ದಾದ್ರಿ ಹತ್ಯೆ ಆರೋಪಿ ಮೃತದೇಹಕ್ಕೆ ರಾಷ್ಟ್ರಧ್ವಜ: ಸಾಮಾಜಿಕ ತಾಣಗಳಲ್ಲಿ ಆಕ್ರೋಶ
ಉತ್ತರಪ್ರದೇಶ, ಅ.6: ದಾದ್ರಿ ಹತ್ಯೆಪ್ರಕರಣದ ಪ್ರಮುಖ ಆರೋಪಿಗಳಲ್ಲೊಬ್ಬ ಇತ್ತೀಚೆಗೆ ಡೆಂಗ್ ಜ್ವರದಿಂದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆತನ ಮೃತದೇಹಕ್ಕೆ ಬಿಶಾಡದ ಗ್ರಾಮಸ್ಥರು ರಾಷ್ಟ್ರಧ್ವಜ ಹೊದಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಬಂಧ ನಡೆದ ಸಭೆಯೊಂದರಲ್ಲಿ ಮಾತನಾಡಿದ ಹಲವರು ಇನ್ನೂ ಹತ್ಯೆಗಳನ್ನು ಮಾಡುವುದಾಗಿಯೂ ಬೆದರಿಕೆ ಹಾಕಿದ ಘಟನೆ ನಡೆದಿದೆಯೆಂಬುದಕ್ಕೆ ಸಾಕ್ಷಿಯೆಂಬಂತೆ ಪ್ರತೀಕ್ ಸಿನ್ಹಾ ಎಂಬವರು ವೀಡಿಯೊವೊಂದನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದಾರೆ.
ಭಾಷಣಕಾರರೊಬ್ಬರು ‘‘ನಾವು ಇದರ ಪ್ರತೀಕಾರ ತೀರಿಸುತ್ತೇವೆ, ಹಿಂದೂ ಸಹೋದರರು ಬಳೆ ತೊಟ್ಟಿಲ್ಲ. ಹಿಂದೂ ಸಹೋದರರು ಬಿಡಿ, ಹಿಂದೂ ಮಹಿಳೆಯರು ಕೂಡ ಅವರಿಗೆ ಪಾಠ ಕಲಿಸಲು ಸಶಕ್ತರು’’ ಎಂದು ಹೇಳುವುದು ವೀಡಿಯೋದಲ್ಲಿ ದಾಖಲಾಗಿದೆ.
ಆರೋಪಿ ರವಿ‘ಕಿಡ್ನಿ ವೈಫಲ್ಯ’ದಿಂದ ಬಳಲಿದ ನಂತರ ಆತನನ್ನುಉತ್ತರ ಪ್ರದೇಶದ ನೊಯ್ಡಾದ ಜಿಲ್ಲಾ ಆಸ್ಪತ್ರೆಯಿಂದ ದಿಲ್ಲಿಯ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಆಸ್ಪತ್ರೆಗೆ ಅಕ್ಟೋಬರ್ 4 ರಂದು ದಾಖಲಿಸಲಾಗಿತ್ತು. ಅದೇ ದಿನ ರಾತ್ರಿ ಆತ ಮೃತಪಟ್ಟ, ಎಂದು ದಿಲ್ಲಿ ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ಡಾ. ಜೆ ಸಿ ಪಾಸ್ಸಿ ಹೇಳಿದ್ದಾರೆ.
ಕೊಲೆ ಆರೋಪಿಯೊಬ್ಬನ ಮೃತದೇಹಕ್ಕೆ ರಾಷ್ಟ್ರಧ್ವಜವನ್ನು ಹೊದಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.