. ಧೀಮಂತ ಐತಿಹಾಸಿಕ ಮಹಿಳೆಯೊಬ್ಬಳ ಹೆಸರಿನಲ್ಲಿ ಒಂದೇ ಒಂದು ದಿನಾಚರಣೆಯಿಲ್ಲದ ಭಾರತಕ್ಕೆ ತಾಯಿ ಸಾವಿತ್ರಿಬಾಯಿ ಫುಲೆ ಹುಟ್ಟಿದ ದಿನವು ಸಮಾನತೆಯ ತಾಯ್ತನದ ತುಡಿತವನ್ನು ನೆನಪಿಸಿಕೊಳ್ಳದ ನಮ್ಮ ಪುರುಷ ಪ್ರಧಾನದ ಅಹಂಗೆ ಮದ್ದಾಗಬಹುದು.


‘‘ನಿಜವಾಗಿ ನೋಡಿದರೆ ಈ ಅಭಿನಂದನೆ ನಿನಗೆ ಸಲ್ಲತಕ್ಕದ್ದು. ನಾನು ಕೇವಲ ಬೇರೆ ಬೇರೆ ಕಡೆ ಶಾಲೆಗಳನ್ನು ಪ್ರಾರಂಭಿಸಲು ಕಾರಣಕರ್ತ. ಆದರೆ ನೀನು ಮಾತ್ರ ಶಾಲೆಗಳ ಬೆಳವಣಿಗೆಯ ಹಾದಿಯಲ್ಲಿ ಎದುರಾದ ಎಲ್ಲ ಸಂಕಷ್ಟಗಳನ್ನು ಧೈರ್ಯದಿಂದ ಎದುರಿಸಿರುವೆ. ಅದರಿಂದಾಗಿ ಬಂದಂತಹ ಬಹುಪರಿಯ ದುಃಖಗಳನ್ನು ನುಂಗಿಕೊಳ್ಳುತ್ತಾ ಪ್ರತಿಯೊಂದು ಶಾಲೆಗೂ ಹೊಸ ರೂಪ ಮತ್ತು ಚೈತನ್ಯವನ್ನು ತುಂಬಿರುವೆ. ಅದಕ್ಕಾಗಿ ಇದೋ ನನ್ನ ಮನಃಪೂರ್ವಕ ಅಭಿನಂದನೆಗಳು’’ ಎನ್ನುತ್ತಾ ಸ್ವಇಚ್ಛೆಯಿಂದ ಶಿಕ್ಷಣ ಕೇಂದ್ರಗಳನ್ನು ತೆರೆದು ವಿದ್ಯಾ ದಾನ ಮಾಡಿದ ತಮಗೆ, ಬ್ರಿಟಿಷ್ ಸರಕಾರ ಹೊದಿಸಿ ಗೌರವಿಸಿದ ಶಾಲನ್ನು ಮಹಾತ್ಮ ಜ್ಯೋತಿಬಾ ಫುಲೆ ತಮ್ಮ ಮಡದಿಗೆ ನೀಡಿದಾಗ, ಇಡೀ ಸಭೆಗೆ ಸಭೆಯೇ ಎದ್ದು ನಿಂತು, ಸಮರ್ಥ ಶಿಕ್ಷಕಿ, ದೇಶದ ಮೊದಲ ಮಹಿಳಾ ಶಿಕ್ಷಣತಜ್ಞೆಗೆ ಕರತಾಡನದೊಂದಿಗೆ ಗೌರವ ಸೂಚಿಸಿತು. (ಸಾಮಾಜಿಕ ಕ್ರಾಂತಿ ಜ್ಯೋತಿ ಮಹಾತ್ಮ ಜ್ಯೋತಿಬಾ ಫುಲೆ- ಲೇ; ರವಿ ರಾ. ಅಂಚನ್) ಹೀಗೆ ಪತಿಯಿಂದ ಸಾಮಾಜಿಕವಾಗಿ ಪ್ರಶಂಸೆ ಮತ್ತು ಗೌರವವನ್ನು ಪಡೆದ ಧೀಮಂತ ಮಹಿಳೆ, ತಾಯಿ ಸಾವಿತ್ರಿಬಾಯಿ ಫುಲೆ! ಇಂದವರ 190ನೆಯ ಜನ್ಮ ದಿನ.

