ಓ ಮೆಣಸೇ...
-

ಪ್ರಜಾಪ್ರಭುತ್ವದಲ್ಲಿ ಹಣ, ಸೀರೆ,ಕುಕ್ಕರ್ ಹಂಚಿದರೆ ರಾಜಕಾರಣದಲ್ಲಿ ಒಳ್ಳೆಯವರು ಆರಿಸಿ ಬರಲು ಸಾಧ್ಯವಿಲ್ಲ -ಬಸವರಾಜ ಹೊರಟ್ಟಿ, ವಿ.ಪ.ಸಭಾಪತಿ
ಏನನ್ನೂ ಕೊಡದವರು ಬಂದರೆ, ಅವರು ಒಳ್ಳೆಯವರಾಗಿದ್ದರೂ ಜನತೆಗೇನು ಲಾಭ?
ಈ ಚುನಾವಣೆಯಲ್ಲಿ ಮನೆ ಸೇರದೆ ರಾಜ್ಯವ್ಯಾಪಿ ಸುತ್ತಾಡಿ 145 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸಿ ಪ್ರಧಾನಿ ಮೋದಿಗೆ ಉಡುಗೊರೆ ನೀಡುವೆ- ಯಡಿಯೂರಪ್ಪ, ಮಾಜಿ ಸಿಎಂ
ಉಳಿದ ನೂರು ಕ್ಷೇತ್ರಗಳನ್ನು ರಾಹುಲ್ ಗಾಂಧಿಗೆ ಉಡುಗೊರೆ ನೀಡುವ ಯೋಚನೆಯೇ?
ಕಾಂಗ್ರೆಸ್ನವರು ಮಾನಸಿಕವಾಗಿ ದಿವಾಳಿಯಾಗಿದ್ದಾರೆ- ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ಅವರೇನೇ ಇರಲಿ ದೇಶವನ್ನು ದೀವಾಳಿ ಎಬ್ಬಿಸಿಲ್ಲ.
ಒಂದು ಕಾಲದಲ್ಲಿ ಕಾಂಗ್ರೆಸಿಗರು ಯಡಿಯೂರಪ್ಪರನ್ನು ಸೋಲಿಸುವುದಕ್ಕೆ ಮಾತ್ರವಲ್ಲ ಕೊಲ್ಲುವುದಕ್ಕೂ ಪ್ರಯತ್ನಿಸಿದ್ದರು. - ಸಿ.ಟಿ.ರವಿ, ಶಾಸಕ
ಆಗ ನೀವು ಆ ಕಾಂಗ್ರೆಸ್ ಗ್ಯಾಂಗ್ನ ಸದಸ್ಯರಾಗಿದ್ದರಿಂದ ಅಷ್ಟು ದೊಡ್ಡ ಮಾಹಿತಿಯನ್ನು ಈಗ ಬಹಿರಂಗಪಡಿಸುತ್ತಿರುವುದೇ?
ಕಾಂಗ್ರೆಸ್ನ ಸದ್ಯದ ಪರಿಸ್ಥಿತಿ, ದೀಪ ಆರುವ ಮುನ್ನ ಜೋರಾಗಿ ಉರಿಯುವ ಹಾಗಿದೆ- ಬಿ.ವೈ.ವಿಜಯೇಂದ್ರ, ಬಿಜೆಪಿ ಉಪಾಧ್ಯಕ್ಷ
ನಿಮಗೆ ಕಾಂಗ್ರೆಸ್ ದೀಪವು ಜೋರಾಗಿ ಉರಿಯುವಂತೆ ಕಾಣುತ್ತಿದ್ದರೆ, ಅದು ನಿಮ್ಮ ಹತಾಶೆಯ ಸೂಚನೆ.
ಕವಿತಾ, ಸಿಸೋಡಿಯಾ, ಲಾಲು ಯಾರೇ ಆಗಿರಲಿ ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ - ಗೌರವ್ ಭಾಟಿಯಾ, ಬಿಜೆಪಿ ವಕ್ತಾರ
ಕಾನೂನಿಗಿಂತ ದೊಡ್ಡವರು ಎಂಬ ಗೌರವವನ್ನು ನೀವು ಮೋದಿ ಪಾಳಯದವರಿಗೆ ಮೀಸಲಿಟ್ಟಿರುವಿರಲ್ಲಾ!
