ಎನ್ಐಎಗೆ ಕಪಾಳಮೋಕ್ಷ , ಕರ್ಕರೆ ತನಿಖೆಗೆ ಮನ್ನಣೆ ನೀಡಿದ ನ್ಯಾಯಾಲಯ
ಸಾಧ್ವಿ ಪ್ರಜ್ಞಾಗೆ ಜಾಮೀನು ನಿರಾಕರಣೆ
ಮುಂಬೈ: 2008 ಮಾಲೆಗಾಂವ್ ಸ್ಫೋಟದ ಆರೋಪಿ ಸಾಧ್ವಿ ಪ್ರಜ್ಞಾ ಠಾಕೂರ್ಗೆ ಜಾಮೀನು ನೀಡಲು ಮುಂಬೈನ ವಿಶೇಷ ನ್ಯಾಯಾಲಯ ನಿರಾಕರಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯು ಸಾಧ್ವಿ ವಿರುದ್ಧ ಆರೋಪಗಳನ್ನು ನಿರಾಕರಿಸಿರುವುದನ್ನು ನ್ಯಾಯಾಲಯವು ಪ್ರಶ್ನಿಸಿದೆ.
1. ಎನ್ಐಎ ನಿರ್ಧಾರವನ್ನು ತಿರಸ್ಕರಿಸಿದ ನ್ಯಾಯಾಲಯ ಪ್ರಜ್ಞಾ ವಿರುದ್ಧ ಕಠಿಣ ಮಹಾರಾಷ್ಟ್ರದ ವ್ಯವಸ್ಥಿತ ಅಪರಾಧ ಕಾಯ್ದೆ ನಿಯಂತ್ರಣದ(ಮೋಕಾ) ಅಡಿಯಲ್ಲಿ ಹೇರಲಾದ ಆರೋಪಗಳು ಉಳಿದುಕೊಳ್ಳಲಿವೆ ಎಂದು ಹೇಳಿದೆ.
2. ಪ್ರಜ್ಞಾ ವಿರುದ್ಧ ಪ್ರಾಥಮಿಕವಾಗಿ ದಾಖಲಿಸಲಾದ ಆರೋಪಗಳು ಸರಿಯೆಂದು ಸೂಕ್ತ ನೆಲೆಯಲ್ಲಿ ತಿಳಿಯಲಾಗಿದೆ. ಎನ್ಐಎ ಸಾಧ್ವಿ ಪ್ರಜ್ಞಾಗೆ ಕ್ಲೀನ್ ಚಿಟ್ ಕೊಟ್ಟಿದೆ ಎಂದು ಜಾಮೀನು ಕೊಡುವುದು ಕಷ್ಟ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
3. ಕಳೆದ ತಿಂಗಳು ಹೊಸ ಚಾರ್ಜ್ಶೀಟ್ನಲ್ಲಿ ಎನ್ಐಎ ಸಾಧ್ವಿ ಪ್ರಜ್ಞಾ ಮತ್ತು ಇತರ ಐವರ ವಿರುದ್ಧ ಸೂಕ್ತ ಸಾಕ್ಷ್ಯಗಳಿಲ್ಲ ಎಂದು ಆರೋಪಗಳನ್ನು ಕೈಬಿಟ್ಟಿತ್ತು.
4. 2011ರಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಎನ್ಐಎ ಮಹಾರಾಷ್ಟ್ರ ಭಯೋತ್ಪಾದಕ ವಿರೋಧಿ ದಳದ ತನಿಖೆಯನ್ನು ಮುಂದುವರಿಸುವುದು ಬಿಟ್ಟು ಹೊಸದಾಗಿ ತನಿಖೆ ನಡೆಸಿದೆ ಎಂದು ನ್ಯಾಯಾಲಯ ಹೇಳಿದೆ.
5. 2008 ಸೆಪ್ಟಂಬರ್ 29ರಂದು ಮುಂಬೈನಿಂದ 270 ಕಿ.ಮೀ. ದೂರದ ಮಾಲೆಗಾಂವ್ನಲ್ಲಿ ಬೈಕಿನಲ್ಲಿ ಇಟ್ಟ ಎರಡು ಬಾಂಬುಗಳು ಸ್ಫೋಟಗೊಂಡಾಗ ಏಳು ಮಂದಿ ಸಾವನ್ನಪ್ಪಿದ್ದಲ್ಲದೆ 101 ಮಂದಿ ಗಾಯಗೊಂಡಿದ್ದರು.
