-

ಟಿಪ್ಪು ಕಾಲದಲ್ಲಿ ಧಾರ್ಮಿಕ ಸಹಿಷ್ಣುತೆ

-

ಯಾವುದೇ ಸಂದರ್ಭದಲ್ಲೂ ಟಿಪ್ಪು ಹಿಂದೂ ಧರ್ಮ ಮತ್ತು ದೇವಾಲಯಗಳ ಶ್ರೇಯೋಭಿವೃದ್ಧಿಗೆ ನೀಡಿರುವ ದೇಣಿಗೆಯನ್ನು ಒಂದು ರಾಜಕೀಯ ಅಸ್ತ್ರವನ್ನಾಗಿ ಪರಿವರ್ತನೆ ಮಾಡಿಕೊಳ್ಳಲಿಲ್ಲ ಹಾಗೂ ತನ್ನ ವೈಯಕ್ತಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಉಪಯೋಗಿಸಿಕೊಂಡಿರಲಿಲ್ಲ. ಬದಲಾಗಿ, ತನ್ನ ಸಾಮ್ರಾಜ್ಯದಲ್ಲಿ ಶಾಂತಿಯ ವಾತಾವರಣವಿದ್ದಾಗಲೇ ಇಂತಹ ದೇಣಿಗೆಗಳನ್ನು ನೀಡಿದ್ದನು.


ಭಾಗ-1
 

ಸಾಮ್ರಾಜ್ಯಶಾಹಿ ಪ್ರಕ್ರಿಯೆಯಲ್ಲಿ ಪ್ರತಿನಿಧಿಸಿ ಬ್ರಿಟಿಷ್ ಸಾಮ್ರಾಜ್ಯ ಮತ್ತು ಅದರ ಪ್ರಭುತ್ವ ಸಮರ್ಥವಾದುದು ಎಂದು ಶ್ರುತಪಡಿಸುವ ಯೋಜನೆಯನ್ನು ಹಾಕಿಕೊಂಡು ಬ್ರಿಟಿಷ್ ಬರಹಗಾರ ವಿನ್ಸೆಂಟ್ ಸ್ಮಿತ್ ಟಿಪ್ಪುವಿನ ಕಾಲದ ಹಲವು ಘಟನಾವಳಿಗಳನ್ನು ಏಕಮುಖವಾಗಿ ವಿವರಿಸುತ್ತಾನೆ. ಟಿಪ್ಪು ಮತ್ತು ಹಿಂದೂ ಧರ್ಮದ ಸಂಬಂಧವನ್ನು ತಪ್ಪಾಗಿ ವಿಶ್ಲೇಷಿಸುತ್ತ ಒಂದು ಕಡೆ ಅವನ ಬಗ್ಗೆ ಸ್ಮಿತ್ ಹೀಗೆ ಹೇಳುತ್ತಾನೆ. ""His fierce Muslim bigotry did not prevent him from having recourse to Brahman prayers in time of danger, or even from making gifts to hindu temples.''  ಈ ಹೇಳಿಕೆಯ ಹಿಂದೆ ಸ್ಮಿತ್‌ಗೆ ಟಿಪ್ಪುವಿನ ಬಗ್ಗೆ ಪೂರ್ವಗ್ರಹವಿತ್ತೆಂಬುದು ಗ್ರಾಸವಾಗುತ್ತದೆ ಮತ್ತು ಅವನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ವ್ಯವಸ್ಥಿತವಾದ ಉದ್ದೇಶ ಇತ್ತೆಂಬುದು ಟಿಪ್ಪು ಮತ್ತು ಹಿಂದೂ ಧರ್ಮದ ಸಂಬಂಧವನ್ನು ತಿಳಿಯುವಾಗ ಸ್ಪಷ್ಟವಾಗುತ್ತದೆ. ಸ್ಮಿತ್ ಹೇಳುವ ಹಾಗೆ ಟಿಪ್ಪು ಯಾವ ಕಾರಣಕ್ಕೂ ತನ್ನ ಸಾಮ್ರಾಜ್ಯದಲ್ಲಿ ಕ್ಷೋಬೆ ಉಂಟಾದಾಗ ಅಥವಾ ಅವನು ಕಠಿಣ ಸವಾಲು ಎದುರಿಸುವಾಗ ಮಾತ್ರ ಹಿಂದೂ ದೇವಾಲಯಗಳಿಗೆ ಉಡುಗೊರೆ ಮತ್ತು ಪ್ರೋತ್ಸಾಹ ನೀಡಿದನು ಎಂದು ಹೇಳುವುದು ತಪ್ಪಾಗುತ್ತದೆ ಮತ್ತು ಅವನ ಸಾಮ್ರಾಜ್ಯ ವೈರಿಗಳಿಂದ ಬೆದರಿಕೆ ಎದುರಿಸುವಾಗ ಮಾತ್ರ ಬ್ರಾಹ್ಮಣರನ್ನು ಕೂಡಿಕೊಂಡು ಹಿಂದೂ ದೇವಾಲಯಗಳಲ್ಲಿ ಪೂಜೆ ಪುರಸ್ಕಾರ, ಹೋಮ, ಹವನ ಮತ್ತು ಇನ್ನಿತರ ಧಾರ್ಮಿಕ ಕ್ರಿಯೆಗಳನ್ನು ಮಾಡಿಸಿದನು ಎಂದು ವಿಶ್ಲೇಷಿಸುವುದಕ್ಕೆ ಆಧಾರಗಳು ಇಲ್ಲ.

