ಓ ಮೆಣಸೇ ....
-

ಕೇಸರಿ ಬಣ್ಣಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅದು ಬಿಜೆಪಿಯವರ ಗುತ್ತಿಗೆ ಅಲ್ಲ - ವೀರಪ್ಪ ಮೊಯ್ಲಿ, ಮಾಜಿ ಸಿಎಂ
ಅವರಿಗೆ ನಿಮ್ಮ ಪಕ್ಷದ ತ್ರಿವರ್ಣ ಮಾತ್ರವಲ್ಲ, ದೇಶದ ತ್ರಿವರ್ಣ ಕಂಡರೂ ಆಗುವುದಿಲ್ಲ.
ಕೆಲವರಿಗೆ ಗೋಪುರದಂತೆ ಇರುವುದೆಲ್ಲವೂ ಮುಸ್ಲಿಮರದ್ದು ಎನ್ನುವಂತೆ ತೋರುತ್ತದೆ - ತನ್ವೀರ್ ಶೇಟ್, ಶಾಸಕ
ಮಲಮೂತ್ರಗಳಲ್ಲಿ ಔಷಧಿ ಕಾಣುವವರಿಗೆ ಎಲ್ಲಿ ಏನು ಕಂಡರೂ ಅಚ್ಚರಿ ಇಲ್ಲ.
ಕೇಸರಿ ಎಂದರೆ ಕೆಲವರ ಕಣ್ಣು ಯಾಕೆ ಕೆಂಪಗಾಗುತ್ತದೆ ಅರ್ಥವಾಗುತ್ತಿಲ್ಲ - ಬಸವರಾಜ ಬೊಮ್ಮಾಯಿ, ಸಿಎಂ
ಅಷ್ಟೊಂದು ಮುದ್ದಾದ ಬಣ್ಣ ಅಷ್ಟು ವ್ಯಾಪಕವಾಗಿ ದುರುಪಯೋಗವಾಗುವುದನ್ನು ಕಂಡರೆ ಸ್ವಸ್ಥರಾಗಿರುವ ಎಲ್ಲರ ಕಣ್ಣು ಕೆಂಪಾಗುವುದು ಸಹಜ.
ಮುಂದಿನ ಮಾರ್ಚ್ನೊಳಗೆ ಎಲ್ಲ ಅರ್ಹರಿಗೂ ಆರೋಗ್ಯ ಕಾರ್ಡ್ ವಿತರಿಸುವ ಗುರಿ ಹೊಂದಲಾಗಿದೆ - ಡಾ.ಸುಧಾಕರ್, ಸಚಿವ
ಎಲ್ಲ ಸತ್ಕಾರ್ಯಗಳನ್ನು ಚುನಾವಣೆಯ ಹತ್ತಿರದ ಸಮಯಕ್ಕೆ ಮುಂದೂಡುತ್ತಲಿದ್ದರೆ, ಆ ತನಕ ಏನು ಮಾಡುತ್ತಿರುತ್ತೀರಿ?
ವಿವೇಕ ಶಾಲಾ ಕೊಠಡಿಗಳಿಗೆ ಯಾವ ಬಣ್ಣ ಬಳಿಯ ಬೇಕೆಂಬುದು ಈವರೆಗೂ ನಿರ್ಣಯವಾಗಿಲ್ಲ - ಬಿ.ಸಿ.ನಾಗೇಶ್, ಸಚಿವ
ಬಣ್ಣ ಬಳಿಯುವ ವಿವಾದ ತಪ್ಪಿಸಲು ಎಲ್ಲರಿಗೆ ಕೇಸರಿ ಕನ್ನಡಕ ಕೊಟ್ಟುಬಿಡಿ - ನಿಮ್ಮ ಕನಸಿನಂತೆ ಎಲ್ಲವೂ ಕೇಸರಿಮಯವಾಗಿ ಬಿಡುತ್ತದೆ.
ರಾಜ್ಯದ ಯಾವ ಕ್ಷೇತ್ರದಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸುವವನೇ ನಿಜವಾದ ಲೀಡರ್ - ಸಿದ್ದರಾಮಯ್ಯ, ಮಾಜಿ ಸಿಎಂ
ಸೋಲೆದುರಿಸಲು ಸಿದ್ಧರಾಗಿರುವವರಿಗೆ ಯಾವ ಕ್ಷೇತ್ರವಾದರೇನಂತೆ?