ತಳಸಮುದಾಯ ಹಾಗೂ ಹೆಣ್ಣುಮಕ್ಕಳು ಮೇಲ್ಜಾತಿ ಪುರುಷರಿಗೆ ಸಮಾನವಾದ ಶಿಕ್ಷಣ ಪಡೆಯಬೇಕೆಂಬ ಕನಸನ್ನು 19ನೇ ಶತಮಾನದ ಪ್ರಾರಂಭದಲ್ಲೇ ಕಂಡು ಅದರ ಸಾಕಾರಕ್ಕಾಗಿ ಅನೇಕ ನೋವು, ಅಪಮಾನ, ಸಂಕಟಗಳನ್ನು ಅನುಭವಿಸಿದ ಮೊತ್ತ ಮೊದಲ ಮಹಿಳೆ, ಶಿಕ್ಷಕಿ ನಾವ್ಯಾರೂ ಮರೆಯಬಾರದ- ತಾಯಿ ಸಾವಿತ್ರಿಬಾಯಿ ಫುಲೆ. ಇಂದು ತಳ ಸಮುದಾಯಗಳು ಹಾಗೂ ಮಹಿಳೆಯರು ಒಂದಿಷ್ಟಾದರೂ ಮುಕ್ತವಾಗಿ ವಿದ್ಯಾಭ್ಯಾಸ ಪಡೆಯುವಂತಾಗಿರುವುದರ ಹಿಂದೆ ಬಹು ದೊಡ್ಡ ಹೋರಾಟವೇ ಇದೆ. ಒಂದೆಡೆ ಬ್ರಿಟಿಷ್ ಸಾಮ್ರಾಜ್ಯದ ಪ್ರಾಬಲ್ಯ, ಇನ್ನೊಂದೆಡೆ ತಲೆತಲಾಂತರದಿಂದ ಬಂದ ಪರಂಪರೆಯಂತೆ, ಹಿಂದೂ ಮೇಲ್ಜಾತಿಗಳು ಜಾತಿ-ದೇವರುಗಳ ಹೆಸರಿನಲ್ಲಿ ತಳಸಮುದಾಯಗಳನ್ನು ತುಳಿಯುತ್ತಿದ್ದ ಕಾಲ. ಹೆಣ್ಣುಮಕ್ಕಳಿಗೆ ಶಿಕ್ಷಣದ ಹಕ್ಕಿಲ್ಲದಂತಹ, ವಿದ್ಯೆ ಪಡೆಯುವುದೇ ಮಹಾ ಪಾಪವೆಂಬಂತಿದ್ದ ಸಂದರ್ಭ. ಹೆಣ್ಣಿಗೆ ಮದುವೆಯೊಂದೇ ಅಂತಿಮ. ಅವಳೇನೂ ಹೇಳುವಂತಿಲ್ಲ. ಕೇಳುವಂತಿಲ್ಲ. ಯಾವುದನ್ನೂ ನಿರಾಕರಿಸದಂತಹ ಸ್ಥಿತಿ. ಇಂತಹ ಸಂದರ್ಭದಲ್ಲಿ ಅವರಲ್ಲಿ, ಜ್ಯೋತಿಬಾ ಫುಲೆ ದಂಪತಿ ಹೊತ್ತಿಸಿದ ಶಿಕ್ಷಣದ ಅರಿವಿನ ಕಿಡಿ ಇಂದು ದೇಶಾದ್ಯಂತ ಬೆಳಕಾಗಿ ಪಸರಿಸುತ್ತಿದೆ.