ಟಿಪ್ಪು ಯಾವತ್ತೂ ಅಂತಹ ಇಬ್ಬಗೆಯ ಧೋರಣೆಯನ್ನು ಪ್ರಜೆಗಳ ವಿಷಯವಾಗಿ ಮಾಡಲೇ ಇಲ್ಲ ಎಂಬುದು ಹಲವಾರು ಪುರಾವೆಗಳಿಂದ ತಿಳಿದು ಬರುತ್ತದೆ. ಯಾವುದೇ ಸಂದರ್ಭ ದಲ್ಲೂ ಅವನು ಹಿಂದೂ ಧರ್ಮ ಮತ್ತು ದೇವಾಲಯಗಳ ಶ್ರೇಯೋಭಿವೃದ್ಧಿಗೆ ನೀಡಿರುವ ದೇಣಿಗೆಯನ್ನು ಒಂದು ರಾಜಕೀಯ ಅಸ್ತ್ರವನ್ನಾಗಿ ಪರಿವರ್ತನೆ ಮಾಡಿಕೊಳ್ಳಲಿಲ್ಲ ಹಾಗೂ ತನ್ನ ವೈಯಕ್ತಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಉಪಯೋಗಿಸಿಕೊಂಡಿರಲಿಲ್ಲ. ಬದಲಾಗಿ, ತನ್ನ ಸಾಮ್ರಾಜ್ಯದಲ್ಲಿ ಶಾಂತಿಯ ವಾತಾವರಣವಿದ್ದಾಗಲೇ ಇಂತಹ ದೇಣಿಗೆಗಳನ್ನು ನೀಡಿದ್ದನು ಹಾಗೂ ಪ್ರಾರ್ಥನೆ ಸಲ್ಲಿಸಿದ್ದನು. ತನ್ನ ಸ್ವ-ಇಚ್ಛೆಯಿಂದ ಮತ್ತು ತನ್ನ ಪ್ರಜೆಗಳ ಹಿತರಕ್ಷಣೆ ಮಾಡುವುದು ಒಬ್ಬ ಪ್ರಭುವಿನ ಮೂಲಭೂತ ಕರ್ತವ್ಯವೆಂದೇ ಭಾವಿಸಿದ್ದು ಆ ಹೊಣೆಯನ್ನು ದೇವರೇ ಅವನಿಗೆ ದಯಪಾಲಿಸಿರುವುದು ಎಂದು ಸ್ಪಷ್ಟವಾಗಿ ನಂಬಿರುವುದಕ್ಕೆ ಸಾಕಷ್ಟು ಐತಿಹಾಸಿಕ ದಾಖಲೆಗಳಿವೆ. ಇಲ್ಲಿ ನಾವು ಒಂದು ವಿಷಯವನ್ನು ಪರಿಗಣಿಸಬೇಕು. ಯಾವ ಸಂದರ್ಭದಲ್ಲೂ ಇತಿಹಾಸಕಾರರು ಒಬ್ಬ ರಾಜನ ವ್ಯಕ್ತಿತ್ವವನ್ನು ಅವನು ಮಾಡಿದ ಕೆಟ್ಟ ಕೆಲಸಗಳಿಂದಲೇ ನಿರೂಪಿಸುವುದಾದರೆ ಬಹುಶಃ ಜಗತ್ತಿನಲ್ಲಿ ಯಾವುದೇ ಕಾಲಕ್ಕೂ ಒಳ್ಳೆಯ ಗುಣಗಳನ್ನಿಟ್ಟುಕೊಂಡು ಅಡಳಿತ ನಡೆಸಿದ ಯಾವುದೇ ಸಾರ್ವಭೌಮನು ಸಿಗುವುದು ವಿರಳ. ಟಿಪ್ಪುವಿನ ವಿಚಾರದಲ್ಲಿ, ಅವನು ಮಾಡಿದ ಕೆಲವು ಕೆಡುಕುಗಳನ್ನು ಬದಿಗಿಟ್ಟು ಮಾತನಾಡುವುದಾದರೆ-ಅವನ ಸಂಸ್ಥಾನದಲ್ಲಿ ತನ್ನ ಪ್ರಭುತ್ವದ ಬೆಳವಣಿಗೆಗೆ, ಸಾಮ್ರಾಜ್ಯದೊಳಗೆ ಹಿಂದೂ ಧರ್ಮದ ಅಭಿವೃದ್ಧಿಗೆ ಮತ್ತು ವೈಭವಕ್ಕೆ ಶಕ್ತಿ ಮೀರಿ ಪ್ರಯತ್ನಿಸಿರುವುದು ತಿಳಿಯಬಹುದು. ಭಾರತದಲ್ಲಿ ಹಿಂದೂ ಧರ್ಮ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮೈಸೂರು ಸಂಸ್ಥಾನದಲ್ಲಿ ಟಿಪ್ಪು ಪ್ರಭುವಾಗಿ ಆ ಧರ್ಮದ ಬೆಳವಣಿಗೆ, ರಕ್ಷಣೆ ಮತ್ತು ಅದಕ್ಕೆ ಸಿಗಬೇಕಾದ ಗೌರವವನ್ನು ಎಲ್ಲೂ ಚ್ಯುತಿ ಬರದ ರೀತಿಯಲ್ಲಿ ಉಳಿಸಿಕೊಂಡು ಬಂದಿರುವ ಸಂಸ್ಕೃತಿ, ಟಿಪ್ಪುವಿನ ವ್ಯಕ್ತಿತ್ವ ನಿರೂಪಣೆಗೆ ಇದು ಮುಖ್ಯವಾದ ಅಂಶವಾಗಿ ಕಂಡು ಬರುತ್ತದೆ ಎಂಬುದು ನನ್ನ ಅನಿಸಿಕೆ.

ಟಿಪ್ಪು ಮತ್ತು ಹಿಂದೂ ದೇವಾಲಯಗಳು:
ಟಿಪ್ಪುವಿನ ಸಾಮ್ರಾಜ್ಯದ ನಾಲ್ಕು ಬೇರೆ ಬೇರೆ ದಿಕ್ಕುಗಳಲ್ಲಿರುವ ಬೇರೆ ಬೇರೆ ದೇವಾಲಯಗಳಿಗೆ ಯಾವುದೇ ತಾರತಮ್ಯ ತೋರದೆ ಅವನು ನೀಡಿರುವ ದಾನ ಧರ್ಮ ಗಮನಾರ್ಹ. ಇವುಗಳಲ್ಲಿ ಪ್ರಮುಖವಾದವುಗಳನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗುತ್ತದೆ.
1. ರಾಜಧಾನಿ ಶ್ರೀರಂಗಪಟ್ಟಣದ ರಂಗನಾಥ ದೇವಾಲಯ.
2. ಮೇಲುಕೋಟೆಯ ನರಸಿಂಹ ದೇವಸ್ಥಾನ ಮತ್ತು ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ನಾರಾಯಣ ಸ್ವಾಮಿ ದೇವಸ್ಥಾನ.
3. ನಂಜನಗೂಡು ತಾಲೂಕು ಕಳಲೆಯ ಲಕ್ಷ್ಮೀಕಾಂತ ದೇವಾಲಯ ಮತ್ತು ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ.

