ಆಮೆ ನಡಿಗೆಯ ಬುಲೆಟ್ ರೈಲು ಯೋಜನೆ
ರಾಜಕಾರಣದಿಂದ ಬಸವಳಿದ ಜಪಾನ್ ಬೆಂಬಲಿತ ಯೋಜನೆ
ಅಂದುಕೊಂಡಂತೆ ನಡೆದಿದ್ದರೆ ಬುಲೆಟ್ ರೈಲು ಈ ವರ್ಷದೊಳಗೆ ಆರಂಭವಾಗಬೇಕಿತ್ತು. ಆದರೆ ಈ ಯೋಜನೆಯ ಗುಜರಾತ್ ವ್ಯಾಪ್ತಿಗೆ ಬರುವ 63 ಕಿ.ಮೀ.ಗಳ ಒಂದು ಸಣ್ಣ ಭಾಗವನ್ನು ಪೂರ್ಣಗೊಳಿಸಲು 2026ರ ಗುರಿಯನ್ನಿರಿಸಿಕೊಳ್ಳಲಾಗಿದೆ. ಹೀಗಾಗಿ ಮೋದಿಯವರು ತನ್ನ 2024ರ ಲೋಕಸಭಾ ಚುನಾವಣೆಯಲ್ಲಿ ತನ್ನ ಪ್ರಚಾರ ಭಾಷಣಗಳಲ್ಲಿ ಬುಲೆಟ್ ರೈಲು ಯೋಜನೆಯನ್ನು ಪ್ರಸ್ತಾವಿಸುವ ಸಾಧ್ಯತೆಗಳಿಲ್ಲ. ನಮಗೆಲ್ಲಾ ತಿಳಿದಿರುವಂತೆ ಗುಜರಾತ್ ಭಾಗದ ಬುಲೆಟ್ ಯೋಜನೆಯ ಪ್ರಗತಿಯ ವಿಚಾರವನ್ನೇ ಬಿಜೆಪಿಯು ತನ್ನ ಚುನಾವಣಾ ವಾಗಾಡಂಬರದಲ್ಲಿ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ.
ಕೆಲವು ದಿನಗಳ ಹಿಂದೆ ಜೈಪುರ ಸಾಹಿತ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ದಿಲ್ಲಿಯಿಂದ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದಾಗ ಒಂದು ಕಾಲದಲ್ಲಿ ನಾನು ವಿಹರಿಸುತ್ತಿದ್ದಂತಹ ಅದೇ ಸಾಸಿವೆ ಹೊಲಗಳಲ್ಲಿ, ಒರಟಾದ ಮಣ್ಣಿನ ಮನೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳ ತಾಜಾತನದ ತಂಗಾಳಿಯ ಬಯಲುಗಳಲ್ಲಿ ಜಪಾನೀಯರು ತಮ್ಮ ಬೃಹತ್ ಕೈಗಾರಿಕಾ ಹೆಜ್ಜೆಗುರುತುಗಳನ್ನು ಮೂಡಿಸಿರುವುದನ್ನು ಕಂಡು ಅಚ್ಚರಿಯೆನಿಸಿತು.
ಕೈಗಾರಿಕಾ ಲೋಕದ ದಂತಕತೆಯಾದ ಸುಝುಕಿ -ಮಾರುತಿ ಉದ್ಯಮಸಂಸ್ಥೆಯು 1980ರಲ್ಲಿ ಗುರುಗಾಂವ್ನಲ್ಲಿ ಸ್ಥಾಪನೆಯಾಯಿತು. ಹರ್ಯಾಣದ ಭಾಗವಾದ ಬವಾಲ್ನಿಂದ ಹಿಡಿದು ರಾಜಸ್ಥಾನದ ಭಾಗವಾದ ನಿರ್ಮಾನಾದವರೆಗೆ ವ್ಯಾಪಿಸಿರುವ ಗುರುಗಾಂವ್, ಈಗ ಹಲವಾರು ಅತ್ಯಾಧುನಿಕ ಉತ್ಪಾದನಾ ಕೈಗಾರಿಕೆಗಳ ಆಶ್ರಯತಾಣವಾಗಿದೆ.ಇಲ್ಲಿನ ಹೆದ್ದಾರಿಯ ಪಕ್ಕದಲ್ಲಿಯೇ ಡಾಬಾ ಶೈಲಿಯ ಖಾದ್ಯಗಳಿಗೆ ಹೆಸರುವಾಸಿಯಾದಂತಹ ಜಪಾನಿ ರೆಸ್ಟೋರೆಂಟನ್ನು ಕೂಡಾ ನೀವು ಕಾಣುವಿರಿ. ಇವು ಭಾರತದಲ್ಲಿ 11 ಜಪಾನ್ ಕೈಗಾರಿಕಾ ಟೌನ್ಶಿಪ್ (ಜೆಐಟಿ) ಯೋಜನೆಗಳಲ್ಲಿ ಆಶ್ರಯಪಡೆದಿರುವಂತಹ ಸುಮಾರು 1,500 ಜಪಾನಿ ಕಂಪೆನಿಗಳಲ್ಲೊಂದಾಗಿವೆ.