ಮಹಾರಾಷ್ಟ್ರದ ಸತಾರ ಜಿಲ್ಲೆಯ ನಾಯಗಾಂವ ಎಂಬ ಹಳ್ಳಿಯಲ್ಲಿ 3ನೇ ಜನವರಿ 1831ರಲ್ಲಿ ತಳಸಮುದಾಯದ ಕುಟುಂಬವೊಂದರಲ್ಲಿ ಜನಿಸಿದ ಸಾವಿತ್ರಿಬಾಯಿಗೆ 9ವರ್ಷವಾಗಿದ್ದಾಗಲೇ ಜ್ಯೋತಿಬಾ ಅವರೊಂದಿಗೆ ವಿವಾಹವಾಗಿ ಪುಣೆಗೆ ಬಂದರು. ಹಸುಗೂಸಾಗಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದ ಜ್ಯೋತಿಬಾ ಅವರ ವಿದ್ಯಾಭ್ಯಾಸ ಅನೇಕ ಜಾತಿ ತಾರತಮ್ಯದ ವಿಘ್ನಗಳೊಂದಿಗೆ ಕುಂಟುತ್ತಾ ಸಾಗಿತ್ತು. ತಾಯಿಯ ದೂರದ ಸಂಬಂಧಿಯಾಗಿದ್ದ ಬಾಲವಿಧವೆ ಸಗುಣಾಬಾಯಿ ಇವರ ಸಾಕುತಾಯಿಯೂ ಆಗಿದ್ದು, ಅವರಿಗೆ ಶಿಕ್ಷಣದ ಬಗ್ಗೆ ಅಪರಿಮಿತ ಆಸಕ್ತಿ ಇತ್ತು. ಇವರು ಸಂಪ್ರದಾಯ, ಕಟ್ಟುಕಟ್ಟಲೆಗಳ ಕುರಿತು ಆಳದಲ್ಲಿ ಪ್ರತಿಭಟನಾತ್ಮಕ ಮನೋಭಾವ ಹೊಂದಿದ್ದರು. ಹೀಗೆಂದೇ ಸಾವಿತ್ರಿಬಾಯಿ ಹಾಗೂ ತಮಗೆ ಪಾಠವನ್ನು ಹೇಳಿಕೊಡಲು ಜ್ಯೋತಿಬಾ ಅವರನ್ನೇ ಒಪ್ಪಿಸಿದರು ಸಗುಣಾಬಾಯಿ! ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ವಿದ್ಯೆಯನ್ನು ದಕ್ಕಿಸಿಕೊಂಡ ಈ ಇಬ್ಬರು ಹೆಣ್ಣುಮಕ್ಕಳು ಜ್ಯೋತಿಬಾ ಅವರೊಡಗೂಡಿ, ಬಹುಜನರಿಗೆ ಅಕ್ಷರವನ್ನು ನಿರಾಕರಿಸಿದ್ದ ರೋಗಗ್ರಸ್ತ ಸಮಾಜವನ್ನು ಎದುರು ಹಾಕಿಕೊಂಡು ಹೆಣ್ಣುಮಕ್ಕಳಿಗೆ ಹಾಗೂ ತಳಸಮುದಾಯದವರಿಗೆ ಶಿಕ್ಷಣದ ಬಾಗಿಲನ್ನು ತೆರೆದರು!

1847ರಲ್ಲಿ ನಾರ್ಮನ್ ಶಾಲೆಯಲ್ಲಿ ಕೇವಲ 17ವರ್ಷದೊಳಗೆ ಶಿಕ್ಷಕಿ ತರಬೇತಿಯನ್ನು ಪಡೆದ ಸಾವಿತ್ರಿಬಾಯಿಯವರು ಮಹಾರಾಷ್ಟ್ರದಲ್ಲಿ ತರಬೇತಾದಂತಹ ಮೊದಲ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲಿಂದ ಮುಂದೆ 1848ರಲ್ಲಿ ಜ್ಯೋತಿಬಾ ಅವರು ಪುಣೆಯಲ್ಲಿ ತೆರೆದ ಮೊತ್ತಮೊದಲ ಹೆಣ್ಣುಮಕ್ಕಳ ಶಾಲೆಗೆ (ಭಾರತದಲ್ಲಿ ಎರಡನೆಯದು, ಮೊದಲನೆಯದು ಅದಾಗಲೇ ಕಲ್ಕತ್ತಾದಲ್ಲಿ ಜನ್ಮತಾಳಿತ್ತು.) ಮುಖ್ಯೋಪಾಧ್ಯಾಯಿನಿಯಾಗಿ ಕೆಲಸ ಪ್ರಾರಂಭಿಸಿದರು. ಮೊದಲ ದಿನವೇ ಮೇಲ್ಜಾತಿಗೆ ಸೇರಿದ ಹೆಣ್ಣುಮಕ್ಕಳೂ ಸೇರಿದಂತೆ ತಳಸಮುದಾಯಕ್ಕೆ ಸೇರಿದ ಕೇವಲ 9ಜನ ಹೆಣ್ಣುಮಕ್ಕಳಿಂದ ಪ್ರಾರಂಭವಾದ ಶಾಲೆ, ಮುಂದೆ ಅನೇಕ ಬಾಲೆಯರಿಗೆ ವಿದ್ಯಾದಾನದ ಕೇಂದ್ರವಾಯಿತು. ಆದರೆ ಆ ಕಾಲದಲ್ಲಿ ಬ್ರಾಹ್ಮಣ ಪುರುಷರ ಹೊರತಾಗಿ ಬೇರೆಯವರಿಗೆ ಅಕ್ಷರ ಕಲಿಯುವ ಅವಕಾಶ ತೀರಾ ಕಡಿಮೆ ಇತ್ತು. ಅಂತಹ ಸಂದರ್ಭದಲ್ಲಿ ಹೆಣ್ಣೊಬ್ಬಳು ಶಾಲೆಗೆ ಹೋಗಿ ವಿದ್ಯಾಭ್ಯಾಸ ಪಡೆದು ಶಿಕ್ಷಕಿಯಾಗಿ, ಉಚಿತ ವಿದ್ಯಾದಾನ ನೀಡಲಾರಂಭಿಸಿದ್ದು ಸಂಪ್ರದಾಯಸ್ಥ ಮೇಲ್ಜಾತಿಯವರಿಗೆ ನುಂಗಲಾರದ ತುತ್ತಾಯಿತು. ಸಾವಿತ್ರಿಬಾಯಿಯವರು ಶಾಲೆಗೆ ಹೋಗಿ ಬರುವ ದಾರಿಯಲ್ಲಿ ಅವರನ್ನು ಕೆಟ್ಟ ಶಬ್ದಗಳಿಂದ ನಿಂದಿಸಿ ಕಲ್ಲು, ಕೆಸರು, ತೊಪ್ಪೆಗಳನ್ನೆಸೆದು ಹೆದರಿಸಿ, ಕೊಲೆ ಬೆದರಿಕೆ ಹಾಕಿದರು. ಇವರು ಯಾವುದಕ್ಕೂ ಬಗ್ಗದಿದ್ದಾಗ, ಇವರ ಶಾಲೆಗೆ ಸೇರಿದ್ದ ಹೆಣ್ಣುಮಕ್ಕಳಿಗೆ ಜಾತಿ ಬಹಿಷ್ಕಾರ ಹಾಗೂ ಸಮಾಜ ಬಹಿಷ್ಕಾರದ ಬೆದರಿಕೆಯನ್ನು ಹಾಕತೊಡಗಿದರು. ಸಾವಿತ್ರಿಬಾಯಿ ಮನೆ ಮನೆಗಳಿಗೆ ಹೋಗಿ ಪೋಷಕರ ಮನವೊಲಿಸಿ, ಶಿಕ್ಷಣದ ಔನತ್ಯವನ್ನು ತಿಳಿ ಹೇಳಿ ಮಕ್ಕಳನ್ನು ಮರಳಿ ಶಾಲೆಗೆ ಕರೆತಂದು ಶಿಕ್ಷಣ ನೀಡಿದರು. ಹೀಗೆ ನಿಜವಾದ ಅರ್ಥದಲ್ಲಿ ಅವರು ಆಧುನಿಕ ಭಾರತದ ಶಿಕ್ಷಣ ಮಾತೆಯಾದರು.

ಇದೇ ಕಾರಣಕ್ಕೆ ಜ್ಯೋತಿಬಾ ತಮ್ಮ ಸ್ವಂತ ಮನೆ ತೊರೆದು ಹೊರಬೀಳಬೇಕಾಯಿತು. ಸಾವಿತ್ರಿಬಾಯಿಯವರು ತವರಿನಿಂದ ಬಹಿಷ್ಕಾರಕ್ಕೆ ಒಳಗಾಗಬೇಕಾಯಿತು. ಇಂತಹ ಪ್ರಸಂಗಗಳು ಎದುರಾದರೂ, ಇದನ್ನೆಲ್ಲಾ ಕೆಲವು ಪ್ರಗತಿಪರ ಸ್ನೇಹಿತರೊಡಗೂಡಿ ದಿಟ್ಟವಾಗಿ ಎದುರಿಸಿದ ದಂಪತಿ 1848ರಿಂದ 1852ರವರೆಗೆ ಹದಿನೆಂಟಕ್ಕೂ ಹೆಚ್ಚು ಉಚಿತ ಶಾಲೆಗಳನ್ನು ತೆರೆದು ಸಾವಿರಾರು ಹೆಣ್ಣುಮಕ್ಕಳು ಹಾಗೂ ತಳಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡಿದ್ದಕ್ಕೆ ದಾಖಲೆಗಳಿವೆ. ಈ ಎಲ್ಲ ಶಾಲೆಗಳ ಆಡಳಿತ ಜವಾಬ್ದಾರಿಯನ್ನು ಹೊತ್ತು, ನಿರಂತರವಾದ ಸಾಮಾಜಿಕ ಸಂಘರ್ಷಕ್ಕೆ ಈಡಾಗಿಯೂ ಉತ್ತಮ ಶಿಕ್ಷಣತಜ್ಞೆಯಾಗಿ, ಯಶಸ್ವಿ ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯನಿರ್ವಹಿಸಿದ್ದು ಇತಿಹಾಸ ಗರ್ಭದಲ್ಲಿ ದಾಖಲಾಗಿದೆ. ಕ್ರಾಂತಿಕಾರಿ ಕವಿಯಾಗಿ ಹೋರಾಟದ ಹಾಡುಗಳನ್ನು ರಚಿಸಿದ ಸಾವಿತ್ರಿಬಾಯಿಯವರ ತೀವ್ರವಾದ ತುಡಿತ ಸಮಾನ ಶಿಕ್ಷಣದ ಕಡೆಗಿದ್ದುದು ಅವರ ಕವಿತೆಗಳಿಂದ ಗೋಚರವಾಗುತ್ತದೆ.