ರಂಗನಾಥ ದೇವಾಲಯಕ್ಕೆ 7 ಬೆಳ್ಳಿ ಲೋಟಗಳನ್ನು ಮತ್ತು ಒಂದು ಬೆಳ್ಳಿಯ ಟರ್ಪಿಯನ್ನು ಡಿದ್ದನು. ನರಸಿಂಹ ದೇವಾಲಯಕ್ಕೆ ಒಂದು ನಗಾರಿ, ಲಕ್ಷ್ಮೀಕಾಂತ ದೇವಾಲಯಕ್ಕೆ 4 ಬೆಳ್ಳಿ ಲೋಟ ಮತ್ತು ಒಂದು ಬೆಳ್ಳಿ ಪಡಿಗ, ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ಚಿನ್ನ ಮಿಶ್ರಿತ ಬೆಳ್ಳಿಯ ಲೋಟಗಳು. ಅದೇ ರೀತಿಯಾಗಿ ಮೇಲುಕೋಟೆ ನಾರಾಯಣ ಸ್ವಾಮಿ ದೇವಸ್ಥಾನವು ಹೊಂದಿರುವ ಕೆಲವು ಆಭರಣಗಳು ಮತ್ತು ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳ ಮೇಲಿನ ಶಾಸನಗಳು, ಅವು ಟಿಪ್ಪುವಿನ ಅರ್ಪಣೆಗಳೆಂದು ಹೇಳುತ್ತವೆ. ಹಾಗೆಯೇ ಟಿಪ್ಪು ಈ ದೇವಸ್ಥಾನಕ್ಕೆ 1785ರಲ್ಲಿ ಹನ್ನೆರಡು ಆನೆಗಳನ್ನು ಮತ್ತು 1786ರಲ್ಲಿ ಒಂದು ನಗಾರಿಯನ್ನೂ ಕೊಟ್ಟನು. ತಳದಲ್ಲಿ ಐದು ವಿಧವಾದ ಅಮೂಲ್ಯವಾದ ಹರಳುಗಳನ್ನು ಕುಂದಣಿಸಿರುವ ರತ್ನದ ಬಟ್ಟಲು ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿದೆ. ಅದು ಟಿಪ್ಪು ಸುಲ್ತಾನನ ಅರ್ಪಣೆ. ಈ ಎಲ್ಲಾ ದೇಣಿಗೆಗಳನ್ನು ದಾನಗಳನ್ನು, ಟಿಪ್ಪುವೇ ಮಾಡಿದ್ದಾನೆ ಎನ್ನುವುದಕ್ಕೆ ಈ ಎಲ್ಲಾ ವಸ್ತುಗಳಲ್ಲಿ ‘ಟಿಪ್ಪು ಸುಲ್ತಾನ್ ಬಾದ್ ಶಾಹ’ ಎಂದು ಬರೆಸಲಾಗಿತ್ತು. ಹಾಗಾಗಿ ಇವುಗಳು ಅವನ ಉಡುಗೊರೆ ಎಂದು ಹೇಳುವುದಕ್ಕೆ ಪುರಾವೆ.

ಈ ಎಲ್ಲಾ ಉಡುಗೊರೆಗಳನ್ನು ಟಿಪ್ಪು ನೀಡಿರುವುದು ಅವನ ಸಾಮ್ರಾಜ್ಯದಲ್ಲಿ ಶಾಂತಿ ಇದ್ದಾಗಲೇ ಹೊರತು ಬಿಕ್ಕಟ್ಟಿನ ಅಥವಾ ಕಷ್ಟದ ಸಮಯದಲ್ಲಿ ಅಲ್ಲ ಮತ್ತು ಟಿಪ್ಪುವಿಗಿದ್ದ ವೈಯಕ್ತಿಕ ಆಸಕ್ತಿಯ ನೆಲೆಯಲ್ಲಿ ಸಾಧ್ಯವಾಗಿರುವುದು. ಇದರಿಂದ ಕೆಲವೊಂದು ಅಂಶಗಳನ್ನು ತಿಳಿಯಬಹುದು. 1) ಹಿಂದೂ ದೇವಾಲಯಗಳಿಗೆ ಉಡುಗೊರೆ, ದೇಣಿಗೆಗಳನ್ನು ನೀಡುವ ಪದ್ಧತಿ ಟಿಪ್ಪು ಹೊಸದಾಗಿ ಏನು ಆರಂಭಿಸಿರುವುದಲ್ಲ. ಬದಲಾಗಿ, ಅದು ಅವನ ತಂದೆ ಹೈದರ್ ಅಲಿಯ ಕಾಲದಲ್ಲೂ ಚಾಲ್ತಿಯಲ್ಲಿದ್ದು ಅದನ್ನು ಟಿಪ್ಪು ಮುಂದುವರಿಸಿದನು ಅಷ್ಟೇ. ಉದಾಹರಣೆಗೆ ದೇವನಹಳ್ಳಿ ಗೋಪಾಲಕೃಷ್ಣ ದೇವಾಲಯಕ್ಕೆ 1760ರಲ್ಲಿ ಹೈದರ್ ಅಲಿ ಒಂದು ಬೆಳ್ಳಿಯ ಲೋಟವನ್ನು ನೀಡಿದ್ದನು. ಆ ಬೆಳ್ಳಿಯ ಪಾತ್ರೆಯಲ್ಲಿ ಬರೆಸಿರುವ ನವಾಬ ಹೈದರ್ ಅಲಿ ಖಾನ್ ಬಹದೂರ್ ಬಿರುದು ಸಾಕ್ಷಿಯಾಗಿರುತ್ತದೆ. 2) ಹಿಂದೂ ದೇವಾಲಯಕ್ಕೆ ದೇಣಿಗೆ ನೀಡುವ ಪದ್ಧತಿ, ರೂಢಿ ಮತ್ತು ರಿವಾಜುಗಳು ಕೇವಲ ಪ್ರಭುಗಳಿಗೆ, ರಾಜರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಬದಲಾಗಿ ಟಿಪ್ಪು ಆಡಳಿತದಲ್ಲಿ ಸೇವೆ ಸಲ್ಲಿಸುತ್ತಿದ್ದ ಅನೇಕ ಮುಸ್ಲಿಮ್ ಮಂತ್ರಿಗಳು, ಅಧಿಕಾರಿಗಳು ಕೂಡ ಈ ಕೆಲಸವನ್ನು ಮಾಡಿರುವುದು ತಿಳಿದು ಬರುತ್ತದೆ. ಉದಾಹರಣೆಗೆ, ಚಾಪರ್ ಖಾನ್ ಬೊಮ್ಮಾನಿಯು ಟಿಪ್ಪು ಸುಲ್ತಾನನ ಒಬ್ಬ ಅಮೀನ್ದಾರನಾಗಿದ್ದು ಅವನು ಕುಣಿಗಲ್ ತಾಲೂಕಿನ ಎಡೆಯೂರು ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ಎರಡು ಗಂಟೆಗಳನ್ನು ನೀಡಿದ್ದನು. ಆ ಗಂಟೆಗಳಲ್ಲಿ ಈ ಅಧಿಕಾರಿಯ ಹೆಸರನ್ನೇ ಬರೆಸಲಾಗಿತ್ತು.

