ಸೋನಿಯಾ ಗಾಂಧಿ, ರಾಜನಾಥ್ ಸಿಂಗ್ ಸಹಿತ ಆರು ಮಂದಿಗೆ ಮಾಹಿತಿ ಆಯೋಗದಿಂದ ನೋಟಿಸ್
ಹೊಸದಿಲ್ಲಿ,ಜುಲೈ 18: ಆರು ರಾಜಕೀಯ ಪಕ್ಷಗಳ ಉನ್ನತ ರಾಜಕೀಯ ನಾಯಕರಿಗೆ ಕೇಂದ್ರೀಯ ಮಾಹಿತಿ ಆಯೋಗ (ಸಿಐಸಿ) ನೋಟಿಸ್ ಕಳುಹಿಸಿದೆ ಎಂದು ವರದಿಯಾಗಿದೆ. ರಾಜನಾಥ್ ಸಿಂಗ್, ಮಾಯಾವತಿ, ಸೋನಿಯಾ ಗಾಂಧಿ, ಪ್ರಕಾಶ್ ಕಾರಟ್, ಶರದ್ ಪವಾರ್ ಮತ್ತು ಸುಧಾಕರ್ ರೆಡ್ಡಿಯವರ ವಿರುದ್ಧ ಆರ್ಟಿಐ ಪ್ರಶ್ನೆಗಳಿಗೆ ಉತ್ತರಿಸದಿದ್ದುದಕ್ಕಾಗಿ ಆರ್ಟಿಐ ಕಾರ್ಯಕರ್ತರು ದೂರುದಾಖಲಿಸಿದ್ದು ಆಯೋಗ ಇದೀಗ ತನ್ನ ಮುಂದೆ ಹಾಜರಾಗುವಂತೆ ಇವರಿಗೆ ನೋಟಿಸು ಜಾರಿಗೊಳಿಸಿದೆ ಎಂದು ವರದಿ ವಿವರಿಸಿದೆ.
ಆರ್ಟಿಐ ಕಾಯಕರ್ತ ಆರ್.ಕೆ ಜೈನ್ ಅವರು ಆಯೋಗದ ರಿಜಿಸ್ಟ್ರಾರ್ ಕೇವಲ ಸೊನಿಯಾಗಾಂಧಿಗೆ ನೋಟಿಸ್ ಕಳುಹಿಸಿ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ನಂತರ ಆರು ಪಕ್ಷಗಳ ನಾಯಕರಿಗೆ ಮಾಹಿತಿ ಆಯೋಗ ನೋಟಿಸ್ ಕಳುಹಿಸಿದೆಯೆಂದು ತಿಳಿದು ಬಂದಿದೆ. 2013ರಲ್ಲಿ ಈ ಪಕ್ಷಗಳುಆರ್ಟಿಐ ವ್ಯಾಪ್ತಿಗೆ ಬರುತ್ತದೆ ಎಂದು ಮಾಹಿತಿ ಆಯೋಗ ಘೋಷಿಸಿತ್ತು. ಆನಂತರ 2014ರಲ್ಲಿ ಆರ್ಕೆಜೈನ್ ಕಾಂಗ್ರೆಸ್ ಹಾಗೂಇತರ ಪಕ್ಷಗಳಿಗೆ ಆರ್ಟಿಐ ಅರ್ಜಿ ಸಲ್ಲಿಸಿ ಅದರ ದೇಣಿಗೆ, ಆಂತರಿಕ ಚುನಾವಣೆ ಇತ್ಯಾದಿ ಮಾಹಿತಿಯನ್ನು ತಿಳಿಸಬೇಕೆಂದು ವಿನಂತಿಸಿಕೊಂಡಿದ್ದರು. ಆದರೆ ಯಾವ ಪಕ್ಷವೂ ಅವರು ಕೇಳಿದ ಮಾಹಿತಿ ಒದಗಿಸಿದ್ದುದರಿಂದ ಅವರು ಆಯೋಗದ ಮುಂದೆ ದೂರು ಸಲ್ಲಿಸಿದ್ದರು. ಆಯೋಗ ಇದೀಗ ರಾಜಕೀಯ ಪಕ್ಷದ ಎಲ್ಲ ನಾಯಕರು ಜುಲೈ 22ರಂದು ಆಯೋಗದ ಪೂರ್ಣ ಪೀಠದ ಮುಂದೆ ಹಾಜರಾಗಬೇಕೆಂದು ನೋಟಿಸ್ ಜಾರಿಗೊಳಿಸಿದೆಎಂದು ವರದಿ ತಿಳಿಸಿದೆ.