ಅನಕ್ಷರತೆಯ ವಿರುದ್ಧ ಮಾತ್ರವಲ್ಲದೇ ಅನೇಕ ಸಾಮಾಜಿಕ ಅನಿಷ್ಟಗಳ ವಿರುದ್ಧವಾಗಿಯೂ ಫುಲೆ ದಂಪತಿ ಉಗ್ರ ಹೋರಾಟ ನಡೆಸಿದರು. ಹೆಣ್ಣುಮಕ್ಕಳೆಡೆಗೆ ಒಂದು ಸರಕಾರ ವಹಿಸಬಹುದಾದಂತಹ ಸೂಕ್ಷ್ಮ ಎಚ್ಚರ, ಕಾಳಜಿಗಳನ್ನು ಅವರು ಪ್ರಜ್ಞಾಪೂರ್ವಕವಾಗಿ ಆ ಕಾಲದಲ್ಲೇ ನಿರ್ವಹಿಸಿದರು. ಹೆಣ್ಣುಮಕ್ಕಳ ಶಿಕ್ಷಣದ ಜೊತೆಗೆ, ವಿಧವೆಯರ ಕೇಶಮುಂಡನವನ್ನು ವಿರೋಧಿಸಿ, ಅವರ ಪುನರ್‌ವಿವಾಹಗಳನ್ನು ಏರ್ಪಡಿಸಿದರು. ಕಾಮುಕ ಪುರುಷರಿಗೆ ಬಲಿಯಾಗಿ ಗರ್ಭಧರಿಸುವ ಮಹಿಳೆಯರಿಗಾಗಿ, ಅವರಿಗೆ ಹುಟ್ಟುವ ಮಕ್ಕಳಿಗಾಗಿ 1863ರಲ್ಲಿ ‘ಬಾಲಹತ್ಯೆ ಪ್ರತಿಬಂಧಕ ಗೃಹ’ಗಳನ್ನು ತೆರೆದರು. ಅನಾಥ ವಿಧವೆಯರ ಸುರಕ್ಷಿತ ಹೆರಿಗೆಗಾಗಿ ‘ಗುಪ್ತ ಪ್ರಸೂತಿ ಗೃಹ’ಗಳನ್ನು ಕೂಡ ಸ್ಥಾಪಿಸಿದರು. ಅನೇಕ ಅನಾಥಾಶ್ರಮಗಳೂ ಸ್ಥಾಪನೆಯಾದವು. ಸ್ವಂತ ಮಕ್ಕಳನ್ನು ಹೊಂದದೆ ಈ ದಂಪತಿ ಅನಾಥ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಸಾಕಿ ಬೆಳೆಸಿದರು.