ಹಿಂದೂ ಧಾರ್ಮಿಕ ಕೇಂದ್ರಗಳಿಗೆ ಟಿಪ್ಪು ಸುಲ್ತಾನನ ಪ್ರೋತ್ಸಾಹ
ಶೃಂಗೇರಿ ಮಠಕ್ಕೆ ಟಿಪ್ಪು ಸುಲ್ತಾನನು ಬರೆದ ಪತ್ರಗಳು ಮತ್ತು ಮಠದ ಶ್ರೇಯೋಭಿವೃದ್ಧಿಗೆ ಅವನ್ನು ನೀಡಿರುವ ದಾನ, ದತ್ತಿ ಹಾಗೂ ಉಡುಗೊರೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಗಮನಿಸುವಾಗ ಟಿಪ್ಪುವಿನ ಇಸ್ಲಾಮ್ ಧರ್ಮ ಯಾವುದೇ ಕಾರಣಕ್ಕೂ ಹಿಂದೂ ಧರ್ಮದೊಂದಿಗೆ ಘರ್ಷಣೆಗೆ ಅನುವು ಮಾಡಿ ಕೊಟ್ಟಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಬ್ರಿಟಿಷರ ವಿರುದ್ಧದ ಟಿಪ್ಪುವಿನ ಹೋರಾಟದಲ್ಲಿ ಧರ್ಮದ ಬಳಕೆ ಆಗಿರುವುದು ನೂರಕ್ಕೆ ನೂರು ಸತ್ಯ. ಆದರೆ ಅಂತಹ ಕ್ರಮಗಳಿಂದ ಟಿಪ್ಪು ಸುಲ್ತಾನನು ಅವನ ಸಾಮ್ರಾಜ್ಯದ ಯಾ ಆಡಳಿತದ ಅಧೀನಕ್ಕೆ ಒಳಪಡುವ ಹಿಂದೂ ಪ್ರಜೆಗಳ ಮನಸ್ಸಿಗೆ ನೋವುಂಟು ಮಾಡುವ ಅಥವಾ ಅವರ ಧರ್ಮಕ್ಕೆ ಹಾಗೂ ದೇವಾಲಯಗಳಿಗೆ ತೊಂದರೆ ನೀಡುವ ಇರಾದೆ ಹೊಂದಿರಲಿಲ್ಲ. ಎಲ್ಲಾ ಧರ್ಮಗಳ ನಡುವೆ ಸಮಾನತೆಯನ್ನು ಕಾಪಾಡಿಕೊಳ್ಳುವುದು ಅವನ ಉದ್ದೇಶವಾಗಿತ್ತು, ಸರ್ವಧರ್ಮ ಸಹಿಷ್ಣುತೆಗೆ ಅವನು ತಳೆದಿರುವ ಈ ದೃಷ್ಟಿಕೋನ ಸಾಮ್ರಾಜ್ಯದ ಉದ್ದಗಲಕ್ಕೂ ಹಿಂದೂ-ಮುಸ್ಲಿಂ ಪ್ರಜೆಗಳ ನಡುವಿನ ಸಾಮರಸ್ಯ ಮತ್ತು ಸ್ನೇಹದ ವೃದ್ಧಿಗೆ ಒಂದು ಸಂಸ್ಕೃತಿಯಾಗಿ, ರಾಜಕೀಯ ಶಕ್ತಿಯಾಗಿ ಹುಟ್ಟಿಕೊಳ್ಳುತ್ತದೆ.

1792ರಲ್ಲಿ ಬ್ರಿಟಿಷರು ಸೈನ್ಯವನ್ನೊಡಗೂಡಿ ಮೈಸೂರು ಸಾಮ್ರಾಜ್ಯದ ಮಧ್ಯೆ ಪ್ರವೇಶ ಮಾಡುವ ಘಟನೆಯನ್ನು ದಾಖಲಿಸಿದ ಸಮಕಾಲೀನ ಚರಿತ್ರೆಕಾರ ಮೇಜರ್ ದೀರೋಮ್ ಮೈಸೂರು ಸಂಸ್ಥಾನದ ಸಂಪತ್ತು ಮತ್ತು ಸಮೃದ್ಧಿಯ ಬಗ್ಗೆ ಹೀಗೆ ಅಭಿಪ್ರಾಯ ಪಡುತ್ತಾನೆ:
ಹೈದರ್ ಅಲಿಯು ಸ್ಥಾಪಿಸಿದ ಪದ್ಧತಿಯ ಚಾಲನೆಯಿಂದ ಇದ್ದಿರಬಹುದು ಅಥವಾ ಸಾಮ್ಯಾಜ್ಯವು ಹಲವು ವರ್ಷಗಳಿಂದ ಯಾವುದೇ ಪರಕೀಯರ ಆಕ್ರಮಣವಾಗದ ಕಾರಣ ಇದ್ದಿರಬಹುದು ಅಥವಾ ಇನ್ನಾವುದೇ ಕಾರಣಗಳಿಂದಿರಬಹುದು. ಟಿಪ್ಪು ಸಾಮ್ರಾಜ್ಯದ ಎಲ್ಲೆಡೆ ಜನರು ಅನ್ಯೋನ್ಯತೆಯಿಂದ ವಾಸಿಸುತ್ತಿದ್ದರು. ಆ ಮಣ್ಣಿನ ಫಲವತ್ತತೆಯನ್ನು ಅರಿತು ಅವರು ಸಕ್ರಿಯವಾಗಿ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ರಣರಂಗದಲ್ಲಿ ಟಿಪ್ಪುವಿನ ಸೈನಿಕರು ಶಿಸ್ತು ಮತ್ತು ನಿಷ್ಠೆಯಿಂದ ಹೋರಾಡುವ ಮನೋಭಾವನೆ ಪ್ರಶಂಸನೀಯ ಮತ್ತು ಅದು ಅವರು ತಮ್ಮ ಪ್ರಭುವಿಗೆ ತೋರಿಸುವ ಗೌರವ ಮತ್ತು ಸ್ವಾಮಿನಿಷ್ಠೆಯನ್ನು ತೋರಿಸುತ್ತದೆ. ಅವನ ಸರಕಾರ ಕೆಲವೊಮ್ಮೆ ಶಿಸ್ತುಬದ್ಧವಾಗಿದ್ದಿರಬಹುದು ಮತ್ತು ಧೋರಣೆಗಳು ಕೆಲವೊಮ್ಮೆ ಸ್ಟೇಚ್ಛಾನುಸಾರದಿಂದ ಕೂಡಿರಬಹುದು, ಅಷ್ಟಾಗಿಯೂ ಟಿಪ್ಪು ಪ್ರಜೆಗಳ ಹಿತರಕ್ಷಣೆ ಮತ್ತು ಅವರ ಶ್ರೇಯೋಭಿವೃದ್ಧಿ ಆಡಳಿತದ ಮುಖ್ಯ ಅಂಶವೆಂದು ಪರಿಗಣಿಸಿದ್ದನು. ಅದನ್ನು ಪ್ರಾಮಾಣಿಕವಾಗಿ ಪಾಲಿಸುತ್ತಿದ್ದನು. ಏಕೆಂದರೆ, ಅವನು ಕಟ್ಟಬೇಕಾದ ಸಾಮ್ರಾಜ್ಯ ಶ್ರೀಮಂತ ಹಾಗೂ ಸಮೃದ್ಧವಾಗಿರಬೇಕಾದರೆ ಪ್ರಜೆಗಳ ಸಹಕಾರ, ಪ್ರೋತ್ಸಾಹ ಪಡೆಯುವುದು ಮುಖ್ಯವಾಗುತ್ತದೆ ಎಂಬುದು ಅವನಿಗೆ ಅರಿವಿತ್ತು. ಟಿಪ್ಪು ಪ್ರಜೆಗಳ ನಡುವೆ ಕೋಮು ಸಾಮರಸ್ಯ ಬೆಳೆಸಿ, ಅವರ ಸಹಕಾರವನ್ನು ಪಡೆದು ಜನರ ಏಳಿಗೆ, ಸಂಪತ್ತಿನ ಅಭಿವೃದ್ಧಿ ಮತ್ತು ಸಾಮ್ರಾಜ್ಯದ ವೃದ್ಧಿಗೆ ಹೆಚ್ಚು ಗಮನಕೊಟ್ಟಿದ್ದನು. ಹಿಂದೂ-ಮುಸ್ಲಿಮ್ ಸಾಮರಸ್ಯಕ್ಕೆ ಟಿಪ್ಪುವಿನ ಕೊಡುಗೆಯನ್ನು ತಿಳಿದುಕೊಳ್ಳಲು ಅವನು ಶೃಂಗೇರಿ ಮಠ, ಅಲ್ಲಿಯ ಸ್ವಾಮೀಜಿಯೊಂದಿಗೆ ಬೆಳೆಸಿಕೊಂಡಿರುವ ಸಂಬಂಧ, ಜೊತೆಗೆ ಅಲ್ಲಿನ ಧಾರ್ಮಿಕ ಕೇಂದ್ರದ ಬೆಳವಣಿಗೆಗೆ ಟಿಪ್ಪು ನೀಡಿರುವ ದಾನ ಧರ್ಮಗಳಿಂದ ತಿಳಿದು ಬರುತ್ತದೆ. ಅವನ ಪತ್ರಗಳನ್ನು ಒಂದೊಂದಾಗಿ ಇಲ್ಲಿ ಉಲ್ಲೇಖಿಸಲಾಗಿದೆ.