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಒಪ್ಪಂದ ಅಥವಾ ಮೈತ್ರಿ ಮಾಡಿಕೊಳ್ಳುವುದಿಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂ
ನೀವು ಎಲ್ಲ ಹೊಲಸು ಮೈತ್ರಿ, ಒಪ್ಪಂದಗಳನ್ನು ಚುನಾವಣೆಯ ನಂತರವೇ ಮಾಡುತ್ತೀರಿ ಎಂಬುದು ಜನರಿಗಿರುವ ಆತಂಕ.
ತಂತ್ರಜ್ಞಾನ ಕ್ಷೇತ್ರ ಹುಲಿ ಮೇಲಿನ ಸವಾರಿ - ಡಾ.ಅಶ್ವತ್ಥನಾರಾಯಣ, ಸಚಿವ
ದೇಶದ ಮೇಲೆ ಕೋತಿ ಸವಾರಿ ನಡೆಯುತ್ತಿರುವಾಗ ತಂತ್ರಜ್ಞಾನದ ಮೇಲೆ ಯಾರು ಸವಾರಿ ನಡೆಸುತ್ತಿದ್ದರೂ ನಮಗೇನಂತೆ!
ಕಾಂಗ್ರೆಸ್ ಸರಕಾರವಿದ್ದಾಗ ಬೆಂಗಳೂರಿನ ಟೌನ್ಹಾಲ್ ಎದುರು ಗೋಮಾಂಸ ಹುರಿದು ತಿಂದು ಪ್ರತಿಭಟನೆ ನಡೆಸಿದವರು ಈಗ ತಾಕತ್ತಿದ್ದರೆ ಸಾರ್ವಜನಿಕವಾಗಿ ಗೋಮಾಂಸ ತಿನ್ನಲಿ ನೋಡೋಣ - ಶ್ರೀನಿವಾಸ ಪೂಜಾರಿ, ಸಚಿವ
ಬೀಫ್ ಮಾರುವವರೇನು ನಿಮ್ಮನ್ನು ಸೇಲ್ಸ್ ಪ್ರೊಮೋಷನ್ಗಾಗಿ ನೇಮಿಸಿದ್ದಾರೆಯೇ?
ಪ್ರಸಕ್ತ ಪ್ರಚಾರದ ಯುಗದಲ್ಲಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವವರೇ ಶ್ರೇಷ್ಠ ವ್ಯಕ್ತಿಗಳು -ಎಚ್.ವಿಶ್ವನಾಥ್, ಮಾಜಿ ಸಚಿವ
ಅವರು ಯಾವ ಗ್ರಹದಲ್ಲಿ ಅವಿತಿದ್ದಾರೆ ಸಾರ್?
ಟಿಪ್ಪು ಸುಲ್ತಾನನನ್ನು ಕೊಂದವರು ನಿಜವಾದ ಹುಲಿಗಳು - ಸಿ.ಟಿ.ರವಿ, ಶಾಸಕ
ನರ ಹತ್ಯೆಯ ಸಾಹಸವನ್ನು ಕೆಲವೊಮ್ಮೆ ಹುಚ್ಚು ನಾಯಿಗಳೂ ಮಾಡುತ್ತವೆ.
ಡಾ.ಅಂಬೇಡ್ಕರ್ ಸಂವಿಧಾನದ ಮೂಲಕ ನೀಡಿದ ಹಕ್ಕುಗಳನ್ನು ನಾವೀಗ ಅನುಭವಿಸುವ ಕಾಲಘಟ್ಟದಲ್ಲಿದ್ದೇವೆ -ಎಸ್.ಅಂಗಾರ, ಸಚಿವ
ಹೌದು ಸಚಿವರಾದವರಿಗೆ ಹಾಗೆ ಅನಿಸಿದೆ. ಜನತೆಯ ಸರದಿ ಯಾವಾಗ ಬಂದೀತು?
