ಆಸಾರಾಂ ಲೈಂಗಿಕ ಕಿರುಕುಳ ಪ್ರಕರಣ: ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ಹತ್ಯೆ ಬೆದರಿಕೆ!
ಶಹಜಹಾನ್ಪುರ, ಮಾರ್ಚ್.20: ಉತ್ತರಪ್ರದೇಶದ ಶಹಜಹಾನ್ಪುರದಲ್ಲಿ ಆಸಾರಾಂ ಬಾಪು ಪ್ರಕರಣದ ಮುಖ್ಯ ಸಾಕ್ಷಿಯ ಹತ್ಯೆಯಾದ ನಂತರ ಲೈಂಗಿಕ ಕಿರುಕುಳ ಮೊಕದ್ದಮೆ ವಾಪಸು ಪಡೆಯದಿದ್ದರೆ ಇಡೀ ಕುಟುಂಬವನ್ನೇ ಕೊಲೆಗೈಯುವುದಾಗಿ ಲೈಂಗಿಕ ಕಿರುಕುಳ ಸಂತ್ರಸ್ತೆಯೊಬ್ಬಳ ತಂದೆಗೆ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ.
ಪೊಲೀಸ್ ಅಧಿಕ್ಷಕ ರಾಜೇಶ್ ಕುಮಾರ್ ತಿಳಿಸಿರುವ ಪ್ರಕಾರ ಆಸಾರಾಂ ಬಾಪುರಿಂದ ಲೈಂಗಿಕ ಕಿರುಕುಳಕ್ಕೊಳಗಾದ ದೂರಿತ್ತ ಬಾಲಕಿಯ ತಂದೆ ಕರ್ಮವೀರ್ಗೆ ಮಧ್ಯಾಹ್ನ ಯಾವನೋ ಅಜ್ಞಾತ ವ್ಯಕ್ತಿ ಬೆದರಿಕೆ ಹಾಕಿದ್ದು ,ಆಸಾರಾಂರ ವಿರುದ್ಧ ದಾಖಲಿಸಿರುವ ಮೊಕದ್ದಮೆ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ನಿನ್ನನ್ನು ನಿನ್ನ ಕುಟುಂಬವನ್ನು ಸರ್ವನಾಶ ಮಾಡುತ್ತೇನೆಂದು ಬೆದರಿಕೆ ಹಾಕಿದ್ದಾನೆ.
ಬೆದರಿಕೆಗೆ ಹೆದರಿದ ಕುಟುಂಬ ಕೂಡಲೇ ಈ ಕುರಿತು ಪೊಲೀಸರಿಗೆ ತಿಳಿಸಿದ್ದಾರೆ. ಅಜ್ಞಾತ ವ್ಯಕ್ತಿಯ ವಿರುದ್ಧ ಕೊಲೆ ಬೆದರಿಕೆ ಹಾಕಿದ ದೂರನ್ನು ದಾಖಲಿಸಿಕೊಂಡಿದ್ದಾರೆ. ಆಸಾರಾಂ ಬಾಪು ಪ್ರಕರಣದ ಮುಖ್ಯ ಸಾಕ್ಷಿಯನ್ನು 2015 ಜುಲೈ ಹತ್ತರಂದು ಇದೇ ಪಟ್ಟಣದಲ್ಲಿ ಗುಂಡಿಟ್ಟು ಸಾಯಿಸಲಾಗಿತ್ತು. ಈ ಪ್ರಕರಣದಲ್ಲಿ ಗುಜರಾತ್ ಎಸ್ಟಿಎಫ್ ಪೊಲೀಸರು ಕಾರ್ತಿಕ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.