ಪತ್ರಗಳ ಸೂಕ್ಷ್ಮತೆಗಳು:
ಪತ್ರದ ಆರಂಭದಲ್ಲಿ ರಾಜಮುದ್ರೆ ಇರುತ್ತಿತ್ತು. ಪತ್ರ ಸಾಮಾನ್ಯವಾಗಿ ಕೆಂಪು ಬಣ್ಣದ ಬಟ್ಟೆಯಲ್ಲಿ ಬರೆಯಲಾಗುತ್ತಿತ್ತು. ಪತ್ರ ವ್ಯವಹಾರಗಳು ಸುಮಾರು 1791ರಿಂದ 1798ರ ನಡುವೆ ಆಗಿರುತ್ತದೆ. ದಿನಾಂಕಗಳನ್ನು ಮೌಲೂದಿ ವರ್ಷದಿಂದ ಸೂಚಿಸಲಾಗಿದ್ದು, ಅದು ಪ್ರವಾದಿ ಮುಹಮ್ಮದರ ಹುಟ್ಟಿದ ವರ್ಷವನ್ನು ಸೂಚಿಸುತ್ತದೆ. ಇಸ್ಲಾಮ್ ವರ್ಷ ಮತ್ತು ತಿಂಗಳು ಹಿಂದೂ ಕಾಲಮಾನಕ್ಕೆ ಬಹಳ ಹತ್ತಿರವಾಗಿರುತ್ತದೆ. ತಿಥಿ/ಲೂನಾರ್ ದಿನ. ಆದರೆ ಸ್ವಾಮೀಜಿ ಹೆಸರಲ್ಲಿ ಬರೆದಿರುವ ಎಲ್ಲಾ ಪತ್ರಗಳ ಆರಂಭವು ಹೀಗೆ ಇರುತ್ತದೆ. ಮತ್ಸರಮಹಂಸಾದಿ ಯಥೋಕ್ತ ಬಿರುದಾಂಕಿತರಾದಂತ ಶ್ರೀ ಸಚ್ಚಿದಾನಂದ ಭಾರತೀ ಮಹಾಸ್ವಾಮಿಗಳವರಿಗೆ ಟಿಪ್ಪು ಸುಲ್ತಾನ ಬಾದಶಾಹರವರ ಸಲಾಂ ಆದಾಗಿ... ಪತ್ರದಲ್ಲಿ ಆತನ ಹೆಸರು ಎಲ್ಲಿ ಉಲ್ಲೇಖವಾಗುತ್ತದೋ ಅಲ್ಲಿ ಆತನ ರಾಜ್ಯದ ಹೆಸರು ಮತ್ತು ಪ್ರಜೆಗಳನ್ನು ಉಲ್ಲೇಖಿಸಲಾಗಿದೆ. ಅಂದರೆ ವ್ಯಕ್ತಿಯ ಹೆಸರಿಗಿಂತಲೂ ತಾನಾಳುವ ರಾಜ್ಯ ಮತ್ತು ಜನರ ನಿಜವಾದ ನಾಡಿನ ಸಂಪತ್ತೆಂದು ಅವನು ಅರಿತಿದ್ದು ಅದನ್ನು ಜೀವನದಲ್ಲಿ ಪಾಲಿಸಿರುವುದು ಗಮನಾರ್ಹ.