ಬಾಲ್ಯ ವಿವಾಹ ಪದ್ಧತಿಯನ್ನು ನಿರ್ಮೂಲನೆ ಮಾಡಲು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದರು. ಅವರು ರೂಪಿಸಿದಂತಹ ಸತ್ಯಶೋಧಕ ಚಳವಳಿ ಸಾಮಾಜಿಕ ಪಿಡುಗುಗಳ ವಿರುದ್ಧದ ಒಂದು ಅಸ್ತ್ರವೇ ಆಗಿತ್ತು. ದೇಶದಲ್ಲೇ ಅದೇ ಪ್ರಥಮ ಬಾರಿಗೆ ಮಹಿಳಾ ಸೇವಾ ಮಂಡಳಿಯೊಂದನ್ನು ಸಾವಿತ್ರಿಬಾಯಿಯವರ ನಾಯಕತ್ವದಲ್ಲಿ ಸ್ಥಾಪಿಸಿದ್ದೂ ಒಂದು ದಾಖಲೆ. ಹೀಗಾಗಿ ನಮ್ಮ ಮಹಿಳಾ ಹೋರಾಟ, ಸಂಘಟನೆ, ಚಿಂತನೆಗಳಿಗೆ ಇದೇ ಮೂಲವಾದ ಪ್ರೇರಣೆಯೇನೋ ಎನಿಸುತ್ತದೆ. ಜೊತೆಗೆ ಭಾರತೀಯ ಸ್ತ್ರೀವಾದದ ನೆಲೆಗಳಿರುವುದೂ ಬಹುಶಃ ಇಲ್ಲಿಯೇ ಎಂದೆನಿಸುತ್ತದೆ. ಪತಿ ಜ್ಯೋತಿಬಾ ಫುಲೆಯವರ ಮರಣದ ನಂತರವೂ ಇಷ್ಟೆಲ್ಲಾ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ದಿಟ್ಟೆ ಸಾವಿತ್ರಿಬಾಯಿ ಫುಲೆಯವರನ್ನು ನಾವಿಂದು ಮರೆತು ಹೋಗಿದ್ದೇವೆಂಬುದೇ ವಿಪರ್ಯಾಸ. ಮಹಿಳೆ ಹಾಗೂ ದಲಿತ ಶಿಕ್ಷಣದ ಕಿಡಿಯೊಂದಿಗೆ ಪ್ರಾರಂಭಿಸಿ ಅನೇಕ ಸಾಮಾಜಿಕ ಅನಿಷ್ಟಗಳ ವಿರುದ್ಧದ ಪ್ರಬಲ ದನಿಯಾಗಿ ಹೊರಹೊಮ್ಮಿದ ಸಾವಿತ್ರಿಬಾಯಿಯವರ ಅಂತಃಶಕ್ತಿಯ ಧೀಮಂತಿಕೆಗೆ ನಾವವರಿಗೆ ಇಂದಿಗೂ ಎಂದಿಗೂ ತಲೆ ಬಾಗಲೇಬೇಕು. ಅವರಿಗೆ ಇದೆಲ್ಲವೂ ಸಾಧ್ಯವಾಗಿದ್ದು ಶಿಕ್ಷಣದ ಅರಿವು ಮತ್ತು ಪತಿಯ ಸಹಯೋಗದಿಂದ ಎಂಬುದನ್ನು ನೆನಪಿಸಿಕೊಳ್ಳುವುದು ಯೋಗ್ಯವೆನ್ನಿಸುತ್ತದೆ.

ವ್ಯಾಪಕವಾಗಿ ಹರಡಿದ್ದ ಪ್ಲೇಗ್ ಕಾಯಿಲೆಗೆ ತುತ್ತಾದ ರೋಗಿಗಳ ಸೇವೆಯಲ್ಲಿ ಸಾವಿತ್ರಿಬಾಯಿಯವರು ನಿಸ್ವಾರ್ಥವಾಗಿ ತೊಡಗಿಕೊಂಡು, ನಿರ್ಗತಿಕರಿಗಾಗಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿದರು. ಕ್ಷಾಮದ ಸಂದರ್ಭದಲ್ಲಿ ಹೆಣ್ಣುಮಕ್ಕಳು ದೇಹ ಮಾರಿಕೊಳ್ಳುವುದನ್ನು ತಪ್ಪಿಸಿ ಘನತೆಯಿಂದ ಬದುಕಲು ದಾರಿಗಳನ್ನು ಹುಡುಕಿಕೊಟ್ಟರು. ಕೊನೆಗೆ ಈ ನಮ್ಮ ಶಿಕ್ಷಣದ ತಾಯಿ ತೀವ್ರ ಪ್ಲೇಗ್ ಕಾಯಿಲೆಗೆ ತುತ್ತಾಗಿ ತಮ್ಮ 66ನೇ ವಯಸ್ಸಿನಲ್ಲಿ, 10 ಮಾರ್ಚ್ 1897ರಲ್ಲಿ ಸಾವನ್ನಪ್ಪಿದರು. ಸಮಾನ ಶಿಕ್ಷಣ, ಸಮ ಸಮಾಜದ ಕನಸು ಕಂಡ ಫುಲೆ ದಂಪತಿ ಇನ್ನಿಲ್ಲವಾಗಿ ಶತಮಾನವೇ ಕಳೆದುಹೋದರೂ ಅವರ ಕನಸು ಇಂದಿಗೂ ಕನಸಾಗಿಯೇ ಉಳಿದಿದೆ! ಜಾಗತೀಕರಣದ ಬಿರುಗಾಳಿ, ಬಂಡವಾಳಶಾಹಿ ದಾಳಿ ಮತ್ತು ಉಳ್ಳವರ ಪರವಾದ ಶೈಕ್ಷಣಿಕ ನೀತಿಗಳಿಂದಾಗಿ ಹೆಣ್ಣುಮಕ್ಕಳು ಮತ್ತು ತಳಸಮುದಾಯ ಇಂದಿಗೂ ಸಮಾನ ಶಿಕ್ಷಣವನ್ನು ಪಡೆಯಲಾಗದೆ ಶಿಕ್ಷಣದ ಹಕ್ಕಿನಿಂದ ವಂಚನೆಗೊಳಗಾಗುತ್ತಾ ಅಂಚಿಗೆ ಒತ್ತರಿಸಲ್ಪಡುತ್ತಿದೆ.