ಸುಪ್ರಸಿದ್ಧವಾದ ಸಮುರಾಯ್ ಸಂಸ್ಥೆಯು ಐದು ವರ್ಷಗಳಿಗೂ ಅಧಿಕ ಸಮಯದ ಅವಧಿಯಲ್ಲಿ ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಹಾಗೂ 42 ಶತಕೋಟಿ ಡಾಲರ್ (ಐದು ಟ್ರಿಲಿಯನ್ ಯೆನ್) ಹೂಡಿಕೆ ಯೋಜನೆಯ ಮೂಲಕ ಜಗತ್ತಿನಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ರಾಷ್ಟ್ರದಲ್ಲಿನ ಜನಸಂಖ್ಯೆಯನ್ನು ಬಳಸಿಕೊಳ್ಳಲು ಪ್ರಧಾನಿಯವರ ತವರು ರಾಜ್ಯದ ಮೇಲೆ ತನ್ನ ಕಣ್ಣನ್ನು ನೆಟ್ಟಿದೆ. 2014-2019ನೇ ಅವಧಿಯಲ್ಲಿ 3.5 ಟ್ರಿಲಿಯನ್ ಯೆನ್ಗಳ ಆರ್ಥಿಕತೆಯ ರಾಷ್ಟ್ರವಾಗುವ ತನ್ನ ಗುರಿಯನ್ನು ಜಪಾನ್ ಯಶಸ್ವಿಯಾಗಿ ಸಾಧಿಸಿದೆ. ‘‘ವಿಶೇಷವಾದ ವ್ಯೆಹಾತ್ಮಕ ಹಾಗೂ ಜಾಗತಿಕ ಪಾಲುದಾರಿಕೆ’’ಯಿಂದ ಸಭ್ಯವಾದ ಪ್ರಗತಿಯನ್ನು ಸಾಧಿಸಲು ಸಾಧ್ಯವೆಂಬುದನ್ನ್ನು ಅದು ತೋರಿಸಿಕೊಟ್ಟಿದೆ.