ಪತ್ರದಲ್ಲಿ ಸಾಮಾನ್ಯವಾಗಿ ಕಾಣುವ ವಿಷಯಗಳು:
ಶೃಂಗೇರಿ ಮಠದ ಸ್ವಾಮೀಜಿಯವರಿಗೆ ಬರೆದಿರುವ ಹೆಚ್ಚಿನ ಪತ್ರಗಳಲ್ಲಿ ಟಿಪ್ಪು ತನ್ನ ಸಾಮ್ರಾಜ್ಯಕ್ಕೆ ಮತ್ತು ಪ್ರಭುತ್ವಕ್ಕೆ ಹೊರಗಿನಿಂದ ಬರುವ ಬೆದರಿಕೆ ಸ್ವರೂಪವನ್ನು ವಿವರಿಸಿರುತ್ತಾನೆ. ಇದನ್ನು ಗಮನಿಸುವಾಗ ಮೈಸೂರು ಸಂಸ್ಥಾನಕ್ಕೆ ಮೂರು ಶಕ್ತಿಗಳ ಅಥವಾ ಗುಂಪುಗಳಿಂದ ಸಮಸ್ಯೆಗಳು ತಲೆದೋರಿತ್ತು. ಮರಾಠರು, ಹೈದರಾಬಾದ್ ನಿಜಾಮ ಮತ್ತು ಬ್ರಿಟಿಷರು. ಈ ಮೂವರು ಅವನ ಬದ್ಧ ವೈರಿಗಳೆಂದೇ ಪತ್ರಗಳಲ್ಲಿ ಚಿತ್ರಿಸಿರುತ್ತಾನೆ. ಎರಡನೆಯದಾಗಿ, ನಿರಂತರವಾಗಿ ಪತ್ರಗಳಲ್ಲಿ ಅವನು ಶೃಂಗೇರಿ ಮಠದ ಮೇಲೆ ಮರಾಠರು ಮಾಡಿರುವ ದಾಳಿ ಮತ್ತು ಲೂಟಿಯ ಬಗ್ಗೆ ಕಳವಳ ಹಾಗೂ ಅನುಕಂಪವನ್ನು ವ್ಯಕ್ತಪಡಿಸುತ್ತಾನೆ. ಮೂರನೆಯದಾಗಿ, ಮಠದ ಸ್ವಾಮೀಜಿ ವೈಯಕ್ತಿಕ ವಿಚಾರಗಳು, ಮಠದಲ್ಲಿ ನಡೆಯುವ ಅಂತರಿಕ/ಧಾರ್ಮಿಕ ಚಟುವಟಿಕೆಗಳು, ಅವರ ಶ್ರೇಯೋಭಿವೃದ್ಧಿ ಮತ್ತು ಕೆಲವೊಮ್ಮೆ ನಾಗರಿಕ ಸಮಸ್ಯೆಗಳ ಕುರಿತು ಸ್ವಾಮೀಜಿಯ ಸಲಹೆ ಸೂಚನೆಗಳನ್ನು ಅಪೇಕ್ಷಿಸಿ ವಿನಂತಿಸಿಕೊಳ್ಳುವುದನ್ನು ಪತ್ರಗಳಲ್ಲಿ ಸಾಮಾನ್ಯವಾಗಿ ಕಾಣಬಹುದು. ಈ ವಿಷಯಗಳಲ್ಲದೆ, ಮೇಲೆ ಉಲ್ಲೇಖಿಸಿರುವ ಮೂರು ಬಗೆಯ ವೈರಿಗಳ ದಮನಕ್ಕೆ ಮಠದಲ್ಲಿ ಧಾರ್ಮಿಕ ಕ್ರಿಯೆಗಳಾದ ಶತಚಂಡಿ-ಜಪ ಮತ್ತು ಸಹಸ್ರಚಂಡಿ-ಜಪಗಳನ್ನು ನೆರವೇರಿಸಲು ಸ್ವಾಮೀಜಿಯವರಲ್ಲಿ ಗೌರವ ಪೂರ್ವಕವಾಗಿ ವಿನಂತಿಸಿಕೊಳ್ಳುತ್ತಾನೆ. ಆ ಮೂರು ವೈರಿಗಳು-ಬ್ರಿಟಿಷರು, ಮರಾಠರು ಮತ್ತು ನಿಜಾಮರು ಪದೇ ಪದೇ ಟಿಪ್ಪು ರಾಜ್ಯಕ್ಕೆ ದಂಡೆತ್ತಿ ಬಂದು ಉಪಟಳ ನೀಡುತ್ತಿದ್ದು ಆ ತ್ರೀ-ವರ್ಗದವರು ನಾಶವಾಗಬೇಕು ಎಂದು ಹೇಳಿಕೊಳ್ಳುತ್ತಿದ್ದನು. ಈ ಸಮಾಚಾರಗಳನ್ನು ಗೋಪಾಲದಾಸ ಎಂಬ ಮಧ್ಯವರ್ತಿ ಮೂಲಕ ಸ್ವಾಮೀಜಿಗೆ ತಲುಪಿಸುತ್ತಿದ್ದನು. ಜೊತೆಗೆ, ಈ ಸಕಲ ಧಾರ್ಮಿಕ ಆಚರಣೆಗೆ ತಗಲುವ ಎಲ್ಲಾ ಖರ್ಚು ವೆಚ್ಚವನ್ನು ಸ್ವತಃ ಟಿಪ್ಪುವೇ ಭರಿಸುವೆನೆಂದೂ ಆಶ್ವಾಸನೆ ನೀಡಿರುವುದನ್ನು ಗಮನಿಸಬಹುದು. ಈ ಪತ್ರಗಳನ್ನು ಹುಜುರ್ ಮುನ್ಸಿ ನರಸಯ್ಯ ಬರೆದಿರುವುದು ಎಂದು ಉಲ್ಲೇಖಿಸಲಾಗಿದೆ.