ಅಮೆರಿಕದೊಂದಿಗೆ ಪಾಕಿಸ್ತಾನ ಯಜಮಾನ -ಗುಲಾಮ ರೀತಿಯ ಸಂಬಂಧ ಹೊಂದಿದೆ - ಇಮ್ರಾನ್ ಖಾನ್, ಪಾಕ್ ಮಾಜಿ ಪ್ರಧಾನಿ
ಗುಲಾಮಗಿರಿ ಒಪ್ಪಿಕೊಂಡವರಿಗೆ ಯಜಮಾನ ಯಾರಾದರೇನಂತೆ?
ಮಲ್ಲಿಕಾರ್ಜುನ ಖರ್ಗೆಗೆ ಮರದ ಕತ್ತಿ, ರಟ್ಟಿನ ಗುರಾಣಿ ಕೊಟ್ಟು ಯುದ್ಧಕ್ಕೆ ನಿಲ್ಲಿಸಲಾಗಿದೆ - ಶ್ರೀನಿವಾಸ ಪ್ರಸಾದ್, ಸಂಸದ
ನಿಮಗೆ ನೀಡಿರುವುದೆಲ್ಲಾ ರಟ್ಟಿನದ್ದಲ್ಲವೇ?
ಇಂದು ಬುದ್ಧಿಜೀವಿಗಳಲ್ಲಿ ಅಪ್ರಾಮಾಣಿಕತೆ ಹೆಚ್ಚಾಗುತ್ತಿದೆ - ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಸಾಹಿತಿ
ಬುದ್ಧಿಜೀವಿಗಳು ಜೀವ ಬಿಟ್ಟು ಬುದ್ಧಿವಂತರಾಗುತ್ತಿರುವುದರ ಲಕ್ಷಣ.
ಅಡಿಕೆ ಬೆಳೆ ರೋಗ ಅಧ್ಯಯನಕ್ಕಾಗಿ ಕೇಂದ್ರ ನಿಯೋಜಿತ ಸಮಿತಿ ರಾಜ್ಯಕ್ಕೆ ಆಗಮಿಸಲಿದೆ - ಆರಗ ಜ್ಞಾನೇಂದ್ರ, ಸಚಿವ
ಕೇಂದ್ರಕ್ಕೆ ಅಂಟಿರುವ ಹಲವಾರು ಜನ ವಿರೋಧಿ ರೋಗಗಳ ಅಧ್ಯಯನಕ್ಕೆ ಇಲ್ಲಿಂದ ಕೆಲವರನ್ನು ಕಳಿಸಿ. ಆ ಹೆಸರಲ್ಲಿ ಕೆಲವುಕೋಟಿ ನುಂಗಬಹುದು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆ ಜಾರಿಗೆ ತಂದದ್ದು ತಪ್ಪು - ಸಿ.ಎಂ. ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ಲಾರ್ಡ್ ಕಾರ್ನವಾಲಿಸ್ ಜಯಂತಿಯನ್ನು ಆಚರಣೆಗೆ ತರಬೇಕಿತ್ತೇ?
ಮಾಜಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸಲು ನಾನು ಸಂಚು ರೂಪಿಸಿಲ್ಲ - ಕೆ.ಎಚ್.ಮುನಿಯಪ್ಪ, ಮಾಜಿ ಕೇಂದ್ರ ಸಚಿವ
ಸಂಚು ನಿರ್ಮಿಸುವ ಕೆಲಸವನ್ನೂ ಔಟ್ ಸೋರ್ಸ್ ಮಾಡಿಬಿಟ್ಟಿದ್ದೀರಾ?
ಬಳ್ಳಾರಿ ಜಿಲ್ಲೆ ಬರೀ ಗಣಿಗಾರಿಕೆಗೆ ಮಾತ್ರವಲ್ಲ, ತೋಟಗಾರಿಕೆಗೂ ಹೆಸರುವಾಸಿಯಾಗಬೇಕು - ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ತೋಟದಲ್ಲಿ ಲೂಟಿಗೇನು ಸಿಗುತ್ತೆ ಮೇಡಂ?