ನನ್ನನ್ನು ಜೈಲಿಗೆ ಹಾಕಿ ತೊಂದರೆ ಕೊಡಬಹುದು ಆದರೆ ನನ್ನ ಆತ್ಮ ಸ್ಥೈರ್ಯವನ್ನು ಕುಗ್ಗಿಸಲು ಸಾಧ್ಯವಿಲ್ಲ - ಮನೀಶ್ ಸಿಸೋಡಿಯಾ, ದಿಲ್ಲಿ ಮಾಜಿ ಉಪ ಮುಖ್ಯಮಂತ್ರಿ
ನಿಮ್ಮನ್ನು ಜೈಲಿಗೆ ಕಳಿಸಬಯಸುವವರು ಕಳಿಸಿದ್ದಾರೆ. ನಿಮ್ಮ ಆತ್ಮಸ್ಥೈರ್ಯ ಹೇಗಿದ್ದರೆ ಅವರಿಗೇನಂತೆ?
ಪಕ್ಷದ ಸಿದ್ಧಾಂತದ ತಳಹದಿ ಮೇಲೆ ಚುನಾವಣೆಗೆ ಹೋಗುತ್ತೇನೆ ಹೊರತು, ಕೌಟುಂಬಿಕ ವಿಚಾರಗಳನ್ನು ಅನುಸರಿಸುವುದಿಲ್ಲ - ಸತೀಶ್ ಜಾರಕಿ ಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ
ಮತದಾರರು ಮತನೀಡುವುದು ವ್ಯಕ್ತಿಗಳಿಗೆ ಹೊರತು ಸಿದ್ಧಾಂತಗಳಿಗಲ್ಲ.
ಕಾಂಗ್ರೆಸ್ಗೆ ತಾಕತ್ತು, ದಮ್ಮು ಇದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಲಿ - ಶ್ರೀರಾಮುಲು, ಸಚಿವ
ಮುಂದಿನ ಪ್ರತಿಪಕ್ಷ ನಾಯಕ ಯಾರೆಂದು ನೀವು ಘೋಷಿಸಿದರೆ ಉಳಿದ ವಿವರಗಳನ್ನು ಅವರು ಘೋಷಿಸಬಹುದು.
ಚಾಣಕ್ಯನ ಸೂತ್ರದ ಪ್ರಕಾರ ವಿದೇಶಿ ಮಹಿಳೆಗೆ ಜನಿಸಿದ ಮಗ ದೇಶ ಪ್ರೇಮಿಯಾಗಲಾರ ಎನ್ನುವುದನ್ನು ರಾಹುಲ್ ಗಾಂಧಿ ಸಾಬೀತು ಮಾಡಿದ್ದಾರೆ- ಪ್ರಜ್ಞಾ ಸಿಂಗ್ ಠಾಕೂರ್, ಸಂಸದೆ
ತಾವು ಭಯೋತ್ಪಾದಕ ಚಟುವಟಿಕೆಗಳಲ್ಲಿ ಸಿಕ್ಕಿಬಿದ್ದ ಬಗ್ಗೆ ಚಾಣಕ್ಯ ಸೂತ್ರದಲ್ಲೇನಿದೆ?
ರಾಜಕೀಯ ಎಂದರೆ ನಾವು ಏನು ಅಂದುಕೊಳ್ಳುತ್ತೇವೋ ಅದು ಅಲ್ಲವೇ ಅಲ್ಲ - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಹೌದು. ರಾಜಕೀಯವೆಂದರೆ ಕೇವಲ ಆಡಳಿತ ಪಕ್ಷವಲ್ಲ. ಪ್ರತಿಪಕ್ಷ ಎಂಬೊಂದು ಪಕ್ಷವೂ ಅಲ್ಲಿರುತ್ತದೆ. ಹಲವಾರು ವರ್ಷ ಅಲ್ಲೂ ಇರಬೇಕಾಗುತ್ತದೆ.
ಮುಂದಿನ 25ವರ್ಷ ಯಡಿಯೂರಪ್ಪರ ಮಾರ್ಗದರ್ಶನದಲ್ಲೇ ಮುನ್ನಡೆಯುತ್ತೇನೆ- ವಿ.ಸೋಮಣ್ಣ, ಸಚಿವ
ಆನಂತರದ ನೂರಿನ್ನೂರು ವರ್ಷಗಳ ಬಗ್ಗೆಯೂ ಈಗಲೇ ತಿಳಿಸಿಬಿಡಿ.
ರಾಷ್ಟ್ರೀಯವಾದಿ ಮುಸ್ಲಿಮರು ನಮ್ಮ ಜೊತೆಗಿದ್ದಾರೆ - ಕೆ ಎಸ್.ಈಶ್ವರಪ್ಪ, ಶಾಸಕ
ಅದು ನಿಮಗೆ ರಾಷ್ಟ್ರೀಯವಾದವನ್ನು ಕಲಿಸುವ ಪ್ರಯತ್ನದ ಭಾಗವಾಗಿರಬಹುದು.