ದೇಶದ ಅಭಿವೃದ್ಧಿಗೆ, ಸಂಪತ್ತು ವೃದ್ಧಿಗೆ ಮತ್ತು ವೈರಿಗಳ ನಾಶಕ್ಕೆ ಇಂತಹ ಯಜ್ಞಯಾಗಗಳನ್ನು ಮಾಡಲು ಟಿಪ್ಪು ವಿನಂತಿಸಿಕೊಂಡಿದ್ದನು. ಈ ವಿಷಯ 1791ರಲ್ಲಿ ಟಿಪ್ಪು ಕಳುಹಿಸಿದ ಎರಡು ಪತ್ರಗಳಿಂದ ತಿಳಿದು ಬರುತ್ತದೆ. ಆ ನಂತರದ ಪತ್ರಗಳಲ್ಲಿ ಮಠದ ಸ್ವಾಮೀಜಿ ತಾನು ಕೇಳಿಕೊಂಡ ಧಾರ್ಮಿಕ ಕ್ರಿಯೆಗಳನ್ನು ನೆರವೇರಿಸಲು ಒಪ್ಪಿಗೆ ಸೂಚಿಸುವುದಕ್ಕೆ ಆದ ಸಂತೋಷವನ್ನು ವಿವರಿಸುತ್ತಾನೆ. ಇವೆಲ್ಲವೂ ಸುಸೂತ್ರವಾಗಿ ನೆರವೇರಲು ಬೇಕಾದ ಏರ್ಪಾಟುಗಳನ್ನು ಮಾಡಲು ಅಸಫ್ ಎಂಬ ಸ್ಥಳೀಯ ಅಧಿಕಾರಿಗೆ ಸೂಚಿಸಿ ಒಂದು ಆಜ್ಞೆಯನ್ನು ಹೊರಡಿಸಿದ್ದನು. ಈ ಆಜ್ಞೆಯಲ್ಲಿ ಧಾರ್ಮಿಕ ಕ್ರಿಯೆಗಳಿಗೆ ಬೇಕಾದ ಎಲ್ಲಾ ಸವಲತ್ತು ಮತ್ತು ಖರ್ಚನ್ನು ಭರಿಸಲು ಸರಕಾರದ ವತಿಯಿಂದ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ಸ್ವಾಮೀಜಿಗೆ ಟಿಪ್ಪು ಬರೆದಿದ್ದನು. ಇಡೀ ಕಾರ್ಯದ ಉಸ್ತುವಾರಿಯನ್ನು ಮತ್ತು ಆ ಸಮಯದಲ್ಲಿ ಯಾವುದೇ ಅಡ್ಡಿ ಆತಂಕಗಳು ಬರದ ರೀತಿಯಲ್ಲಿ ನೋಡಿಕೊಳ್ಳಲು ಕೊಪ್ಪ ಹೋಬಳಿ ಅಮೀಲ್ದಾರ್ ತ್ರಿಯಂಬಿಕ ರಾವ್ ಮತ್ತು ನಗರ ಪ್ರಾಂತದ ಮುಸ್ಸದ್ದಿ ಅಸಫ್ ಕಕ್ಕೇರಿ ಅವರಿಗೆ ವಿಷಯವನ್ನು ತಿಳಿಸಿ ಶೃಂಗೇರಿಗೆ ಹೋಗಲು ಸೂಚಿಸಿದ್ದೇನೆ ಎಂದೂ ಸ್ವಾಮೀಜಿಗೆ ಬರೆದ ಪತ್ರದಲ್ಲಿ ತಿಳಿಸಿದ್ದನು. ಅಲ್ಲದೆ ಈ ಧಾರ್ಮಿಕ ಕ್ರಿಯೆಗಳನ್ನು ಮಠದಲ್ಲಿ ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿರುವ ಸಂಪ್ರದಾಯದಂತೆಯೇ ಮಾಡಬೇಕು, ಆಗಮಿಸುವ ಎಲ್ಲಾ ಬ್ರಾಹ್ಮಣರಿಗೂ ಸಕಲ ಸೌಕರ್ಯಗಳನ್ನು ಒದಗಿಸಿ ಉಡುಗೊರೆ ನೀಡಬೇಕು ಮತ್ತು 1,000 ಬ್ರಾಹ್ಮಣರಿಗೆ ಪ್ರತಿದಿನ ಭೋಜನ ವ್ಯವಸ್ಥೆಯನ್ನು ಮಾಡಲು ಇನ್ನೊಂದು ಪತ್ರದಲ್ಲಿ ಸ್ವಾಮೀಜಿಯವರನ್ನು ವಿನಂತಿಸಿ ಕೊಂಡಿದ್ದನು. ಇದಲ್ಲದೆ, ಮೈಸೂರಿನಿಂದ ತನ್ನ ಪ್ರತಿನಿಧಿಯಾಗಿ ಆಗಮಿಸುವ ಗೋಪಾಲ ಜೋಯ್ಸನನ್ನು ಯಜ್ಞಯಾಗ ಮುಗಿಯುವವರೆಗೆ ತಮ್ಮ ಸಹಾಯಕ್ಕಾಗಿ ಶೃಂಗೇರಿಯಲ್ಲಿಯೇ ಉಳಿಸಿಕೊಳ್ಳಲು ವಿನಂತಿಸಿಕೊಂಡಿದ್ದನು.

ಮೇಲಿನ ಪತ್ರಗಳ ಸಾರಾಂಶವನ್ನು ಗಮನಿಸುವಾಗ ಟಿಪ್ಪುವಿನ ಬಗ್ಗೆ ವಿನ್ಸೆಂಟ್ ಸ್ಮಿತ್ ಅವರು ಮಾಡಿರುವ ಟೀಕೆ ಸಮರ್ಥನೀಯವಾದುದಲ್ಲ ಎಂದು ನೇರವಾಗಿ ಹೇಳಬಹುದು. ಏಕೆಂದರೆ, ಒಂದನೆಯದಾಗಿ, ರಾಜನು ಸಾಮ್ರಾಜ್ಯದೊಳಗೆ ಮತ್ತು ಹೊರಗೆ ಕೈಗೊಳ್ಳುವ ತನ್ನ ಎಲ್ಲಾ ಸೈನಿಕ ಚಟುವಟಿಕೆಗಳಲ್ಲಿ ಜಯವಾಗಲೆಂದು ದೇವರಿಗೆ ನೈವೇಧ್ಯ, ಪೂಜೆ ಪುರಸ್ಕಾರ ಮತ್ತು ಯಾಗ, ಜಪ ಮಾಡುವುದು ಭಾರತದಲ್ಲಿ ಪುರಾತನ ಕಾಲದಿಂದಲೂ ಬೆಳೆದು ಬಂದಿರುವ ಒಂದು ಸಂಸ್ಕೃತಿ, ಸಂಪ್ರದಾಯ ಮತ್ತು ಪದ್ಧತಿ. ಇಂತಹ ಚಟುವಟಿಕೆಗಳನ್ನು ಇಪ್ಪತ್ತನೇ ಶತಮಾನದಲ್ಲೂ ನೋಡಬಹುದು. ಉದಾಹರಣೆಗೆ 1914-18ರ ನಡುವೆ ಮೊದಲ ಜಾಗತಿಕ ಯುದ್ಧದ ಸಮಯದಲ್ಲಿ ಭಾರತದಾದ್ಯಂತ ದೇವಾಲಯಗಳಲ್ಲಿ, ಮಸೀದಿಗಳಲ್ಲಿ ಮತ್ತು ಚರ್ಚ್‌ಗಳಲ್ಲಿ ಬ್ರಿಟಿಷ್ ಯುದ್ಧ ಪಡೆಗಳಿಗೆ ಜಯ ಸಿಗಲಿ ಎಂದು ಸಾಮೂಹಿಕವಾಗಿ ಪ್ರಾರ್ಥಿಸಲಾಗಿದೆ. ಎರಡನೇ ಜಾಗತಿಕ ಯುದ್ಧದ ಸಮಯದಲ್ಲಿಯೂ ಅಲೈಡ್ ಗುಂಪಿಗೆ ಜಯವಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಗಿತ್ತು. ಇಂತಹ ಸಂದರ್ಭದಲ್ಲಿ ಮಾಡಿರುವ ಪ್ರಾರ್ಥನೆ ಮತ್ತು ಧಾರ್ಮಿಕ ಕ್ರಿಯೆಗಳ ಮೂಲ ಉದ್ದೇಶ ವೈರಿಗಳ ಗುಂಪು ನಿರ್ನಾಮವಾಗಲೆಂಬ ಹಾರೈಕೆ. ಆದ್ದರಿಂದ ವಿನ್ಸೆಂಟ್ ಸ್ಮಿತ್ ಹೇಳಿಕೆ ಅಪ್ರಸ್ತುತ ಮತ್ತು ಅದನ್ನು ಅಂದರೆ ಸ್ಮಿತ್‌ನ ಮಾದರಿಯನ್ನು ಆಧಾರವಾಗಿ ಇತಿಹಾಸ ರಚನೆ ಮಾಡುವ ಇತಿಹಾಸಕಾರರ ಬರವಣಿಗೆ ಅಪೂರ್ಣವಾದುದು. ಇದನ್ನು ಸಕಾರಾತ್ಮಕವಾಗಿ ಅಲೋಚಿಸಿದರೆ ಟಿಪ್ಪು ತಪ್ಪುದಾರಿ ಹಿಡಿದವನೆಂದು ಸಮರ್ಥಿಸುವುದು ಅಸಾಧ್ಯ. ಏಕೆಂದರೆ ಶೃಂಗೇರಿ ಗುರುಗಳನ್ನು ಪ್ರಾರ್ಥನೆ ಮತ್ತು ಇನ್ನಿತರ ಪೂಜೆ ಸಲ್ಲಿಸಲು ವಿನಂತಿಸಿಕೊಂಡಿರುವ ನಿರ್ಧಾರಗಳಲ್ಲಿ ಟಿಪ್ಪುವಿಗೆ ಒಂದು ನಿರ್ದಿಷ್ಟ ಗುರಿ ಇತ್ತು. ಅದೇನೆಂದರೆ ತನ್ನ ಸಂಸ್ಥಾನಕ್ಕೆ ಬೆದರಿಕೆಯುಂಟು ಮಾಡುವ ಮೂರು ವೈರಿಗಳನ್ನು ಸಂಪೂರ್ಣ ನಾಶಮಾಡುವಂತದ್ದು, ಅವರಲ್ಲಿ ಮುಖ್ಯವಾಗಿ ಬ್ರಿಟಿಷರ ಪ್ರಭುತ್ವವನ್ನು ಸಂಪೂರ್ಣ ದಮನಿಸುವುದು. ಇದು ಟಿಪ್ಪು-ಸ್ವಾಮೀಜಿ ನಡುವಿನ ಪತ್ರ ವ್ಯವಹಾರಗಳಲ್ಲಿ ಸ್ಪಷ್ಟವಾಗಿದೆ.