ವ್ಯಸನ ಮುಕ್ತ ಸಮಾಜ ನಿರ್ಮಾಣ ಎಲ್ಲರ ಹೊಣೆಯಾಗಿದೆ - ಸುನೀಲ್ ಕುಮಾರ್, ಸಚಿವ
ಅದಕ್ಕಾಗಿ, ಮೊದಲು ಮದ್ಯಮುಕ್ತ ಸಮಾಜ ನಿರ್ಮಿಸುವ ಸರಕಾರ ಬರಲಿ.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಪಕ್ಷೇತರನಾಗಿ ಗೆಲ್ಲದಿದ್ದರೆ ಶಿರಚ್ಛೇದನ ಮಾಡಿಕೊಳ್ಳುವೆ - ಎಲ್.ಆರ್.ಶಿವರಾಮೇಗೌಡ, ಮಾಜಿ ಸಂಸದ
ಅದರಿಂದ ಕ್ಷೇತ್ರಕ್ಕೆ ಏನಾದರೂ ಲಾಭವಾಗಲಿದೆ ಎಂಬುದಕ್ಕೆ ಗ್ಯಾರಂಟಿ ಏನಿದೆ?
ಬಿಜೆಪಿ ಭಾಷೆಯಲ್ಲಿಯೇ ಮಾತನಾಡುತ್ತಿರುವ ಸುಕೇಶ್ ಚಂದ್ರಶೇಖರರನ್ನು ಬಿಜೆಪಿ ತನ್ನ ರಾಷ್ಟ್ರೀಯ ಅಧ್ಯಕ್ಷನನ್ನಾಗಿ ಮಾಡಬೇಕು -ಅರವಿಂದ ಕೇಜ್ರಿವಾಲ್, ದಿಲ್ಲಿ ಸಿಎಂ
ಅವರೇನು ನೋಟಿನಲ್ಲಿ ಪಂಜುರ್ಲಿ ಭೂತದ ಚಿತ್ರ ಬೇಕು ಅಂದಿದ್ದಾರೆಯೇ?
ಒಂದು ಧರ್ಮದ ವಿರುದ್ಧ ಅನಗತ್ಯವಾಗಿ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ಸಂಸದ ಪ್ರತಾಪ ಸಿಂಹರನ್ನು ಸಿಎಂ ಬೊಮ್ಮಾಯಿ ಕರೆಸಿ ಬುದ್ಧಿಹೇಳಬೇಕು - ರಾಮದಾಸ್, ಶಾಸಕ
ಬೊಮ್ಮಾಯಿಯವರನ್ನು ಕರೆಸಿ ಬುದ್ಧಿ ಹೇಳಬಲ್ಲವರು ಯಾರಿದ್ದಾರೆ?
ತಾಂತ್ರಿಕ ಸಮಸ್ಯೆಯಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮೂರು ತಿಂಗಳ ಗೌರವಧನ ಪಾವತಿಯಾಗಿಲ್ಲ - ಹಾಲಪ್ಪ ಆಚಾರ್, ಸಚಿವ
ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕಾದ ತಂತ್ರಜ್ಞರಿಗೆ ಎಷ್ಟು ವರ್ಷಗಳಿಂದ ಸಂಬಳ ಬಾಕಿ ಇದೆ?
ನಾನು ಪ್ರಧಾನಿ ನರೇಂದ್ರ ಮೋದಿಯ ಭಕ್ತ - ಡಾ.ಅನಂತ್ನಾಗ್, ನಟ
ಆ ಮನುಷ್ಯ ಇಂತಹ ಹೊಲಸು ಬೊಗಳೆಯನ್ನೂ ನಂಬುವಷ್ಟು ಮೂರ್ಖ ಎಂದುಕೊಂಡಿದ್ದೀರಾ?
ಕಾಂಗ್ರೆಸ್ ಈಗ ಬಡವರ ಪಕ್ಷ ಆಗಿ ಉಳಿದಿಲ್ಲ - ಕೆ.ಎಸ್.ಈಶ್ವರಪ್ಪ, ಶಾಸಕ
ಶ್ರೀಮಂತರ ಪಕ್ಷವಾಗುವುದು ಕೇವಲ ಬಿಜೆಪಿಯ ಹಕ್ಕೇ?
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.