ಆದಾಗ್ಯೂ, ಬುಲೆಟ್ ರೈಲು ಎಂಬುದು ವಿಭಿನ್ನವಾದ ಕಥೆಯಾಗಿದೆ. ಆ ಯೋಜನೆಯ ಆಗಮನದಲ್ಲಿ ಅದು ಸೂಪರ್ಫಾಸ್ಟ್ ಆಗಿತ್ತು. ಆದರೆ, ಪ್ರಸಕ್ತ ಪ್ರಗತಿಯು ಆ ರೈಲಿನ ಉದ್ದೇಶಿತ ವೇಗಕ್ಕೆ ಸರಿಸಾಟಿಯಾಗಿಲ್ಲ. ನರೇಂದ್ರ ಮೋದಿಯವರ ‘ಉದ್ಯಮ ನಿರ್ವಹಣೆಯನ್ನು ಸುಲಲಿತಗೊಳಿಸುವ’ (easy of doing business) ನೀತಿಯು, ಈ ಯೋಜನೆಯಲ್ಲಿ ಹತಾಶೆಯನ್ನು ಎದುರಿಸುತ್ತಿದೆ. ಕಳೆದ ವಾರಾಂತ್ಯದಲ್ಲಿ ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಅವರ ಭಾರತ ಭೇಟಿಯು ಪ್ರಗತಿಯ ನವಶಕೆಯ ಉದಯಕ್ಕಾಗಿ ಹಾಗೂ ಏಶ್ಯಾದ್ಯಂತ ಚೀನಾದ ಮುನ್ನಡೆಗೆ ಕಡಿವಾಣ ಹಾಕಲು ಟೋಕಿಯೋ-ಹೊಸದಿಲ್ಲಿ ನಡುವೆ ಏರ್ಪಟ್ಟ ಮೈತ್ರಿಯ ಸಂಕೇತವೆನಿಸಿತ್ತು. ಆದರೆ ಬುಲೆಟ್ ರೈಲು ವಿಚಾರದಲ್ಲಿ ಫಲಿತಾಂಶಗಳಿಗಿಂತ ಹೆಚ್ಚಾಗಿ ಹಾವಭಾವಗಳನ್ನೇ ಹೆಚ್ಚಾಗಿ ಪ್ರದರ್ಶಿಸುತ್ತಿರುವಂತಿದೆ.
ಭಾರತದ ‘ಜುಗ್ಗಡ್’ (ಸಮಸ್ಯೆಗೆ ಸುಲಭವಾದ ಪರಿಹಾರವನ್ನು ಕಂಡುಕೊಳ್ಳಲು ಅಗ್ಗದ ಇಲ್ಲವೇ ಮೂಲಭೂತ ವಸ್ತುಗಳನ್ನು ಬಳಸಿಕೊಂಡು ಸ್ವಂತ ಪರಿಕಲ್ಪನೆ ಅಥವಾ ಕೌಶಲ್ಯದ ಮೂಲಕ ವಸ್ತುಗಳು, ಸಾಧನಗಳ ನಿರ್ಮಾಣ, ಅನ್ವೇಷಣೆ) ನಿಲುವು ಜಪಾನ್ನ ತ್ವರಿತವೇಗದ ಹಾಗೂ ಸಮಯ ಕ್ಲಪ್ತತೆಯ ಶೈಲಿಗೆ ಸವಾಲೊಡ್ಡಿದೆ. ಬುಲೆಟ್ ರೈಲು ಯೋಜನೆಯಲ್ಲಿಯೂ ಇದು ಸ್ಪಷ್ಟವಾಗಿ ಕಂಡುಬಂದಿದೆ.
ಅಧಿಕೃತವಾಗಿ ಗುಜರಾತ್ ಸರಕಾರವು 500 ಕಿ.ಮೀ.ಗೂ ವಿಸ್ತೀರ್ಣದ ಯೋಜನೆಗಾಗಿ ಬೇಕಾದ 360 ಹೆಕ್ಟೇರ್ ಜಮೀನಿನ ಶೇ.99ರಷ್ಟನ್ನು ಈಗಾಗಲೇ ಸ್ವಾಧೀನಪಡಿಸಿಕೊಂಡಿದೆ. ಆದರೆ ನೀವು ಯೋಜನೆ ಘೋಷಣೆಯಾದ ದಿನಾಂಕವನ್ನು ನೋಡುವುದಾದರೆ (2017) ಈ ಪ್ರಗತಿಯು ‘ನಾವು ಸಾಧಿಸಬಲ್ಲೆವು’ ಎಂಬ ಮೋದಿಯವರ ಇಮೇಜ್ಗೆ ತಾಳೆಯಾಗುತ್ತಿಲ.್ಲ ಬುಲೆಟ್ ರೈಲು ಯೋಜನೆಗಾಗಿ ಕಳೆದ 2021ರ ಸೆಪ್ಟಂಬರ್ವರೆಗೆ ಮಹಾರಾಷ್ಟ್ರದ ಭಾಗದಿಂದ ಕೇವಲ ಶೇ.30ರಷ್ಟನ್ನು ಮಾತ್ರವೇ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ ಕಳೆದ ತಿಂಗಳು ಪ್ರಕಟಿಸಲಾದ ನೂತನ ಮಾಹಿತಿಯ ಪ್ರಕಾರ ಶೇ.62ರಷ್ಟು ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಯೋಜನೆಯ ಒಟ್ಟು ವಿಸ್ತೀರ್ಣಕ್ಕಾಗಿ 17 ಶತಕೋಟಿ ಡಾಲರ್ ಖರ್ಚಾಗುವುದೆಂದು ಅಂದಾ ಜಿಸಲಾಗಿದೆ. ಈ ಮೊತ್ತದಲ್ಲಿ ಮಹಾರಾಷ್ಟ್ರದಲ್ಲಿ 156 ಕಿ.ಮೀ., ಗುಜರಾತ್ನಲ್ಲಿ 348 ಕಿ.ಮೀ. ಹಾಗೂ ದಾದ್ರಾ-ನಗರ್ಹವೇಲಿಗೆ 5 ಕಿ.ಮೀ. ವೆಚ್ಚವಾಗುವ ನಿರೀಕ್ಷೆಯಿದೆ.