ಸಮಾನತೆಯನ್ನು ಸಾಧಿಸಲು ಸಮಾನ ಶಿಕ್ಷಣ ವ್ಯವಸ್ಥೆಯೊಂದು ಪ್ರಬಲ ಅಸ್ತ್ರ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಂದು ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಅಳವಡಿಸಿಕೊಳ್ಳುತ್ತಿರುವ ಬಗ್ಗೆ ಹೆಮ್ಮೆಪಡುತ್ತಿವೆ. ಆದರೆ ಸಮಾನ ಶಿಕ್ಷಣದ ಜಾರಿಗೆ ಬೇಕಾದಂತಹ ಇಚ್ಛಾಶಕ್ತಿಯ ಕೊರತೆಯಿಂದ ಮನ ಬಂದಂತೆ ಶಿಕ್ಷಣ ನೀತಿಯನ್ನು ರೂಪಿಸಿಕೊಂಡು, ಶಿಕ್ಷಣ ಖಾಸಗೀಕರಣಕ್ಕೆ ತನ್ನನ್ನು ಒತ್ತೆ ಇಟ್ಟುಕೊಂಡು, ವಿದ್ಯೆಯೆಂಬ ಮೂಲಭೂತ ಹಕ್ಕನ್ನೂ ಮಾರಾಟದ ಸರಕಾಗಿಸಿದೆ. ತಾಯ್ತನದ ತುಡಿತವಿರದ ಲಾಭಕೋರ ಸರಕಾರ, ಸರಕಾರಿ ಶೈಕ್ಷಣಿಕ ವ್ಯವಸ್ಥೆಯನ್ನು ಹಂತ ಹಂತವಾಗಿ ದುರ್ಬಲಗೊಳಿಸುತ್ತಾ ಶಾಲೆಗಳನ್ನೇ ಮುಚ್ಚುತ್ತಿದೆ. ಕೊಳ್ಳುವ ಬಲವಿರುವವರಿಗೆ ಒಳ್ಳೆಯ ಶಿಕ್ಷಣ. ಇಲ್ಲದವರು ಬೀದಿಪಾಲು ಎಂಬುದು ಸರಕಾರದ ಗೌಪ್ಯ ಕಾರ್ಯಸೂಚಿಯೇ? ಎಂದು ಗಾಬರಿಯಾಗುತ್ತಿದೆ. ಏಕೆಂದರೆ ಇಂದಿಗೂ ದೇಶದಲ್ಲಿ ವಿವಿಧ ಕಾರಣಗಳಿಗಾಗಿ ಬಡ, ತಳಸಮುದಾಯದ, ಹಳ್ಳಿಗಾಡಿನ ಮಕ್ಕಳು ಲಕ್ಷಾಂತರ ಸಂಖ್ಯೆಯಲ್ಲಿ ಶಾಲೆಯಿಂದ ಹೊರಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ.