ಎರಡು ಟಿಕೆಟ್ ಕೇಳುವುದಿಲ್ಲ. ನನಗೆ ಅಥವಾ ನನ್ನ ಮಗನಿಗೆ ಒಂದೇ ಟಿಕೆಟ್ ಎಂದು ನಮ್ಮ ಮನೆಯಲ್ಲಿ ತೀರ್ಮಾನ ಮಾಡಿದ್ದೇವೆ- ಕೆ.ಎಸ್ . ಈಶ್ವರಪ್ಪ, ಶಾಸಕ
ಒಂದೇ ಟಿಕೆಟ್ ಇದ್ದರೆ ಥಿಯೇಟರ್ ನಲ್ಲಿ ಇಬ್ಬರನ್ನು ಒಳಗೆ ಬಿಡುತ್ತಾರೆಯೇ?
ಭಾರತಕ್ಕೆ ಸುಶಿಕ್ಷಿತ ಪ್ರಧಾನಿಯ ಅಗತ್ಯವಿದೆ- ಅರವಿಂದ ಕ್ರೇಜಿವಾಲ್, ದಿಲ್ಲಿ ಸಿಎಂ
ಅತ್ಯುನ್ನತ ಶಿಕ್ಷಣವಿದ್ದವರು ಪ್ರಧಾನಿಯಾಗಿದ್ದಾಗ, ನಿಮ್ಮ ಸಾಮರ್ಥ್ಯವೆಲ್ಲಾ ಅವರನ್ನು ಇಳಿಸುವುಕ್ಕೆ ಮೀಸಲಾಗಿತ್ತಲ್ಲಾ?
ಸಚಿವರಾದ ಅಶೋಕ್ ಮತ್ತು ಅಶ್ವತ್ಥನಾರಾಯಣ ಸಂಶೋಧನೆ ಮಾಡಿಯೇ ಮರಿಗೌಡ ಟಿಪ್ಪು ಸುಲ್ತಾನನನ್ನು ಕೊಂದಿದ್ದು ಎಂದಿದ್ದಾರೆ- ಮುನಿರತ್ನ, ಸಚಿವ
ಆರೆಸ್ಸೆಸ್ ನ ಹಳೆಯ ಕಪಾಟುಗಳಲ್ಲಿ ನಡೆಸುವ ಹುಡುಕಾಟಕ್ಕೆ ಶೋಧನೆ ಅನ್ನುವುದಿಲ್ಲ.
ರೌಡಿ ಶೀಟರ್ ಫೈಟರ್ ರವಿ ಯಾರೆಂದು ಪ್ರಧಾನಿಗೆ ಗೊತ್ತಿರಲಿಲ್ಲ. ಸ್ಥಳೀಯರ ಕಣ್ತಪ್ಪಿನಿಂದ ಸ್ವಾಗತ ಪಟ್ಟ ಯಲ್ಲಿ ಲೋಪವಾಗಿದೆ - ಶೋಭಾ ಕರಂದ್ಲಾಜೆ , ಕೇಂದ್ರ ಸಚಿವೆ
ಆತ ಯಾರೆಂದು ಅವರಿಗೆ ಗೊತ್ತಾಗಿ ಬಿಟ್ಟರೆ ಆತನಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ.
ಭಾರತದಲ್ಲಿ ಅಸಹಿಷ್ಣುತೆ ಇದೆ ಎನ್ನುವುದೇ ಒಂದು ಡೋಂಗಿ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಅಸಹಿಷ್ಣುತೆ ಇದೆ ಎಂಬ ಹೇಳಿಕೆಯ ಬಗ್ಗೆ ನಿಮ್ಮ ಆಕ್ರೋಶ ಎಲ್ಲವನ್ನೂ ಬಹಿರಂಗಪಡಿಸುತ್ತದೆ.
ಮಾತೃ ಭಾಷೆ ಮತ್ತು ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉನ್ನತ ಶಿಕ್ಷಣದಲ್ಲಿ ಮೊದಲು ಜಾರಿಗೆ ತಂದದ್ದು ಕರ್ನಾಟಕದಲ್ಲಿ - ಥಾವರ್ಚಂದ್ ಗ್ಲೆಹೋಟ್, ರಾಜ್ಯಪಾಲ
ಬಿಜೆಪಿಯ ಎಲ್ಲ ಕಸಗಳಿಗೂ ಮೊದಲ ತೊಟ್ಟಿ ಕರ್ನಾಟಕ ಎನ್ನುವುದು ಬಿಜೆಪಿ ನಾಯಕರಿಗೆ ಮನವರಿಕೆ ಆಗಿದೆ.