ಮೋದಿಯ ಪರಿತ್ಯಕ್ತ ಮಿತ್ರಪಕ್ಷ ಹಾಗೂ ಮಹಾರಾಷ್ಟ್ರದ ಆಡಳಿತಾರೂಢ ಪಕ್ಷವಾದ ಶಿವಸೇನೆಯು ಬುಲೆಟ್ ರೈಲು ಯೋಜನೆಯ ಕಾಮಗಾರಿಗೆ ಕಿರಿಕ್ ಉಂಟು ಮಾಡುವ ಸಾಧ್ಯತೆಯಿದೆ. 2020ರ ಫೆಬ್ರವರಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬುಲೆಟ್ ರೈಲು ಯೋಜನೆಯನ್ನು ‘ಬಿಳಿ ಆನೆ’ ಎಂದು ಬಣ್ಣಿಸಿದ್ದರು. ಆದರೆ 18 ತಿಂಗಳುಗಳ ಆನಂತರ ತನ್ನ ನಿಲುವನ್ನು ಬದಲಿಸಿದ ಅವರು ಮುಂಬೈ-ನಾಗಪುರ ಬುಲೆಟ್ ರೈಲು ಯೋಜನೆಗೆ ಬೆಂಬಲ ವ್ಯಕ್ತಪಡಿಸಿದ್ದರು. ನರೇಂದ್ರ ಮೋದಿ ಅವರು ಕಳೆದ ತಿಂಗಳು ಬುಲೆಟ್ ರೈಲು ಯೋಜನೆಯ ಮೂಲಕ ಅಹ್ಮದಾಬಾದ್ ಜೊತೆ ಸಂಪರ್ಕ ಏರ್ಪಡಿಸಿಕೊಳ್ಳುವ ಮೂಲಕ ಮುಂಬೈ ಕನಸುಗಳ ನಗರಿಯಾಗಲಿದೆ ಎಂದು ಹೇಳಿದ್ದರು. ವಿನಯಪೂರ್ವಕವಾಗಿ ಈ ಮಾತನ್ನು ಹೇಳುವ ಮೂಲಕ ಮೋದಿಯವರು ಒಂದು ವೇಳೆ ಉದ್ಧವ್ ಠಾಕ್ರೆ ಅಹ್ಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನೆ ಬಗ್ಗೆ ವಿರೋಧ ವ್ಯಕ್ತಪಡಿಸಿದಲ್ಲಿ ತಾನು ನಿಂತಿರುವ ಮರದ ಕೊಂಬೆಯನ್ನು ತಾನೇ ಕಡಿದಂತೆ ಆಗಲಿದೆ ಎಂಬ ಸಂದೇಶವನ್ನು ನಯವಾಗಿ ರವಾನಿಸಿದ್ದರು.
