ಬಡವಾದ ವಿದ್ಯಾರ್ಥಿಗಳು
ಮಾನ್ಯರೆ,
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಾನ್ಯತೆ ರದ್ದು ಮಾಡಿರುವುದರಿಂದ ವಿದ್ಯಾರ್ಥಿಗಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಯುಜಿಸಿ ಮತ್ತು ಕೆಎಸ್ಒಯು ನಡುವಿನ ಗುದ್ದಾಟದಲ್ಲಿ ವಿದ್ಯಾರ್ಥಿಗಳು ಬಡವಾಗಿದ್ದಾರೆ.
ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಅನೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ನಿರೀಕ್ಷೆಯಲ್ಲಿದ್ದಾರೆ. ಕೆಎಸ್ಒಯು ಪ್ರವೇಶಾವಕಾಶ ನೀಡಿದಲ್ಲಿ ಅನೇಕ ವಿದ್ಯಾರ್ಥಿಗಳ ಶಿಕ್ಷಣದ ಬದುಕಿಗೆ ದಾರಿ ದೀಪವಾಗುತ್ತದೆ. ಕೆಎಸ್ಒಯು ಆರಂಭದ ಕುರಿತು ಆಡಳಿತ ವರ್ಗದವರು ಯುಜಿಸಿಗೆ ಪತ್ರ ಮೂಲಕ ಮಾಹಿತಿಗಳನ್ನು ನೀಡಿದ್ದರೂ, ಈ ಕುರಿತಂತೆ ಯಾವುದೇ ತೆರನಾದ ಪ್ರಗತಿಯು ಕಂಡು ಬರುತ್ತಿಲ್ಲ. ಅಂತಿಮವಾಗಿ ಯುಜಿಸಿ ಮತ್ತು ಕೆಎಸ್ಒಯು ನಡುವಿನ ಗುದ್ದಾಟದಲ್ಲಿ ಕೊನೆಗೂ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ರಾಜ್ಯದಲ್ಲಿ ಉನ್ನತ ಶಿಕ್ಷಣದಿಂದ ಸಾಕಷ್ಟು ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದು, ಮೊದಲೇ ಈ ಕಾರ್ಯ ತುಂಬಾ ವಿಳಂಬವಾಗಿದೆ. ಇನ್ನು ಮೇಲಾದರೂ ವಿದ್ಯಾರ್ಥಿಗಳ ಹಿತರಕ್ಷಣೆಯನ್ನು ಮುಂದಿಟ್ಟುಕೊಂಡು ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ಶೀಘ್ರವೇ ಕ್ರಮ ಕೈಗೊಂಡು ವಿದ್ಯಾರ್ಥಿಗಳ ಓದಿಗೆ ಸೂಕ್ತ ವಾತಾವರಣವನ್ನು ಕಲ್ಪಿಸಿಕೊಡುವಂತಾಗಲಿ.