ಎರಡನೆಯದಾಗಿ, ಪತ್ರಗಳನ್ನು ಗಮನಿಸುವಾಗ ಯಾವುದೇ ಸಂದರ್ಭದಲ್ಲೂ ಅವನು ತನ್ನ ಸ್ವಂತ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳಲು ಸ್ವಾಮೀಜಿಯನ್ನು ವಿನಂತಿಸಿ ಮಠದಲ್ಲಿ ಪ್ರಾರ್ಥನೆ ಪೂಜೆ ಪುರಸ್ಕಾರಗಳನ್ನು ಮಾಡಬೇಕೆಂದು ಕೇಳಿಕೊಂಡಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಬದಲಾಗಿ ಪತ್ರಗಳ ಧ್ವನಿ ಹೇಗಿತ್ತು ಅಂದರೆ ಆ ಮೂರು ವೈರಿಗಳು (ಮುಖ್ಯವಾಗಿ ಬ್ರಿಟಿಷರು) ಇಡೀ ದೇಶವನ್ನು ದೋಚುತ್ತಿದ್ದಾರೆ. ಈ ದೇಶದ ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂಬುದು 1791ರ ಒಂದು ಪತ್ರದಲ್ಲಿ ಇಂಥ ಒಂದು ಕಾಳಜಿ ಟಿಪುವಿಗಿದ್ದದ್ದು ಸ್ಪಷ್ಟವಾಗಿ ಕಾಣುತ್ತದೆ. ಈ ವಿಷಯವಾಗಿ ಸ್ವಾಮೀಜಿಯನ್ನು ಕೇಳಿಕೊಂಡು ದೇವರಿಗೆ ಪ್ರಾರ್ಥನೆ ಸಲ್ಲಿಸಿದರೆ ದೌರ್ಜನ್ಯ ಎಸಗುವವರು ನಾಶವಾಗುತ್ತಾರೆ ಮತ್ತು ಹಾಗಾದಾಗ ಈ ದೇಶ ಸಮೃದ್ಧಿ ಹೊಂದುತ್ತದೆ ಎಂದು ಬರೆದಿದ್ದ ಪತ್ರ ಹೀಗಿದೆ.

"ನಾವು ನಮ್ಮ ದೇಶವನ್ನು ದಾಳಿ ಮಾಡುವ ಮತ್ತು ಪ್ರಜೆಗಳ ಮೇಲೆ ದೌರ್ಜನ್ಯ ಎಸಗುವ ವೈರಿಗಳನ್ನು ಶಿಕ್ಷಿಸುತ್ತೇವೆ. ನೀವು ಪವಿತ್ರರು ಮತ್ತು ತಪಸ್ವಿಗಳು ನಿಮ್ಮ ಕಾರ್ಯ ಸಾವಿರಾರು ಪ್ರಜೆಗಳ ಯೋಗ ಕ್ಷೇಮಕ್ಕಾಗಿ ಮಠದಲ್ಲಿ ಬ್ರಾಹ್ಮಣರನ್ನೊಳಗೊಂಡು ದೇವರಲ್ಲಿ ಪ್ರಾರ್ಥಿಸುವುದು. ಆದರಿಂದ ನಮ್ಮ ವೈರಿಗಳಿಗೆ ಸೋಲು ಸಿಗುತ್ತದೆ ಮತ್ತು ಈ ದೇಶದ ಎಲ್ಲಾ ಜನರು ಕ್ಷೇಮದಿಂದ ಬದುಕಲು ಶ್ರೀ ದೇವರಲ್ಲಿ ಪ್ರಾರ್ಥಿಸಿ ನಿಮ್ಮ ಆಶೀರ್ವಾದವನ್ನು ನಮಗೆ ಕಳುಹಿಸಿ."

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

ಇಂದು ಹೆಚ್ಚು ಓದಿದ್ದು


Back to Top