6. ಈ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ, ಸೇನಾ ಕರ್ನಲ್ ಶ್ರೀಕಾಂತ್ ಪುರೋಹಿತ್ ಮತ್ತು ಇತರರನ್ನು ಬಂಧಿಸಲಾಯಿತು. ಹಿಂದುತ್ವ ಸಂಘಟನೆ ಅಭಿನವ್ ಭಾರತ ಸಂಘಟನೆಗಾಗಿ ಇವರು ಬಾಂಬ್ ಸ್ಫೋಟಿಸುವ ಯೋಜನೆ ರೂಪಿಸಿದ್ದರು ಎಂದು ಆರೋಪಿಸಲಾಗಿದೆ.
7. ಈ ದಾಳಿಯಲ್ಲಿ ಸಾದ್ವಿ ಪ್ರಜ್ಞಾರ ಬೈಕನ್ನು ಬಳಸಲಾಗಿದೆ ಎಂದು ಭಯೋತ್ಪಾದನೆ ವಿರೋಧಿ ಸಂಘಟನೆ ಹೇಳಿದೆ. ಲೆಫ್ಟಿನಂಟ್ ಕರ್ನಲ್ ಪುರೋಹಿತ್ ಮತ್ತು ಸಾಧ್ವಿ ಪ್ರಜ್ಞಾ ಅವರು 2007ರ ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟದ ಮುಖ್ಯ ಆರೋಪಿ ಸ್ವಾಮಿ ಅಸೀಮಾನಂದ್ ಅವರನ್ನೂ ಭೇಟಿಯಾಗಿ ಯೋಜನೆ ರೂಪಿಸಿದ್ದರು ಎಂದು ತನಿಖೆ ಹೇಳಿದೆ. ಆದರೆ ಆನಂತರ ಬಹಳಷ್ಟು ಸಾಕ್ಷಿಗಳು ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದರು.
8. ಎನ್ಐಎ ತನ್ನ ತನಿಖೆಯಲ್ಲಿ ಸಾಧ್ವಿ ಪ್ರಜ್ಞಾ ವಿರುದ್ಧ ಸಾಕಷ್ಟು ಸಾಕ್ಷ್ಯಗಳು ಇಲ್ಲ ಎಂದು ಹೇಳಿದೆ. ಆಕೆಯ ಹೆಸರಲ್ಲಿ ನೋಂದಾಯಿಸಲಾಗಿದ್ದ ಬೈಕ್ ಬಳಸಿದ ಆರೋಪಿ ಕಣ್ಮರೆಯಾಗಿರುವುದಾಗಿಯೂ ತನಿಖೆ ಹೇಳಿದೆ.
9. ಸಾಧ್ವಿ ಮತ್ತು ಕರ್ನಲ್ ಪುರೋಹಿತ್ ಅವರನ್ನು ಕಾಂಗ್ರೆಸ್ ಕೇಸರಿ ಭಯೋತ್ಪಾದನೆಯ ಮುಖಗಳು ಎಂದು ಹೇಳಿದೆ. ಈಗ ಏಳು ವರ್ಷಗಳಿಂದ ಇವರಿಬ್ಬರೂ ಜೈಲಿನಲ್ಲಿದ್ದಾರೆ.
10. ಈ ಪ್ರಕರಣವನ್ನು ಮೊದಲಿಗೆ ಮಹಾರಾಷ್ಟ್ರದ ಭಯೋತ್ಪಾದನಾ ವಿರೋಧಿ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ತನಿಖೆ ನಡೆಸುತ್ತಿದ್ದರು. ಅವರು 2008 ನವೆಂಬರ್ 26ರಂದು ಲಷ್ಕರೆ ತೊಯ್ಬಾ ಭಯೋತ್ಪಾದಕರು ಮುಂಬೈ ಮೇಲೆ ದಾಳಿ ನಡೆಸಿದಾಗ ಕೊಲೆಯಾಗಿದ್ದರು.
http://www.ndtv.com/