ಜ್ಯೋತಿ ಬಾ ಹಾಗೂ ಸಾವಿತ್ರಿಬಾಯಿಯವರ ಅಂದಿನ ಶ್ರಮ ಸಾರ್ಥಕವಾಗಬೇಕಾದರೆ ಸಮಾನ ಶಾಲೆ, ಸಮಾನ ಪಠ್ಯಕ್ರಮ, ಸಮಾನ ಮೂಲಭೂತ ಸೌಕರ್ಯಗಳಿರುವ ಸಮಗ್ರ ಸಮಾನ ರಾಷ್ಟ್ರೀಯ ಶಿಕ್ಷಣ ನೀತಿಯೊಂದನ್ನು ಜಾರಿಗೆ ತರಲು ಸರಕಾರದ ಮೇಲೆ ಒತ್ತಡ ಹೇರಲೇಬೇಕಾಗಿದೆ. ಅದರ ಮೊದಲ ಭಾಗವಾಗಿ ಸರಕಾರ, ಸಾವಿತ್ರಿಬಾಯಿಯವರು ಜನಿಸಿದ ಜನವರಿ 3ನ್ನು ರಾಷ್ಟ್ರೀಯ ಸಮಾನ ಶಿಕ್ಷಣ ದಿನವೆಂದು ಘೋಷಿಸಬೇಕು. ಆಗ ಈ ಘೋಷಣೆ ಭಾರತದ ಕಗ್ಗತ್ತಲೆಗೆ ಬೆಳಕಾದ ತಾಯಿಯೊಬ್ಬಳ ದಿನಾಚರಣೆಯಾಗಿಬಿಡುತ್ತದೆ.

ಧೀಮಂತ ಐತಿಹಾಸಿಕ ಮಹಿಳೆಯೊಬ್ಬಳ ಹೆಸರಿನಲ್ಲಿ ಒಂದೇ ಒಂದು ದಿನಾಚರಣೆಯಿಲ್ಲದ ಭಾರತಕ್ಕೆ ತಾಯಿ ಸಾವಿತ್ರಿಬಾಯಿ ಫುಲೆ ಹುಟ್ಟಿದ ದಿನವು ಸಮಾನತೆಯ ತಾಯ್ತನದ ತುಡಿತವನ್ನು ನೆನಪಿಸಿಕೊಳ್ಳದ ನಮ್ಮ ಪುರುಷಪ್ರಧಾನದ ಅಹಂಗೆ ಮದ್ದಾಗಬಹುದು. ಅಂದು ಮಾಮೂಲಿನಂತೆ ಸಾರ್ವತ್ರಿಕ ರಜೆಯನ್ನೇನೂ ಸರಕಾರ ನೀಡುವುದು ಬೇಡ. ರಜೆಯ ಹೆಸರಿನಲ್ಲಿ ಆರಾಮ, ಮೋಜು-ಮಜ ಮಾಡಿ ಕಾಲಹರಣ ಮಾಡುವುದೂ ಬೇಡ. ಹೆಣ್ಣುಮಕ್ಕಳಿಗೆ ಯಾವ ರಜಾ ದಿನಗಳಲ್ಲೂ, ನಿವೃತ್ತಿಯ ನಂತರವೂ ಬಿಡುವೆಂಬುದಿರುವುದೇ ಇಲ್ಲ! ಹೀಗಾಗಿ ರಜೆಯ ಬದಲು ಆ ದಿನದಲ್ಲಿ ಸಮಾನ ಶಿಕ್ಷಣದ ಕುರಿತು ಸರಕಾರ ಮತ್ತು ಇತರ ಪ್ರಗತಿಪರ ಸಂಸ್ಥೆಗಳ ವತಿಯಿಂದ, ಚರ್ಚೆ, ಕಾರ್ಯಾಗಾರ, ಸಂವಾದ, ವಿಚಾರ ಸಂಕಿರಣಗಳು, ಪ್ರಚಾರ ನಡೆಸುವಂತಾಗಬೇಕಾಗಿದೆ. ಇದರ ಫಲಶ್ರುತಿಯನ್ನು ಪಡೆದು, ಸರಕಾರ ಸಮಿತಿಯೊಂದನ್ನು ರಚಿಸಿ ಮುಂದಿನ ವರ್ಷಗಳಲ್ಲಿ ಸಮಾನ ಶಿಕ್ಷಣದ ಯಶಸ್ವಿ ಅಳವಡಿಕೆಯಾದರೆ ಮಾತ್ರ, ಸಂವಿಧಾನದ ಸಮಾನತೆಯ ಆಶಯಕ್ಕೆ ಜೀವಂತಿಕೆ ಬರಬಹುದೇನೋ?

share
ರೂಪಾ ಹಾಸನ
ರೂಪಾ ಹಾಸನ
Next Story
X