ಪ್ರತಿಯೊಬ್ಬರಲ್ಲಿ ಪ್ರೀತಿ, ವಿಶ್ವಾಸ, ನಂಬಿಕೆ ಇದ್ದರೆ ಅಪರಾಧಗಳು ಕಡಿಮೆಯಾಗುತ್ತವೆ- ಎಸ್.ಅಂಗಾರ, ಸಚಿವ
ಪ್ರೀತಿ ವಿಶ್ವಾಸವನ್ನು ರಾಜಕಾರಣಿಗಳು ಕೆಡಿಸಲು ಏಕಿಷ್ಟು ಆತುರರಾಗಿದ್ದಾರೆ ಎನ್ನುವುದು ಅರ್ಥವಾಯಿತು.
ನನ್ನ ಬಳಿ ಸಾಕಷ್ಟು ಸೀಡಿಗಳಿವೆ. ಆದರೆ ಅದರಿಂದ ಇನ್ನೊಬ್ಬರ ವೈಯಕ್ತಿಕ ಜೀವನ ಹಾಳಾಗಬಾರದು ಎಂದು ಬಿಡುಗಡೆ ಮಾಡುತ್ತಿಲ್ಲ- ರಮೇಶ್ ಜಾರಕಿ ಹೊಳಿ, ಮಾಜಿ ಸಚಿವ
ಹಾಳಾಗುವುದಕ್ಕೆ ಏನೂ ಉಳಿದಿಲ್ಲ ಎಂದು ನಿಮ್ಮ ಅಶ್ಲೀಲ ಸಿಡಿ ಬಿಡುಗಡೆ ಮಾಡಿರಬೇಕು.
ಮನೆ ಯಜಮಾನಿಗೆ ಎರಡು ಸಾವಿರ ರೂ. ನೀಡುವ ಕಾಂಗ್ರೆಸ್ ಗ್ಯಾರಂಟಿ ಯೋಜನೆ ಅತ್ತೆ-ಸೊಸೆಯಂದಿರ ನಡುವೆ ಜಗಳಕ್ಕೆ ಕಾರಣವಾಗಲಿದೆ - ಸಿ.ಎಂ. ಇಬ್ರಾಹೀಂ, ಜೆಡಿಎಸ್ ಅಧ್ಯಕ್ಷ
ನಿಮ್ಮ ಮನೆಯ ಅತ್ತೆ ಸೊಸೆಯರಂತೆ ಎಲ್ಲರ ಮನೆಯವರು ಇರಬೇಕಾಗಿಲ್ಲ.
ಗೆಲ್ಲುವ ಪಕ್ಷದಲ್ಲಿ ಟಿಕೆಟ್ಗಾಗಿ ಪೈಪೋಟಿ ಇರುವುದು ಸಹಜ - ಬಸವರಾಜ ಬೊಮ್ಮಾಯಿ, ಸಿಎಂ
ಶೇ.40 ಕಮಿಷನ್ ಪಕ್ಷದಲ್ಲಿ ಗೆದ್ದರೆ ಹೆಚ್ಚು ಲಾಭ ಎಂದು ಟಿಕೆಟ್ ಆಕಾಂಕ್ಷಿಗಳು ಪೈಪೋಟಿಗಿಳಿದಿರಬೇಕು.
ಮುಂದಿನ ವರ್ಷ 9,10ನೇ ತರಗತಿಗಳಿಗೂ ಮೊಟ್ಟೆ ನೀಡಲು ನಿರ್ಧರಿಸಲಾಗಿದೆ - ಬಿ.ಸಿ.ನಾಗೇಶ್, ಸಚಿವ
ರಾಜಕಾರಣಿಗಳು ತಿಂದು ಉಳಿದರೆ ಮಾತ್ರ.
ಕಾಂಗ್ರೆಸ್ನಲ್ಲಿ ಸಂಸ್ಕಾರವಿಲ್ಲದ ವ್ಯಕ್ತಿಗಳಿದ್ದಾರೆ- ಶ್ರೀರಾಮುಲು, ಸಚಿವ
ಬಿಜೆಪಿಯಲ್ಲಿ ಸಂಸ್ಕಾರ ಇದ್ದ ವ್ಯಕ್ತಿಗಳು ಇಲ್ಲ ಎನ್ನುವುದು ಆರೋಪ.
ಮದುವೆ ಎನ್ನುವುದು ದೈಹಿಕ ಹಾಗೂ ಮಾನಸಿಕ ಮೋಜಿನ ಕ್ರಿಯೆಯಲ್ಲ, ಅದೊಂದು ಪವಿತ್ರ ಬಾಂಧವ್ಯ ಹಾಗೂ ಸಂಸ್ಕಾರ - ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್ ಪ್ರ.ಕಾರ್ಯದರ್ಶಿ
ಆರೆಸ್ಸೆಸ್ ಸೇರುವುದೇ ಮದುವೆ ಆಗದೆ ಮೋಜು ಮಾಡುವುದಕ್ಕೆ ಇರಬೇಕು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.