ಗಮನಾರ್ಹ ವಿಷಯವೆಂದರೆ ಇದೇ ಶಿವಸೇನೆಯು ಒಂದು ಕಾಲದಲ್ಲಿ ತನ್ನ ಹಾಲಿ ಮಿತ್ರ ಈ ಮೊದಲು ವಿರೋಧಿಗಳಾಗಿದ್ದ ಶರದ್ ಪವಾರ್ ಹಾಗೂ ಕಾಂಗ್ರೆಸ್ ಪಕ್ಷವನ್ನು ಗುರಿಯಿರಿಸುವುದಕ್ಕಾಗಿ ಎನ್ರಾನ್ ವಿದ್ಯುತ್ ಯೋಜನೆಯನ್ನು ವಿರೋಧಿಸಿತ್ತ್ತು. ಮೋದಿ ನೇತೃತ್ವದ ಬಿಜೆಪಿಯ ಚುನಾವಣಾ ತಂತ್ರಗಾರಿಕೆಯಂತಹ ರಾಜಕೀಯ ಬುಲೆಟ್ ಟ್ರೈನ್ ಉದ್ಧವ್ ಠಾಕ್ರೆಯವರ ತೀವ್ರವಾದಿ ಮರಾಠಾ ಅಸ್ಮಿತೆಯನ್ನು ಬದಿಗೊತ್ತುವುದಕ್ಕಾಗಿ ಕೈಗಾರಿಕೆ ಹಾಗೂ ಮೂಲಸೌಕರ್ಯಗಳಿಗಾಗಿ ರೈತರು ತಮ್ಮ ಕೃಷಿ ಜಮೀನನ್ನು ನೀಡುವಾಗ ದೊಡ್ಡ ಮೊತ್ತವನ್ನೇ ಪಾವತಿಸಲಾಯಿತು.
ಪಶ್ಚಿಮ ಭಾರತದಲ್ಲಿ ಜಪಾನ್ನ ಅಧಿಕವೇಗದ ರೈಲು ಜಾಲ ‘ಶಿಂಕಾನ್ಸೆನ್’ ಯೋಜನೆಯ ಪ್ರಗತಿಯು, ಹರ್ಯಾಣ-ರಾಜಸ್ಥಾನದ ಕೈಗಾರಿಕಾ ಪ್ರಗತಿಯು ವ್ಯತಿರಿಕ್ತವಾಗಿದೆ. ಜಪಾನ್ನ ಅಂತರ್ರಾಷ್ಟ್ರೀಯ ಸಹಕಾರ ಸಂಸ್ಥೆ (ಜೆಐಸಿಎ) ಬುಲೆಟ್ ರೈಲು ಯೋಜನೆಗಾಗಿ ಶೇ.80ಕ್ಕಿಂತಲೂ ಅಧಿಕ ಹಣಕಾಸು ನೆರವು ನೀಡುತ್ತಿದೆ. ಇತರ ಹಲವಾರು ಮಹತ್ವಾಕಾಂಕ್ಷಿ ಕೈಗಾರಿಕಾ ಉದ್ಯಮಿಗಳ ಹಾಗೆ ಈ ಸಮಸ್ಯೆಯು ರಾಜಕೀಯವೆಂಬಂತೆ ಕಾಣುತ್ತಿದೆಯೇ ಹೊರತು ಹಣವಲ್ಲ. ಭಾರತದ ಆರ್ಥಿಕ ಸುಧಾರಣೆ ಕಾರ್ಯಕ್ರಮದ ಜಾಗತಿಕ ಮಾಸ್ಟರ್ಪೀಸ್ ಎಂದೇ ಬಣ್ಣಿಸಲಾಗಿದ್ದ 1990ರ ದಶಕದಲ್ಲಿ ನೆಲಕಚ್ಚಿದ ಎನ್ರಾನ್ ವಿದ್ಯುತ್ ಯೋಜನೆ ಇದಕ್ಕೊಂದು ನಿದರ್ಶನವಾಗಿದೆ.
ಅಂದುಕೊಂಡಂತೆ ನಡೆದಿದ್ದರೆ ಬುಲೆಟ್ ರೈಲು ಈ ವರ್ಷದೊಳಗೆ ಆರಂಭವಾಗಬೇಕಿತ್ತು. ಆದರೆ ಈ ಯೋಜನೆಯ ಗುಜರಾತ್ ವ್ಯಾಪ್ತಿಗೆ ಬರುವ 63 ಕಿ.ಮೀ.ಗಳ ಒಂದು ಸಣ್ಣ ಭಾಗವನ್ನು ಪೂರ್ಣಗೊಳಿಸಲು 2026ರ ಗುರಿಯನ್ನಿರಿಸಿಕೊಳ್ಳಲಾಗಿದೆ. ಹೀಗಾಗಿ ಮೋದಿಯವರು ತನ್ನ 2024ರ ಲೋಕಸಭಾ ಚುನಾವಣೆಯಲ್ಲಿ ತನ್ನ ಪ್ರಚಾರ ಭಾಷಣಗಳಲ್ಲಿ ಬುಲೆಟ್ ರೈಲು ಯೋಜನೆಯನ್ನು ಪ್ರಸ್ತಾವಿಸುವ ಸಾಧ್ಯತೆಗಳಿಲ್ಲ. ನಮಗೆಲ್ಲಾ ತಿಳಿದಿರುವಂತೆ ಗುಜರಾತ್ ಭಾಗದ ಬುಲೆಟ್ ಯೋಜನೆಯ ಪ್ರಗತಿಯ ವಿಚಾರವನ್ನೇ ಬಿಜೆಪಿಯು ತನ್ನ ಚುನಾವಣಾ ವಾಗಾಡಂಬರದಲ್ಲಿ ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ.
ವಿವರವೇನೇ ಇರಲಿ,ಯೋಜನೆಯು ಪೂರ್ಣಗೊಳ್ಳುವ ವೇಗ ಹಾಗೂ ವೆಚ್ಚವು ರೈತ-ರಾಜಕೀಯ ವಿಷಯಗಳು ಹಾಗೂ ಭಾರತದ ವಾಸ್ತವಿಕ ನೆಲೆಗಟ್ಟುಗಳ ಮಿಶ್ರಣವಾಗಿದೆ. ಮೋದಿಯವರ ‘ಆ್ಯಕ್ಟ್ ಈಸ್ಟ್’ (ಪೂರ್ವದೆಡೆಗೆ ಕಾರ್ಯಾಚರಿಸಿ) ನೀತಿಯು ಜಾಗತಿಕ ವ್ಯವಹಾರಗಳಲ್ಲಿ ಚೆನ್ನಾಗಿ ಕಂಡುಬರಬಹುದು. ಆದರೆ ಬುಲೆಟ್ ರೈಲು ಯೋಜನೆಯು ರಾಷ್ಟ್ರೀಯ ಹೈಸ್ಪೀಡ್ ರೈಲು ಕಾರ್ಪೊರೇಶನ್ ಲಿಮಿಟೆಡ್, ಮಹಾರಾಷ್ಟ್ರದಲ್ಲಿ ಮೋದಿಯವರ ಆ್ಯಕ್ಟ್ ವೆಸ್ಟ್ ನೀತಿಯ ಕೊರತೆಯಿಂದಾಗಿ ಬಹಳಷ್ಟು ಬಾಧಿತವಾಗಿದೆ.
ನೀತಿ ವಾಕ್ಯ: ಭಾರತದಲ್ಲಿ ಆರ್ಥಿಕತೆಯು ಹಲವಾರು ಸಂದರ್ಭಗಳಲ್ಲಿ . ಅದರಲ್ಲೂ ವಿಶೇಷವಾಗಿ ರೈತರು ಹಾಗೂ ಸರಕಾರದ ಹಾಲಿ ಮಿತ್ರರು ಅಥವಾ ಪರಿತ್ಯಕ್ತ ಮಿತ್ರರು ಶಾಮೀಲಾದಲ್ಲಿ ಅದು ರಾಜಕೀಯಕ್ಕೆ ತಿರುಗುತ್ತದೆ.
(ಲೇಖಕರು ಹಿರಿಯ ಪತ್ರಕರ್ತರಾಗಿದ್ದವರು ಹಾಗೂ ರಾಯ್ಟರ್ಸ್, ಇಕನಾಮಿಕ್ಟೈಮ್ಸ್, ಬ್ಯುಸಿನೆಸ್ ಸ್ಟಾಂಡರ್ಡ್ ಹಾಗೂ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗಳಲ್ಲಿ ವಿಮರ್ಶಕರಾಗಿ ಕೆಲಸ ಮಾಡಿದವರು.)
ಕೃಪೆ: thequint.com